ಭದ್ರಾವತಿ: ತಾಲ್ಲೂಕಿನ ಅರಳಿಕೊಪ್ಪ ಗ್ರಾಮದಲ್ಲಿ ಗ್ರಾಮ ಠಾಣಾ ಪ್ರದೇಶವನ್ನು ತಾಲ್ಲೂಕು ಆಡಳಿದ ವಶಕ್ಕೆ ಪಡೆದು ಫಲಕ ನೆಟ್ಟಿದ್ದರು. ಅದನ್ನು ಕಿತ್ತುಹಾಕಿ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಗ್ರಾಮಾಠಾಣಾ ಹೋರಾಟ ಸಮಿತಿ ಸದಸ್ಯರು ಶನಿವಾರ ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಿದರು.
ಅರಳಿಕೊಪ್ಪ ಗ್ರಾಮದ ಎ.ಜಿ. ಶಿವಕುಮಾರ್ ಎಂಬುವರು ಗ್ರಾಮಠಾಣಾ ಸ್ವತ್ತು ಪ್ರವೇಶಿಸಿ ಅಲ್ಲಿದ್ದ ಫಲಕ ಕಿತ್ತು ಕಾನೂನು ಉಲ್ಲಂಘಿಸಿದ್ದಾರೆ. ಕೂಡಲೇ ಅಲ್ಲಿಂದ ತೆರವು ಮಾಡಬೇಕು ಎಂದು ಆಗ್ರಹಿಸಿದರು.
ಈ ಹಿಂದೆ ಸಮಿತಿ ಹೋರಾಟಕ್ಕೆ ಸ್ಪಂದಿಸಿ ತಾಲ್ಲೂಕು ಆಡಳಿತ ತೆರವು ಕಾರ್ಯ ಮಾಡಿತ್ತು. ಆದರೆ ಇಂದು ಪುನಃ ಅತಿಕ್ರಮಣ ಮಾಡಲಾಗಿದೆ. ಅವರ ವಿರುದ್ಧ ಕೂಡಲೇ ತಾಲ್ಲೂಕು ಆಡಳಿತ ಕ್ರಮ ಜರುಗಿಸಿ ಪ್ರಕರಣ ದಾಖಲು ಮಾಡಬೇಕು ಎಂದು ಒತ್ತಾಯಿಸಿದರು.
ಧರಣಿಯಲ್ಲಿ ವಿವಿಧ ಸಂಘಟನೆ ಮುಖಂಡರಾದ ಬಾಲಕೃಷ್ಣ, ಸುರೇಶ್, ಪ್ರೇಂಕುಮಾರ್, ಯಂಕರೆಡ್ಡಿ, ಚಿನ್ನಯ್ಯ, ರಂಗನಾಥ, ಸುರೇಶ ನಾಯ್ಕ, ಬಿ.ವಿ. ಗಿರೀಶ, ಪಾಪಣ್ಣ ಅವರೂ ಹಾಜರಿದ್ದರು.