ಮೇಲುಕೋಟೆ: ಇಲ್ಲಿಯ ಚೆಲುವನಾರಾಯಣಸ್ವಾಮಿ ದೇವಾಲಯದ ಮಹಾದ್ವಾರದ ಹೊಸ್ತಿಲಿನಲ್ಲಿದ್ದ ವಿಗ್ರಹವೊಂದು ಭಗ್ನಗೊಂಡಿರುವುದು ಗುರುವಾರ ಪತ್ತೆಯಾಗಿದೆ.
ಕೇಂದ್ರ ಪುರಾತತ್ವ ಇಲಾಖೆಯಿಂದ ದೇವಾಲಯದ ಸುತ್ತ ನಡೆಯುತ್ತಿರುವ ಕಾಮಗಾರಿಯ ಸಂದರ್ಭದಲ್ಲಿ ಕಾರ್ಮಿಕರು ಅಮ್ಮನವರ ಸನ್ನಿಧಿಯ ಬಳಿಯಿದ್ದ ಭಾರಿಗಾತ್ರದ ಕಲ್ಲುಗಳನ್ನು ಹೊರಗೆ ಸಾಗಿಸುತ್ತಿದ್ದಾಗ ರಾಜಗೋಪುದ ತಳಭಾಗದ ಮಹಾದ್ವಾರದ ಹೊಸ್ತಿಲಿನ ಮೇಲೆ ಕಲ್ಲು ಬಿತ್ತು ಎನ್ನಲಾಗಿದೆ. ಪರಿಣಾಮವಾಗಿ ಮಹಾರಾಜರದ್ದೆಂದು ಹೇಳಲಾದ ವಿಗ್ರಹ ಭಗ್ನಗೊಂಡಿದೆ.
ಸುಂದರವಾಗಿ ಕೆತ್ತಲಾಗಿದ್ದ ಕಲ್ಲಿನ ಮುಂಭಾಗ ಸಂಪೂರ್ಣ ಒಡೆದು ಹೋಗಿ ಬೇರ್ಪಟ್ಟಿದೆ. ವಿಗ್ರಹದ ಕಾಲು ತುಂಡಾಗಿದೆ.ದೇವಾಲಯದಲ್ಲಿ ಅಮ್ಮನವರ ವರ್ಧಂತಿಯ ದಿನವಾದ ಬುಧವಾರದಂದೇ ವಿಗ್ರಹ ತುಂಡಾಗಿದೆ ಎನ್ನಲಾಗಿದ್ದು, ಭಕ್ತರಿಗೆ ಕಾಣದಂತೆ ಮರಳಿನ ಮೂಟೆಯಿಂದ ಮುಚ್ಚಲಾಗಿತ್ತು.
ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳು ಗಮ್ ಮೂಲಕ ತುಂಡಾದ ಕಲ್ಲಿನ ಭಾಗವನ್ನು ಅಂಟಿಸಲು ಯತ್ನಿಸುತ್ತಿದ್ದಾಗ ವಿಗ್ರಹ ತುಂಡಾಗಿರುವುದು ಭಕ್ತರ ಗಮನಕ್ಕೆ ಬಂದಿದೆ.
‘ಪುರಾತತ್ವ ಇಲಾಖೆ ನಿಯಮದಂತೆ ವಿಗ್ರಹ ಭಗ್ನವಾಗಲು ಕಾರಣವಾದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಶಂಕರ್ ಮತ್ತು ಪುಳಿಯೋಗರೆ ರವಿ ಆಗ್ರಹಿಸಿದ್ದಾರೆ. ಮೇಲುಕೋಟೆ ಠಾಣೆಗೆ ದೂರು ನೀಡುವುದಾಗಿಯೂ ತಿಳಿಸಿದ್ದಾರೆ.