ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲ್ಲೂಕಿನ ಏಣಗಿ ಗ್ರಾಮದ ಸಮೀಪದಲ್ಲಿ ರಂಗಕರ್ಮಿ ಏಣಗಿ ಬಾಳಪ್ಪ ಅವರ ಅಂತ್ಯಸಂಸ್ಕಾರ ಶನಿವಾರ ಮಧ್ಯಾಹ್ನ ನೆರವೇರಿತು.
ಬಾಳಪ್ಪ ಅವರ ಮೊದಲ ಪತ್ನಿ ಸಾವಿತ್ರಮ್ಮ ಹಾಗೂ ಪುತ್ರ ನಟರಾಜ ಅವರ ಸಮಾಧಿ ಪಕ್ಕದಲ್ಲಿಯೇ ಬಾಳಪ್ಪ ಅವರ ಅಂತ್ಯಸಂಸ್ಕಾರ ಮಾಡಲಾಯಿತು.
ಕುಟುಂಬದ ಸದಸ್ಯರು, ವಿಧಿವಿಧಾನಗಳನ್ನು ನೆರವೇರಿಸಿದರು. ಲಿಂಗಾಯತ ಸಂಪ್ರದಾಯದ ಪ್ರಕಾರ ಅಂತ್ಯಸಂಸ್ಕಾರ ನೆರವೇರಿತು.
ಸಂಸದ ಸುರೇಶ ಅಂಗಡಿ, ಬೈಲಹೊಂಗಲ ಶಾಸಕ ವಿ.ಐ.ಪಾಟೀಲ, ರಾಜ್ಯದ ವಿವಿಧ ಕಡೆಯಿಂದ ಆಗಮಿಸಿದ್ದ ರಂಗಭೂಮಿಯ ಕಲಾವಿದರು, ಬಾಳಪ್ಪ ಅವರ ಅಭಿಮಾನಿಗಳು, ಅಂತಿಮ ವಿದಾಯ ಸಲ್ಲಿಸಿದರು.
ಇದಕ್ಕೂ ಮುನ್ನ ಅವರ ನಿವಾಸದ ಆವರಣದಲ್ಲಿ ಬಾಳಪ್ಪ ಅವರ ಅಂತಿಮ ದರ್ಶನ ಪಡೆದ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರು ಅಂತಿಮ ನಮನ ಸಲ್ಲಿಸಿದರು.
ಬಾಳಪ್ಪ ಅವರ ನಿವಾಸದ ಆವರಣದಲ್ಲಿ ಗಾಳಿಯಲ್ಲಿ ಮೂರು ಸುತ್ತು ಕುಶಾಲತೋಪು ಹಾರಿಸಿ ಗೌರವಿಸಲಾಯಿತು.
103 ವರ್ಷಗಳ ಸುದೀರ್ಘ ಜೀವನ ಸಾಗಿಸಿದ ದಿನಗಳಲ್ಲಿ ತಮ್ಮ ಉಸಿರಾಗಿಸಿಕೊಂಡಿದ್ದ ರಂಗಭೂಮಿಗೆ ಅನುಪಮ ಸೇವೆ ಸಲ್ಲಿಸಿ, ರಂಗಭೂಮಿಯ ವಿಶ್ವಕೋಶವೇ ಆಗಿದ್ದ ಏಣಗಿ ಬಾಳಪ್ಪ ಅವರ ಪಾರ್ಥಿವ ಶರೀರ ಜಗದ ‘ರಂಗಭೂಮಿ’ಯಲ್ಲಿ ಲೀನವಾಯಿತು.