ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ನೀತಿ ಅಂಗೀಕಾರ: ಸಂಪುಟ ಸಭೆಯಲ್ಲಿ ತೀರ್ಮಾನ

Last Updated 7 ಆಗಸ್ಟ್ 2017, 19:45 IST
ಅಕ್ಷರ ಗಾತ್ರ

ಬೆಂಗಳೂರು: ಪ್ರೌಢಶಾಲೆಗಳಲ್ಲಿ ಸಾಂಸ್ಕೃತಿಕ ಶಿಕ್ಷಕರ ನೇಮಕ, ಬುಡಕಟ್ಟು ವಿಶ್ವವಿದ್ಯಾಲಯ, ಸೂಫಿ ಮತ್ತು ತತ್ವಪದಗಳ ಅಧ್ಯಯನ ಕೇಂದ್ರ ಸ್ಥಾಪನೆ ಸೇರಿದಂತೆ ವಿವಿಧ ಪ್ರಸ್ತಾವನೆಗಳನ್ನು ಒಳಗೊಂಡ ‘ಸಾಂಸ್ಕೃತಿಕ ನೀತಿ’ ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಸೋಮವಾರ ನಡೆದ ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ, ‘ಸಾಂಸ್ಕೃತಿಕ ನೀತಿ ಅನುಷ್ಠಾನ ಮಾಡಲು ₹59.68 ಕೋಟಿ ಅನುದಾನ ನೀಡಲಾಗುವುದು’ ಎಂದು ತಿಳಿಸಿದರು.

ಕನ್ನಡ ನಾಡು– ನುಡಿಯ ಸಬಲೀಕರಣಕ್ಕಾಗಿ ಸಾಂಸ್ಕೃತಿಕ ನೀತಿ ರೂಪಿಸಲು ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ 2013 ರಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿಯು 2014 ರಲ್ಲಿ ವರದಿ ನೀಡಿತ್ತು. ವರದಿಯ ಶಿಫಾರಸುಗಳನ್ನು  ಪರಿಶೀಲಿಸಲು ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ.ಪಾಟೀಲ  ಅಧ್ಯಕ್ಷತೆಯಲ್ಲಿ ಸಂಪುಟ ಉಪಸಮಿತಿ ರಚಿಸಲಾಗಿತ್ತು. ಸಣ್ಣ ಪುಟ್ಟ ತಿದ್ದುಪಡಿಗಳ ಮೂಲಕ ಸಮಿತಿಯ ಶಿಫಾರಸುಗಳಿಗೆ ಸಂಪುಟ ಅನುಮೋದನೆ ನೀಡಿತು ಎಂದು ಅವರು ತಿಳಿಸಿದರು.

ನೀತಿಯ ಪ್ರಮುಖ ಅಂಶಗಳು

* ಪ್ರಾಚ್ಯವಸ್ತುಗಳು ಮತ್ತು ಸ್ಮಾರಕಗಳ ಸಂರಕ್ಷಣೆ

* ಸರ್ಕಾರ ನೀಡುವ ಪ್ರಶಸ್ತಿಗಳನ್ನು ಆಯಾ ವರ್ಷವೇ ವಿತರಿಸಬೇಕು.

* ವಿವಿಧ ಅಕಾಡೆಮಿಗಳ ಸಬಲೀಕರಣ

* ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಧನಸಹಾಯ ನೀಡಲು ಮಾರ್ಗದರ್ಶಿ ಸೂತ್ರ

* ಕನ್ನಡ ಶಾಸ್ತ್ರೀಯ ಭಾಷಾ ಅಧ್ಯಯನಕ್ಕೆ ಉತ್ತೇಜನ

* ಕನ್ನಡ ತಂತ್ರಾಂಶಗಳ ಸದ್ಬಳಕೆಗೆ ಪ್ರೋತ್ಸಾಹ

* ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಕೇಂದ್ರೀಕರಣ ಹಾಗೂ ರಾಜ್ಯದ ನಾಲ್ಕು ಕಡೆಗಳಲ್ಲಿ ಪ್ರಾದೇಶಿಕ ಕಚೇರಿ ಸ್ಥಾಪನೆ

* ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ ನೀಡಲು ಕೇಂದ್ರಕ್ಕೆ ಶಿಫಾರಸು

* ಪ್ರಾಕೃತ ಮತ್ತು ಪಾಲಿ ಭಾಷೆ ಅಧ್ಯಯನ ಕೇಂದ್ರ ಸ್ಥಾಪನೆ.

* ಕಲಾಗ್ರಾಮಗಳ ಸ್ಥಾಪನೆ, ಕಲಾಕೃತಿಗಳ ಮಾರಾಟಕ್ಕೆ ಕೇಂದ್ರ ಸ್ಥಾಪನೆ

‘ಶಿಫಾರಸು ಕೂಡಲೇ ಜಾರಿಯಾಗಲಿ’

‘ಸಾಂಸ್ಕೃತಿಕ ನೀತಿಯನ್ನು ಒಪ್ಪಿಕೊಂಡಿರುವ ಸರ್ಕಾರದ ಕ್ರಮ ಸ್ವಾಗತಾರ್ಹ. ಆರ್ಥಿಕ ಇಲಾಖೆ ಒಪ್ಪಿಗೆ ಸೂಚಿಸಿರುವ ಶಿಫಾರಸುಗಳನ್ನು ಜಾರಿ ಮಾಡಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಸಾಂಸ್ಕೃತಿಕ ನೀತಿ ರಚನಾ ಸಮಿತಿ ಅಧ್ಯಕ್ಷ ಡಾ.ಬರಗೂರು ರಾಮಚಂದ್ರಪ್ಪ ಹೇಳಿದರು.

ನೀತಿಯ ಬಹುಪಾಲು ಅಂಶಗಳನ್ನು ಸರ್ಕಾರ ಒಪ್ಪಿಕೊಂಡಿದೆ. ಪೂರ್ಣ ಪ್ರಮಾಣದಲ್ಲಿ ಸಾಂಸ್ಕೃತಿಕ ನೀತಿಜಾರಿ ಮಾಡಿದ ರಾಜ್ಯಗಳಲ್ಲಿ ಕರ್ನಾಟಕವೇ ಮೊದಲನೆಯದು ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಾಂಸ್ಕೃತಿಕ ನೀತಿ ಸರ್ಕಾರಕ್ಕೆ ಹೊರತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಇರುವವರಿಗೆ ಅಲ್ಲ ಎಂದು ಬರಗೂರು ಹೇಳಿದರು.

ಸಾಂಸ್ಕೃತಿಕ ನೀತಿ: ಸಾಹಿತಿಗಳ ಪ್ರತಿಕ್ರಿಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT