ವಿಜಯಪುರ: ‘ಸಂಘ ಸಂಸ್ಥೆಗಳು ಸಮಾಜಮುಖಿಯಾಗಿ ಕೆಲಸ ಮಾಡುವುದನ್ನು ರೂಢಿಸಿಕೊಳ್ಳಬೇಕು’ ಎಂದು ವೀರಶೈವ ಮಹಿಳಾ ಸಂಘದ ಅಧ್ಯಕ್ಷೆ ಉಷಾ ಪೂರ್ಣಚಂದ್ರ ಹೇಳಿದರು. ಇಲ್ಲಿಗೆ ಸಮೀಪದ ಚಂದೇನಹಳ್ಳಿ ಗೇಟ್ ನಲ್ಲಿರುವ ಸರ್ವೋದಯ ಸೇವಾ ಸಂಸ್ಥೆಯ ಆವರಣದಲ್ಲಿ ವೀರಶೈವ ಮಹಿಳಾ ಸಂಘದಿಂದ ಅಂಧರು, ಅಂಗವಿಕಲರಿಗೆ ಬಟ್ಟೆಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.
‘ಅಂಗವಿಕಲತೆ, ಮಾನಸಿಕ ಅನಾರೋಗ್ಯ ಶಾಪವಲ್ಲ, ದೇಹದಲ್ಲಿನ ಕೆಲವು ನ್ಯೂನತೆಗಳಿಂದಾಗಿ ದೈಹಿಕ ವಿಕಲತೆ, ಮಾನಸಿಕ ರೋಗ ಕಾಣಿಸಿ ಕೊಳ್ಳುತ್ತದೆ. ಇಂತಹ ಮಕ್ಕಳಿಗೆ ಸ್ವಯಂ ಸೇವಾ ಸಂಸ್ಥೆಗಳು, ಸಮಾಜ ಮುಖಿಯಾಗಿ ಕೆಲಸ ಮಾಡುತ್ತಿರುವವರು ಸಹಾಯಹಸ್ತ ನೀಡಬೇಕು’ ಎಂದು ಅವರು ಹೇಳಿದರು.
ಉಪಾಧ್ಯಕ್ಷೆ ಶಶಿಕಲಾ ಕಾಂತರಾಜು ಮಾತನಾಡಿ, ‘ಜೀವನದಲ್ಲಿ ಪರೋಪ ಕಾರಕ್ಕಿಂತ ಪುಣ್ಯದ ಕೆಲಸ ಇನ್ನೊಂದಿಲ್ಲ, ಪ್ರತಿಯೊಬ್ಬರು ತಮ್ಮ ಸ್ವಾರ್ಥಕ್ಕಾಗಿ ಚಿಂತನೆ ನಡೆಸದೆ ಸಮಾಜದಲ್ಲಿ ಸಂಕಷ್ಟಗಳಿಗೆ ಸಿಲುಕಿ, ಮಾನಸಿಕವಾಗಿ ನೊಂದಿರುವವರಿಗೆ ಸಾಂತ್ವನ ಹೇಳಬೇಕಾಗಿದೆ’ ಎಂದು ಅವರು ಸಲಹೆ ನೀಡಿದರು.