ಬೆಂಗಳೂರು: ಹಣ ಕಟ್ಟಿಸಿಕೊಂಡು ನಿಗದಿತ ಅವಧಿಯಲ್ಲಿ ವಾಪಸ್ ಕೊಡದೆ ವಂಚಿಸಿದ ಆರೋಪದಡಿ ಮಲ್ಲೇಶ್ವರದ ‘ಪ್ರಸಿದ್ಧಿ’ ಚಿಟ್ ಫಂಡ್ ಸಂಸ್ಥೆಯ ವಿರುದ್ಧ ನಟಿ ಸಂಜನಾ ಅವರು ಮಲ್ಲೇಶ್ವರ ಠಾಣೆಗೆ ದೂರು ನೀಡಿದ್ದಾರೆ.
‘ಎರಡು ವರ್ಷಗಳಿಂದ ನಿರಂತರವಾಗಿ ಸಂಸ್ಥೆಗೆ ತಿಂಗಳ ಕಂತಿನಲ್ಲಿ ₹26 ಲಕ್ಷ ಕಟ್ಟಿದ್ದೆ. ಆದರೆ, ಸಂಸ್ಥೆಯ ಸಂಸ್ಥಾಪಕರಾದ ಮಹೇಶ್ ಹಾಗೂ ಅವರ ಪತ್ನಿ ನಿರೂಪಮಾ ಏಪ್ರಿಲ್ನಿಂದಲೇ ನಾಪತ್ತೆಯಾಗಿದ್ದಾರೆ. ಅವರನ್ನು ಹುಡುಕಿ ನ್ಯಾಯ ಕೊಡಿಸಬೇಕು’ ಎಂದು ದೂರಿನಲ್ಲಿ ಸಂಜನಾ ಒತ್ತಾಯಿಸಿದ್ದಾರೆ.
ಈ ಬಗ್ಗೆ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಸೇರಿ 40 ಮಂದಿ ಈ ಸಂಸ್ಥೆಯಲ್ಲಿ ₹18 ಕೋಟಿಯಷ್ಟು ಹಣ ಹೂಡಿಕೆ ಮಾಡಿದ್ದೇವೆ. ಮಲ್ಲೇಶ್ವರದಲ್ಲಿರುವ ಸಂಸ್ಥೆಯ ಕಚೇರಿಗೆ ಬೀಗ ಹಾಕಿ, ಆ ಹಣದೊಂದಿಗೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದರು.
‘ಸಂಸ್ಥೆ ಹೂಡಿಕೆಗೆ ಉತ್ತಮವೆಂದು ನೋಂದಣಿ ಇಲಾಖೆಯು ಪ್ರಮಾಣ ಪತ್ರ ನೀಡಿತ್ತು. ಅದನ್ನು ನಂಬಿ ಹಣ ಕಟ್ಟಿದ್ದೆವು. ಪ್ರತಿ ತಿಂಗಳು ಸಂಸ್ಥೆಯ ಸಿಬ್ಬಂದಿಯೇ ಮನೆಗೆ ಬಂದು ಹಣ ಪಡೆದುಕೊಂಡು ಹೋಗುತ್ತಿದ್ದರು. ಏಪ್ರಿಲ್ನಿಂದ ಬರುವುದನ್ನೇ ನಿಲ್ಲಿಸಿದ್ದರು. ಆ ಬಗ್ಗೆ ವಿಚಾರಿಸಿದಾಗ ಮಹೇಶ್ ಹಾಗೂ ನಿರೂಪಮಾ, ನಮ್ಮನ್ನು ವಂಚಿಸಿದ್ದು ಗೊತ್ತಾಯಿತು’ ಎಂದು ತಿಳಿಸಿದರು.
‘ಮಲ್ಲೇಶ್ವರ ಠಾಣೆಯ ಇನ್ಸ್ಪೆಕ್ಟರ್ ವೆಂಕಟಾಚಲ ಅವರಿಗೆ ಈ ಹಿಂದೆಯೂ ದೂರು ಕೊಟ್ಟಿದ್ದೆವು. ಆರೋಪಿಗಳು ವಿದೇಶಕ್ಕೆ ಹೋಗಬಹುದು ಎಂದು ಪೊಲೀಸರು ಅವರ ಪಾಸ್ಪೋರ್ಟ್ ಜಪ್ತಿ ಮಾಡಿದ್ದಾರೆ. ಆದರೆ, ಆರೋಪಿಗಳನ್ನು ಇದುವರೆಗೂ ಪತ್ತೆ ಮಾಡಿಲ್ಲ. ಈ ಸಂಬಂಧ ಕಮಿಷನರ್ ಅವರಿಗೆ ಸದ್ಯದಲ್ಲೇ ಮನವಿ ಸಲ್ಲಿಸಲಿದ್ದೇವೆ’ ಎಂದು ಹೇಳಿದರು.
‘ದೂರಿನ ಅನ್ವಯ ಎಫ್ಐಆರ್ ದಾಖಲಿಸಿಕೊಂಡಿದ್ದೇವೆ. ಆರೋಪಿಗಳು ಇರುವ ಸ್ಥಳವನ್ನು ಪತ್ತೆ ಹಚ್ಚುತ್ತಿದ್ದೇವೆ’ ಎಂದು ಮಲ್ಲೇಶ್ವರ ಠಾಣೆಯ ಪೊಲೀಸರು ತಿಳಿಸಿದರು.