ಮಂಡ್ಯ: ನಗರದಲ್ಲಿ ಬುಧವಾರ ಸುರಿದ ಮಳೆಗೆ ಕೆಲವು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಜೊತೆಗೆ ಮನೆ ಮೇಲೆ ಮರ ಉರುಳಿ ಬಿದ್ದಿದೆ. ಹಾಲಹಳ್ಳಿ, ಹೊಸಹಳ್ಳಿ, ಸ್ಲಂಬೋರ್ಡ್ ಬಡಾವಣೆಗಳಲ್ಲಿ ಮಳೆಯ ನೀರು ಮನೆಗೆ ಹರಿದಿದೆ.
ನಗರದ ವಿ.ವಿ. ರಸ್ತೆಯಲ್ಲಿ ಮಂಡಿ ಉದ್ದ ನೀರು ತುಂಬಿಕೊಂಡು ನಿಲ್ಲಿಸಿದ್ದ ಬೈಕ್ಗಳು ಮುಳುಗುವ ಸ್ಥಿತಿ ನಿರ್ಮಾಣ ಆಗಿತ್ತು. ವಾಹನ ಸವಾರರು ಚಲಿಸಲು ಹರಸಾಹಸ ಪಟ್ಟರು. ಗಾಂಧಿನಗರದಲ್ಲಿ ಮಹಡಿ ಮನೆಯೊಂದರ ಮೇಲೆ ರಸ್ತೆಯ ಬದಿಯಲ್ಲಿದ್ದ ಮರ ಕುಸಿದು ಬಿದ್ದ ಪರಿಣಾಮ ಕಾಂಪೌಂಡ್ ಜಖಂ ಆಗಿದೆ. ಮರದ ರೆಂಬೆಗಳೆಲ್ಲಾ ಮನೆಯ ಮೇಲೆ ಆವರಿಸಿಕೊಂಡಿದೆ.
ಬುಧವಾರ ಜಿಲ್ಲೆಯಲ್ಲಿ ಸರಾಸರಿ 9.50 ಮಿ.ಮೀ. ಮಳೆಯಾಗಿದೆ. ಸೋಮವಾರ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ ಸರಾಸರಿ 35.9 ಮಿ.ಮೀ, ಮಂಗಳವಾರ ಸಂಜೆ ಸರಾಸರಿ 29.62 ಮಿ.ಮೀ ಮಳೆ ಸುರಿದಿದೆ.
ಮಂಡ್ಯ ತಾಲೂಕಿನಲ್ಲಿ 19.8 ಮಿ.ಮೀ, ಕೆ.ಆರ್.ಪೇಟೆ ತಾಲೂಕಿನಲ್ಲಿ 0.8 ಮಿ.ಮೀ, ಶ್ರೀರಂಗಪಟ್ಟಣದಲ್ಲಿ 5.7 ಮಿ.ಮೀ, ಪಾಂಡವಪುರದಲ್ಲಿ 6 ಮಿ.ಮೀ, ಮಳವಳ್ಳಿಯಲ್ಲಿ 16.9 ಮಿ.ಮೀ, ಮದ್ದೂರಿನಲ್ಲಿ 12.7 ಮಿ.ಮೀ, ನಾಗಮಂಗಲದಲ್ಲಿ 4.3 ಮಿ.ಮೀ ಮಳೆ ಆಗಿರುವ ವರದಿಯಾಗಿದೆ.