ಇತ್ತೀಚೆಗೆ ಇಲ್ಲಿ ಬಿಆರ್ಡಿ ಆಸ್ಪತ್ರೆಯಲ್ಲಿ 71 ಹಸುಳೆಗಳು ಸಾವಿನ್ನಪ್ಪಿದ ಘಟನೆ ಬಳಿಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶನಿವಾರ ಇಲ್ಲಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಖ್ ಯಾದವ್ ವಿರುದ್ಧವೂ ಹರಿಹಾಯ್ದರು.
‘ಲಖನೌದಲ್ಲಿ ಕೂತಿರುವ ಶಹಜಾದಾ (ಅಖಿಲೇಶ್), ದೆಹಲಿಯಲ್ಲಿ ಕೂತಿರುವ ಯುವರಾಜಗೆ (ರಾಹುಲ್) ಸ್ವಚ್ಛತೆಯ ಮಹತ್ವದ ಬಗ್ಗೆ ಅರಿವಿಲ್ಲ. ನೀವಿಲ್ಲಿ ಬಂದು ಇದನ್ನು ಪ್ರವಾಸಿತಾಣ ಮಾಡಬಹುದು, ಇದಕ್ಕೆ ಯಾವುದೇ ನಿರ್ಬಂಧವಿಲ್ಲ’ ಎಂದು ಅವರು ಹೇಳಿದ್ದಾರೆ.
ಮೃತಪಟ್ಟ ಮಕ್ಕಳ ಕುಟುಂಬದವರನ್ನು ಭೇಟಿಯಾಗಲು ರಾಹುಲ್ ಅವರು ಗೋರಖಪುರಕ್ಕೆ ಬರುವ ಕೆಲ ಗಂಟೆಗಳ ಮುನ್ನ ಯೋಗಿ ಈ ಹೇಳಿಕೆ ನೀಡಿದ್ದಾರೆ. ರಾಹುಲ್ ಅವರ ಭೇಟಿಯಿಂದ ಯೋಗಿ ಅವರು ದಿಗಿಲುಗೊಂಡಿದ್ದಾರೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.