ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು ಮತ್ತು ಪುಷ್ಪ ಪ್ರದರ್ಶನ

Last Updated 7 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಹೂವಿನಲ್ಲಿ ಅರಳುತ್ತಿರುವ ಕುಪ್ಪಳಿಯ ಕವಿಮನೆಯ ಚಿತ್ರವನ್ನು ‘ಪ್ರಜಾವಾಣಿ’ಯಲ್ಲಿ (ಆ. 1) ಕಂಡು ಸಂತೋಷವಾಯಿತು. ಕುವೆಂಪು ಅವರ ‘ಬಾ ಫಾಲ್ಗುಣ ರವಿ ದರ್ಶನಕೆ’ ಎಂಬ ಕವಿತೆಯನ್ನು ಕೇಳಿದ ಅವರ ಗುರುಗಳಾದ ಟಿ.ಎಸ್.ವೆಂಕಣ್ಣಯ್ಯನವರು ಕುರ್ಚಿಯಿಂದೆದ್ದು, ‘ಹೇಳ್ರಿ, ಹೇಳ್ರಿ, ಎಲ್ಲಿದೆ ಇಂತಹ ಕಾವ್ಯ? ಹಿಂದಿನವರಲ್ಲಾಗಲಿ, ಇಂದಿನವರಲ್ಲಾಗಲಿ’ ಎಂದು ಸವಾಲು ಹಾಕಿದ್ದರಂತೆ! ಕುವೆಂಪು ಅವರ ಸಾಹಿತ್ಯ ಸಾಗರದಲ್ಲಿ ಇಂತಹ ನಿಧಿ-ನಿಕ್ಷೇಪಗಳು ಸಾವಿರಾರು ಇವೆ. ಅವು ಪುಷ್ಪರೂಪದಲ್ಲೂ ಇವೆ ಎಂಬುದು ವಿಶೇಷ!

ನಿಸರ್ಗಪ್ರೇಮ ಎಂಬುದು ಕುವೆಂಪು ಅವರಿಗೆ ಉಸಿರಾಟದಷ್ಟೇ ಸಹಜವಾಗಿ ಇರುವಂಥದ್ದು. ಕಾವ್ಯದಲ್ಲೆಂತೋ ಅಂತೆಯೇ ಕುವೆಂಪು ಅವರ ಬದುಕಿನಲ್ಲೂ ಪ್ರಕೃತಿ ಹಾಸುಹೊಕ್ಕಾಗಿದೆ. ಮಲೆ, ಕಣಿವೆ, ಮಳೆ, ಕಾಡು, ಹೊಳೆ, ಹಸಿರು, ಚಿಗುರು, ಹೂವು, ಪಕ್ಷಿ, ಪ್ರಾಣಿ, ಕ್ರಿಮಿಕೀಟಾದಿಗಳು ಮನುಷ್ಯರಂತೆಯೇ ಅವರ ಸಾಹಿತ್ಯದಲ್ಲಿ ಮಹತ್ವದ ಪಾತ್ರಧಾರಿಗಳಾಗಿವೆ.

ಹಸುರತ್ತಲ್! ಹಸುರಿತ್ತಲ್! ಹಸುರೆತ್ತಲ್ ಕಡಲಿನಲಿ

ಹಸುರ್ಗಟ್ಟಿತೊ ಕವಿಯಾತ್ಮಂ ಹಸುರ್ನೆತ್ತರ್ ಒಡಲಿನಲಿ!
ಕವಿಯ ನರನಾಡಿಗಳಲ್ಲಿ ಹರಿಯುತ್ತಿರುವ ರಕ್ತವೂ ಹಸುರು! ಕವಿಯ ಆತ್ಮಕ್ಕೇನಾದರೂ ಮೂರ್ತರೂಪವಿದ್ದು ದಾದರೆ ಅದೂ ಹಸುರಾಗಿಯೇ ಇರುತ್ತದೆ. ಸ್ವತಃ ಕವಿಯೇ ಸಹ್ಯಾದ್ರಿಯ ಹಸುರೊಡಲಲಿ ಹುಟ್ಟಿ ಹಸುರ್‍ಮಡಿಲಲಿ ಪಲ್ಲವಿಸಿದ ಒಂದು ಪುಷ್ಪ. ಕವಿಯ ಪ್ರಥಮ ಕನ್ನಡ ಕವಿತೆಯ ಹೆಸರು ‘ಪೂವು’! ಕವಿತೆಗಳ ಹಸ್ತಪ್ರತಿ ಸಂಕಲನಕ್ಕೆ ಕವಿ ಇಟ್ಟಿದ್ದ ಹೆಸರು ‘ಪುಷ್ಪಗೀತೆ’! ಹಕ್ಕಿ, ಹೂವು, ಮಕ್ಕಳು ಇರದೆ ಇದ್ದರೆಆಗುತಿತ್ತು ನಮ್ಮ ಪೃಥಿವಿ ಬರಡು ಮರುಧರೆ!ಎಂಬುದು ಕವಿಯ ಸ್ಪಷ್ಟ ಅಭಿಮತ. ಕುಂಡದಲ್ಲರಳಿದ ಒಂದು ಗುಲಾಬಿಯಲ್ಲಿ ‘ಶ್ರೀಸೌಂದರಿ ತ್ರಿಜಗನ್ಮಾತೆ’ಯನ್ನು ಕಾಣುತ್ತಾರೆ. ‘ಬಾ, ನಮಸ್ಕರಿಸು, ಸೌಂದರ್ಯರೂಪಿ ಭಗವಂತನಿಲ್ಲಿ ಪುಷ್ಪವೇಷಿ’ ಎಂದು ಸಹೃದಯನನ್ನೂ ಆಹ್ವಾನಿಸುತ್ತಾರೆ. ಉದ್ಯಾನವನ್ನು ‘ಪುಷ್ಪಕಾಶಿ’ ಎಂದು ಕೊಂಡಾಡುವ ಕವಿಯ ಸುಮಾರು ಐವತ್ತಕ್ಕೂ ಹೆಚ್ಚು ಕವಿತೆಗಳಿಗೆ ಉದ್ಯಾನ ಹೂವುಗಳೇ ವಸ್ತುವಾಗಿವೆ!

‘ಉದಯರವಿ’ಯ ಮುಂಭಾಗದಲ್ಲಿ 45ಕ್ಕೂ ಅಧಿಕ ಬಗೆಯ ಗುಲಾಬಿಗಳು ಸೇರಿದಂತೆ ಸುಮಾರು 85ಕ್ಕೂ ಅಧಿಕ ಬಗೆಯ ಹೂಗಿಡಗಳು ಇದ್ದುವಂತೆ. ಲಿಲ್ಲಿಯಂತಹ ಚಿಕ್ಕ ಹೂಗಿಡಗಳಿಂದ ಹಿಡಿದು ಹಲಸಿನಂತಹ ದೊಡ್ಡ ಮರಗಳು, ಅವರ ಉದ್ಯಾನದ ಭಾಗವಾಗಿದ್ದುವು. ಅದೇ ಉದ್ಯಾನದಲ್ಲಿ ಅವರು ದ್ರಾಕ್ಷಿ ಬೆಳೆದರು; ಜೇನು ಸಾಕಿದರು; ಪಕ್ಷಿಗಳ ಸಂಸಾರಕ್ಕೆ ರಕ್ಷೆಯೊದಗಿಸಿದರು; ಅಲ್ಲಿ ಅರಳಿದ ಹೂ-ಗಿಡ-ಬಳ್ಳಿ ಕುರಿತೇ 35ಕ್ಕೂ ಹೆಚ್ಚು ಕವಿತೆ ಬರೆದರು! ಹುಲ್ಲು ಹಾಸನ್ನು ಕಂಡು ‘ನಂದನದ ಚೂರೊಂದು ನಮ್ಮಿಳೆಗೆ ಬಿದ್ದುದಲಾ!’ ಎಂದು ಉದ್ಗರಿಸಿದರೆ, ಮಹಾಕುಟ್ಮಲಾಕಾರದಲ್ಲಿ ಅರಳಿದ ಮ್ಯಾಗ್ನೋಲಿಯಾ ಗ್ರಾಂಡಿಫ್ಲೋರಾ ಹೂವನ್ನು ‘ವಿಭೂತಿಯ ಆಗಮನ’ ಎನ್ನುತ್ತಾರೆ. ಶ್ರೀ ರಾಜರಾಜೇಶ್ವರಿಯ ರಾಗ ಭೋಗಾಲಯದ ಸೌಂದರ್ಯಗೋಪುರವೆ ಪುಷ್ಪರೂಪವನಾಂತು ಬಂದಂತೆ ಡಾಲಿಯಾ ಹೂವು ಅವರಿಗೆ ಗೋಚರಿಸುತ್ತದೆ. ಮುಂಜಾವಿನಲ್ಲಿ ಅರಳಿದ್ದ ಒಂದು ಹೂವಿನ ಮುಂದೆ ನಿಂತು ‘ಹೇ ಭಗವತ್ ಪುಷ್ಪಾಕಾರ, ನಿನಗಿದೋ ನಮಸ್ಕಾರ! ಸಾಷ್ಟಾಂಗ ನಮಸ್ಕಾರ!’ ಎಂದು ಹಾಡುತ್ತಾರೆ. ಆ ಉದ್ಯಾನ ಕವಿಗೆ ಶಿವಕೃತಿ ಕಲಾರಂಗವಾಗಿತ್ತು. ಭಗವತ್-ಸಾಕ್ಷಾತ್ಕಾರದ ಸನ್ನಿಧಿಯಾಗಿತ್ತು; ಧ್ಯಾನವೇದಿಯಾಗಿತ್ತು. ‘ದೇವಾಲಯವೀ ಹೂವಿನ ತೋಟಂ! ರಸ ಸಾಧನೆಯೀ ಯೋಗದ ನೋಟಂ!’ ಎಂಬುದು ಅವರ ದರ್ಶನ.

‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯದಲ್ಲಿ ಮೊದಲ ಬಾರಿಗೆ ಸೀತೆ ರಾಮನನ್ನು ಕಾಣುವುದು ಉದ್ಯಾನದಲ್ಲಿ, ಅದೂ ಮಲ್ಲಿಗೆಯ ಹೊದರಿನ ಹಿಂದಿನಿಂದ! ರಾಮನನ್ನು ಕಂಡಾಗ ಅವಳ ಮುಖದಲ್ಲಿ ಬದಲಾದ ರಾಗ ಬೆಟ್ಟದಾವರೆಯ ಬೈಗುಗೆಂಪು! ಯುದ್ಧೋನ್ಮತ್ತನಾಗಿ ಬಂದು, ಸೀತೆಯ ಮುಂದೆ ನಿಂತು ‘ಕೊರಳ್ ಉರುಳ್ದಪುದು’ ಎಂದ ರಾವಣನ ನೆತ್ತಿಯ ಮೇಲೆ ಬೀಳುವುದು ಹಾಲಿವಾಣದ ಕೆಂಪು ಹೂವು!... ಹೀಗೆ ಮಹಾಕಾವ್ಯದುದ್ದಕ್ಕೂ ಅಲ್ಲಲ್ಲಿ ಹೂವುಗಳ ರಾಗ-ರಂಗನ್ನು ಕಾಣಬಹುದು.

ಪುಷ್ಪಸೌಂದರ್ಯದ ಆರಾಧಕರು ಮಾತ್ರವಾಗಿರಲಿಲ್ಲ ಕುವೆಂಪು. ಒಂದು ಹೂಗಿಡವನ್ನು ಬೆಳೆಸುವಲ್ಲಿನ ಶ್ರಮ ಅವರಿಗೆ ಗೊತ್ತಿತ್ತು. ಅದಕ್ಕೆ ಕಾರಣರಾದವರು ಯಾರೇ ಆಗಲಿ ಅಭಿನಂದಿಸುತ್ತಿದ್ದರು. ಅವರ ‘ಸೃಷ್ಟಿಯ ವ್ಯೂಹದಲ್ಲಿ ಮರದ ತುದಿಯ ಹೂವೆಷ್ಟು ಮುಖ್ಯವೋ; ಗೊಬ್ಬರವೂ ಅಷ್ಟೇ ಮುಖ್ಯ’ ಎಂಬ ನುಡಿ ಅವರ ‘ಸರ್ವರಿಗೆ ಸಮಬಾಳು! ಸರ್ವರಿಗೆ ಸಮಪಾಲು!’ ದರ್ಶನಕ್ಕೆ ಅನುಗುಣವಾಗಿಯೇ ಇದೆ. ಗೊಬ್ಬರವೂ ಅವರ ಕಾವ್ಯದ ವಸ್ತುವಾಗಿದೆ! ಒಟ್ಟಾರೆ ಕುವೆಂಪು ರಸದರ್ಶನದಲ್ಲಿ ಹೂವುಗಳಿಗೆ ವಿಶೇಷ ಸ್ಥಾನವಿದೆ. ಅವರೊಬ್ಬ ಪುಷ್ಪಪ್ರಿಯ-ಪುಷ್ಪಾರಾಧಕ ಕವಿ ಎನ್ನಲಡ್ಡಿಯಿಲ್ಲ.

‘ಜ್ಞಾನಪೀಠ ಪುರಸ್ಕಾರ’ ಎಂಬುದು ಒಂದು ರೀತಿಯಲ್ಲಿ ಗುಮಾನಿಗೆ ಒಳಗಾಗುತ್ತಿರುವ ಈ ಸಂದರ್ಭದಲ್ಲಿಯೇ, ಕನ್ನಡಕ್ಕೆ (ಶ್ರೀ ರಾಮಾಯಣ ದರ್ಶನಂ; 1967–68) ಮೊದಲ ಜ್ಞಾನಪೀಠ ಪುರಸ್ಕಾರ ಸಂದಾಯವಾಗಿ 50 ವರ್ಷಗಳೇ ತುಂಬುತ್ತಿವೆ. 25, 50, 75, 100 ಇವೆಲ್ಲಾ ಜನರ ಬದುಕಿನ ಸಂಭ್ರಮವನ್ನು ಹೆಚ್ಚಿಸುವ ಮೈಲಿಗಲ್ಲಾಗಿರುವ ನಮ್ಮ ಪರಂಪರೆಯಲ್ಲಿ ‘ಪ್ರಥಮ ಜ್ಞಾನಪೀಠ–50’ ಸಂಭ್ರಮದ ವಾತಾವರಣವನ್ನು ನಿರ್ಮಿಸಬೇಕಾಗಿತ್ತು. ಆದರೆ ಸರ್ಕಾರಿ ಕೃಪಾಪೋಷಿತ ಸಾಹಿತ್ಯ ಅಕಾಡೆಮಿಯಾಗಲೀ, ಸ್ವಾಯತ್ತ ಸಂಸ್ಥೆಯಾದ ಸಾಹಿತ್ಯ ಪರಿಷತ್ತಾಗಲೀ ಅದರ ನೆನಪು ಮಾಡಿಕೊಳ್ಳಲು ಸಿದ್ಧವಿಲ್ಲ. ಇಂತಹ ಹೊತ್ತಿನಲ್ಲಿ ಕುಪ್ಪಳಿಯ ‘ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ’ ಮತ್ತು ಲಾಲ್‌ಬಾಗ್‌ನ ‘ಉದ್ಯಾನ ಕಲಾ ಸಂಘ’ ಆಶ್ರಯದಲ್ಲಿ ತೋಟಗಾರಿಕೆ ಇಲಾಖೆಯು ಲಾಲ್‌ಬಾಗ್ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು ಕುವೆಂಪು ಸ್ಮರಣಾರ್ಥವಾಗಿ ಈ ತಿಂಗಳ 15ರವರೆಗೆ ಏರ್ಪಡಿಸಿರುವುದು ಶ್ಲಾಘನೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT