ಬೆಂಗಳೂರು: ಟಿ.ಎನ್.ಸೀತಾರಾಮ್ ನಿರ್ದೇಶನದ ಕಾಫಿ ತೋಟ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಕೊಲೆ ಹಾಗೂ ಅದರ ನಿಗೂಢತೆ ಚಿತ್ರದ ಕಥಾ ಎಳೆಯಾಗಿರುವುದನ್ನು ಟ್ರೇಲರ್ ಹೇಳುವಂತಿದೆ.
ಪ್ರಸ್ತುತ ಚಿತ್ರರಂಗದಲ್ಲಿ ಥ್ರಿಲ್ಲರ್ ಕಥೆಗಳಿಗೆ ಬೇಡಿಕೆಯಿದ್ದು, ಕಾಫಿ ತೋಟ ಕೂಡ ಅಂಥದ್ದೇ ಕಥೆಯನ್ನು ಒಳಗೊಂಡಿದೆ. ಎಲ್ಲಿಯೋ ನಡೆಯುವ ಕೊಲೆ, ಪ್ರಕರಣದಲ್ಲಿ ಸಿಲುಕುವ ಮುಗ್ದರು, ಆಸ್ತಿಗಾಗಿ ಹೊಂಚು ಹಾಕಿರುವ ಮತ್ತೊಬ್ಬರು, ನಡುವೆ ಅರಳಿ ಚಿಗುರುವ ಪ್ರೀತಿ,..ಹೀಗೆ ಟ್ರೇಲರ್ ವೀಕ್ಷಕರಿಗೆ ಕುತೂಹಲ ಕೆರಳಿಸಲು ಅಗತ್ಯವಿರುವ ಎಲ್ಲ ಆಯಾಮಗಳನ್ನು ತೆರೆದಿಟ್ಟಿದೆ.
ಮಲೆನಾಡು, ಕಡಲ ಕಿನಾರೆ, ತೋಟದಲ್ಲಿ ನಡೆಯುವ ಕಥೆಯು ದೃಶ್ಯದ ಸೊಬಗನ್ನು ಮತ್ತಷ್ಟು ಹೆಚ್ಚಿಸಿದೆ. ನಿರ್ದೇಶಕ ಸೀತಾರಾಮ್ ಮತ್ತೆ ವಕೀಲರಾಗಿ ಕಾಣಿಸಿಕೊಂಡಿದ್ದಾರೆ. ಕೊಲೆಯ ಪ್ರಕರಣದ ವಿಚಾರಣೆ ನಡೆಯುವ ಕೋರ್ಟ್, ಪೊಲೀಸ್ ಠಾಣೆ ಟಿಎನ್ಎಸ್ ಅವರ ಎಂದಿನ ಶೈಲಿಯನ್ನು ನೆನಪಿಸುತ್ತದೆ.
ಅಶೋಕ್ ಕಶ್ಯಪ್ ಛಾಯಾಗ್ರಹಣ, ಅನೂಪ್ ಸಿಳಿನ್ ಹಾಗೂ ಮಿದುನ್ ಮುಕುಂದನ್ ಸಂಗೀತವಿದೆ. ರಘು ಮುಖರ್ಜಿ, ರಾಧಿಕಾ ಚೇತನ್, ಸಂಯುಕ್ತಾ ಹೊರನಾಡು, ಬಿ.ಸಿ.ಪಾಟೀಲ್, ಸುಧಾ ಬೆಳವಾಡಿ, ವೀಣಾಸುಂದರ್, ಸುಂದರ್ ರಾಜ್ ಸೇರಿದಂತೆ ಹಲವು ಕಲಾವಿದರು ಕಾಣಿಸಿಕೊಂಡಿದ್ದಾರೆ.