ದೊಡ್ಡಬಳ್ಳಾಪುರ: ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಬರುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಬಿಜೆಪಿ ಹಿರಿಯ ಮುಖಂಡ ಜೆ.ನರಸಿಂಹಸ್ವಾಮಿ ಮಾತನಾಡಿ, ಮುಂಬರುವ ರಾಜ್ಯ ವಿಧಾನಸಭಾ ಚುನಾವಣಾ ಸಿದ್ಧತೆಗಳ ಕುರಿತು ಕಾರ್ಯಕರ್ತರು, ಮುಖಂಡರೊಂದಿಗೆ ಚರ್ಚಿಸಲು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಬರಲಿದ್ದು, ಪಕ್ಷ ಸಂಘಟನೆಗೆ ಬಲ ಬರಲಿದೆ ಎಂದರು.
ಈಗಾಗಲೇ ಕ್ಷೇತ್ರದಲ್ಲಿ ವಿಸ್ತಾರಕ ಸಭೆಗಳ ಮೂಲಕ ಬೂತ್ ಮಟ್ಟದಲ್ಲಿ ಸಂಘಟನೆಗಳನ್ನು ಮಾಡಲಾಗಿದೆ.ಆಗಸ್ಟ್ 12ರಂದು ದೇವನಹಳ್ಳಿ ಬೆಂಗಳೂರು ರಸ್ತೆಯ ಕನ್ನಮಂಗಲ ಗೇಟ್ ಸಮೀಪದ ಮೈದಾನದಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶ ಉದ್ದೇಶಿಸಿ ಅಮಿತ್ ಷಾ ಅವರು ಮಾತನಾಡಲಿದ್ದಾರೆ. ಈ ಸಭೆಗೆ ತಾಲ್ಲೂಕಿನಿಂದ ಸಾವಿರಾರು ಜನ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಸಿ.ನಾರಾಯಣಸ್ವಾಮಿ, ನಗರ ಅಧ್ಯಕ್ಷ ಕೆ.ಎಚ್.ರಂಗರಾಜು, ರಾಷ್ಟ್ರೀಯ ಪರಿಷತ್ ಸದಸ್ಯ ಜೋ.ನಾ. ಮಲ್ಲಿಕಾರ್ಜುನ, ಮುಖಂಡರಾದ ಬಿ.ಸಿ. ನಾರಾಯಣಸ್ವಾಮಿ, ಕೆ.ಎಂ. ಕೃಷ್ಣಮೂರ್ತಿ, ಅಶ್ವತ್ಥ್ನಾರಾಯಣಗೌಡ ಭಾಗವಹಿಸಿದ್ದರು.