ದಂಬುಲಾ: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಟೀಂ ಇಂಡಿಯಾ 2019ರ ವಿಶ್ವಕಪ್ ಟೂರ್ನಿಗೆ ಸಿದ್ಧತೆ ನಡೆಸಿದೆ.
ಇತ್ತೀಚಿಗಷ್ಟೆ ಮುಕ್ತಾಯಗೊಂಡ ಭಾರತ–ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 'ಕ್ಲೀನ್ ಸ್ವೀಪ್' ಸಾಧನೆ ಮಾಡಿತ್ತು.
ಆಗಸ್ಟ್ 20ರಿಂದ ಶ್ರೀಲಂಕಾ ಎದುರು 5 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದ್ದು, ಭಾನುವಾರ ದಂಬುಲಾ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿಗಾಗಿ ಹೋರಾಟ ನಡೆಸಲಿವೆ.
ಟೆಸ್ಟ್ ಸರಣಿಯಲ್ಲಿ ಭಾರತದ ವಿರುದ್ಧ ಸೋಲು ಅನುಭವಿಸಿರುವ ಶ್ರೀಲಂಕಾ ತಂಡ ಏಕದಿನ ಕ್ರಿಕೆಟ್ ಸರಣಿಯಲ್ಲಿ ಸೇಡು ತೀರಿಸಿಕೊಳ್ಳಲು ಕಾತುರವಾಗಿದೆ.
2019ರಲ್ಲಿ ನಡೆಯುವ ವಿಶ್ವಕಪ್ ಟೂರ್ನಿಗೆ ಸ್ಥಾನ ಪಡೆಯಲು ಟೀಂ ಇಂಡಿಯಾ ಆಟಗಾರರಿಗೆ ಈ ಸರಣಿ ಪ್ರಮುಖ ಪಾತ್ರವಹಿಸಲಿದೆ ಎಂದು ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಎಂ.ಕೆ. ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಕೆ.ಎಲ್. ರಾಹುಲ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿದ್ದಾರೆ ಎಂದು ಭಾರತ ತಂಡದ ವ್ಯವಸ್ಥಾಪಕ ಮಂಡಳಿ ಈಗಾಗಲೇ ಘೋಷಿಸಿದೆ. ಈ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಟೂರ್ನಿಗಳಲ್ಲಿ ಕೆಲ ಬದಲಾವಣೆ ಮಾಡುವ ಮುನ್ಸೂಚನೆಯನ್ನು ನೀಡಿದೆ.
ಸದ್ಯ ಶ್ರೀಲಂಕಾ ವಿರುದ್ಧ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿಯಲಿದ್ದು, ರಹಾನೆ ಮೂರನೇ ಆಟಗಾರರಾಗಿ ಆಡಲಿದ್ದಾರೆ. ಜತೆಗೆ, ಎಂ.ಎಸ್. ದೋನಿ, ಮನೀಷ್ ಪಾಂಡೆ, ಕೇದಾರ್ ಜಾದವ್, ಹಾರ್ದಿಕ್ ಪಾಂಡ್ಯ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ.
ಭಾರತ ಬಲಿಷ್ಠ ಬೌಲಿಂಗ್ ಪಡೆಯನ್ನು ಹೊಂದಿದ್ದು, ವೇಗಿ ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ, ಸ್ಪಿನರ್ ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಯಾಜುವೇಂದ್ರ ಚಾಹಲ್ ಎದುರಾಳಿಗಳನ್ನು ಕಟ್ಟಿಹಾಕಲು ಸಿದ್ಧತೆ ನಡೆಸಿದ್ದಾರೆ.
ತಂಡಗಳು ಇಂತಿವೆ: ಭಾರತ: ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ಮನೀಷ್ ಪಾಂಡೆ, ರಹಾನೆ, ಎಂ. ಎಸ್.ದೋನಿ, ಕೇದಾರ್ ಜಾದವ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬೂಮ್ರಾ, ಅಕ್ಷರ್ ಪಟೇಲ್, ಯಾಜುವೇಂದ್ರ ಚಾಹಲ್, ಶಾರ್ದುಲ್ ಠಾಕೂರ್.
ಶ್ರೀಲಂಕಾ: ಉಪುಲ್ ತರಂಗ(ನಾಯಕ), ಏಂಜೆಲೊ ಮ್ಯಾಥ್ಯೂಸ್, ನಿರೋಷನ್ ಡಿಕ್ವೆಲಾ, ಧನುಷ್ಕಾ ಗುಣತಿಲಾಕ, ಕುಶಾಲ್ ಮೆಂಡಿಸ್, ಮಲಿಂದ ಪುಷ್ಪಕುಮಾರ, ಚಮರಾ ಕಪುಗೆದಿರಾ, ಲಕ್ಷಣ್ ಸಂಡಗನ್, ಅಕೀಲಾ ಧನಂಜಯಾ, ತಿಸಾರ ಪೇರೆರ, ಲಸಿತ್ ಮಾಲಿಂಗ, ವನಿಂದು ಹಸರಂಗ, ದುಶ್ಮಾಂತ ಚಮೀರಾ, ವಿಶ್ವ ಫರ್ನಾಂಡೊ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.