ಕಲಬುರ್ಗಿ: ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬರುತ್ತಿದೆ.
ಇಲ್ಲಿನ ನೂತನ ವಿದ್ಯಾಲಯದ ಮೈದಾನದಲ್ಲಿ ಬೆಳಿಗ್ಗೆ 6ರಿಂದಲೇ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ದೂರದ ಊರುಗಳಿಂದ ಬರುತ್ತಿರುವ ಅವರ ಅಭಿಮಾನಿಗಳು, ಬೆಂಬಲಿಗರು ಮತ್ತು ಕಾರ್ಕರ್ತರು ಪುಷ್ಪಗುಚ್ಛ ಅರ್ಪಿಸಿ ಕಣ್ಣೀರಾಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಮಧ್ಯಾಹ್ನ 1ರಿಂದ 3ರವರೆಗೆ ಜೇವರ್ಗಿ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಸಂಜೆ 4ಕ್ಕೆ ಹುಟ್ಟೂರು ನೆಲೋಗಿಯ ತೋಟದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.
ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಪಾರ್ಥಿವ ಶರೀರವನ್ನು ಕಲಬುರ್ಗಿಯ ನೂತನ ವಿದ್ಯಾಲಯದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಮಾಜಿ ಸಿಎಂಗೆ ಅಂತಿಮ ನಮನ ಸಲ್ಲಿಸಲು ಜನಸಾಗರವೇ ಹರಿದುಬರುತ್ತಿದೆ. ಕಲಬುರ್ಗಿ, ಜೇವರ್ಗಿ ಸೇರಿದಂತೆ ಅಭಿಮಾನಿಗಳು ಪುಷ್ಪಗುಚ್ಚ ಇರಿಸಿ ನಮನ ಸಲ್ಲಿಸಿದರು.
ಅಂತ್ಯಸಂಸ್ಕಾರದಲ್ಲಿ ಸಿಎಂ ಭಾಗಿ: ನೆಲೋಗಿಯಲ್ಲಿ ಸಂಜೆ 4 ಗಂಟೆಗೆ ನೆರವೇರಲಿರುವ ಅಂತ್ಯಸಂಸ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು, ಶಾಸಕರು ಭಾಗವಹಿಸುವರು.