ಬಳ್ಳಾರಿ: ಗಣೇಶ ಚತುರ್ಥಿಗೆ ಇನ್ನು ನಾಲ್ಕೇ ದಿನ ಉಳಿದಿರುವಂತೆ, ಜಿಲ್ಲೆಯಲ್ಲಿ ಎಲ್ಲೆಡೆ ಪರಿಸರ ಸ್ನೇಹಿಯಲ್ಲದ ಪಿಓಪಿ ಗಣೇಶನ ಮೂರ್ತಿಗಳ ಮಾರಾಟ ಮಳಿಗೆಗಳು ತಲೆ ಎತ್ತಿವೆ. ಪಾಲಿಕೆಯ ಆರೋಗ್ಯ ಶಾಖೆಯ ಸಿಬ್ಬಂದಿ ಕೆಲವು ಮಳಿಗೆಗಳಿಂದ ಬೆರಳೆ ಣಿಕೆಯಷ್ಟು ಪಿಓಪಿ ಮೂರ್ತಿಗಳನ್ನು ವಶಕ್ಕೆ ಪಡೆದು ವರ್ತಕರಿಗೆ ಎಚ್ಚರಿಕೆ ನೀಡಿ ಸುಮ್ಮನಾಗಿದ್ದಾರೆ. ಪರಿಣಾಮ ವಾಗಿ ಪಿಓಪಿ ಮೂರ್ತಿಗಳ ಮಾರಾಟ ಯಾವುದೇ ಅಡೆ–ತಡೆ ಇಲ್ಲದೆ ನಡೆದಿದೆ.
ಹೊರ ಜಿಲ್ಲೆಗಳಿಂದ: ನಗರದ ಕುಂಬಾರ ಓಣಿ ಸೇರಿದಂತೆ ಜಿಲ್ಲೆಯ ಹಲವೆಡೆ ಪಿಓಪಿ ಗಣಪನ ಮೂರ್ತಿಗಳ ತಯಾರಕ ರಿದ್ದಾರೆ. ಅಲ್ಲಿ ತಯಾರಾಗುವ ಮೂರ್ತಿ ಗಳಷ್ಟೇ ಅಲ್ಲದೆ, ಹೊರ ಜಿಲ್ಲೆಗಳಿಂದಲೂ ಪಿಓಪಿ ಮೂರ್ತಿಗಳನ್ನು ತರಲಾಗಿದೆ.
ಗ್ರಾಮಸ್ಥರೇ ಹೆಚ್ಚು: ಗಣಪನ ಮೂರ್ತಿ ಗಳ ಮಾರಾಟದಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳ ನಿವಾಸಿಗಳು ತೊಡಗಿಸಿ ಕೊಂಡಿರುವುದು ಮತ್ತೊಂದು ವಿಶೇಷ. ತಾಲ್ಲೂಕಿನ ರೂಪನಗುಡಿ, ಈರಾಪುರ, ಹಂದ್ಯಾಳು, ಹೊಳಗುಂದಿ ಸೇರಿದಂತೆ ಹಲವು ಗ್ರಾಮಗಳ ಮಂದಿ ಈಗಾಗಲೇ ನಗರದಲ್ಲಿ ಬಿಡಾರ ಹೂಡಿದ್ದಾರೆ.
ದುಬಾರಿ: ವರ್ಷದಿಂದ ವರ್ಷಕ್ಕೆ ಗಣಪನ ಮೂರ್ತಿಗಳ ದರವೂ ಹೆಚ್ಚುತ್ತಿರುವುದು ಭಕ್ತರಲ್ಲಿ ಅಸಮಾಧಾನವನ್ನೂ ತಂದಿದೆ. ಪುಟಾಣಿ ಗಣಪನ ಮೂರ್ತಿಗಳು ಹತ್ತರಿಂದ ಇಪ್ಪತ್ತೈದು ರೂಪಾಯಿಗೆ ದೊರಕುತ್ತಿದ್ದವು. ಆದರೆ ಈಗ ಕನಿಷ್ಠ 100 ರೂಪಾಯಿ ಇಲ್ಲದೆ ಮೂರ್ತಿ ಖರೀದಿ ಸಾಧ್ಯವಿಲ್ಲ’ ಎಂದು ದೇವಿ ನಗರದ ಶಂಕರ ಹೇಳಿದರು.
‘ಸಾರ್ವಜನಿಕವಾಗಿ ಪ್ರತಿಷ್ಠಾಪಿಸ ಬೇಕೆಂದರೆ ಮೂರ್ತಿಗೆಂದೇ ಕನಿಷ್ಠ 10 ಸಾವಿರ ರೂಪಾಯಿ ಬೇಕು. ಹಬ್ಬ ಹೀಗೆ ನಿರೀಕ್ಷೆ ಮೀರಿ ದುಬಾರಿಯಾಗಿದೆ. ದೇಣಿಗೆ ಸಂಗ್ರಹಿಸುವುದೂ ಕಷ್ಟವಾಗಿದೆ’ ಎಂದು ಕಪ್ಪಗಲ್ಲು ರಸ್ತೆಯ ಯುವಕ ರಾಮಾಂಜಿ ತಿಳಿಸಿದರು.
ಇಂದು ಶಾಂತಿ ಸಭೆ: ‘ಗಣೇಶ ಚತುರ್ಥಿ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಜಿಲ್ಲಾದ್ಯಂತ ಶಾಂತಿ ಸಭೆಗಳನ್ನು ನಡೆಸಲಾಗುತ್ತಿದೆ. ನಗರದ ಬಿಡಿಎಎ ಸಭಾಂಗಣದಲ್ಲಿ ಸಂಜೆ 4.30ಕ್ಕೆ ಸಭೆ ನಡೆಯಲಿದೆ’ ಎಂದು ಎಸ್ಪಿ ಆರ್.ಚೇತನ್ ತಿಳಿಸಿದರು. ‘ಪ್ರಜಾವಾಣಿ’ ಯೊಂದಿಗೆ ಭಾನುವಾರ ಮಾತನಾಡಿದ ಅವರು, ‘ಭಕ್ತರು ವಸತಿ ಪ್ರದೇಶಗಳಲ್ಲಿ, ಆಸ್ಪತ್ರೆ ಆಸುಪಾಸು ಕಿವಿಗಡಚಿಕ್ಕುವ ಧ್ವನಿ ವರ್ಧಕ ಬಳಸುವಂತಿಲ್ಲ. ಹಬ್ಬ ಕ್ಕೆಂದು ಬಲವಂತವಾಗಿ ಚಂದಾ ಸಂಗ್ರಹಿಸು ವಂತಿಲ್ಲ. ಎಲ್ಲಿಯೂ ಭಕ್ತ ರೊಂದಿಗೆ ಅನುಚಿತವಾಗಿ ವರ್ತಿಸು ವಂತಿಲ್ಲ. ಅಂಥ ಸನ್ನಿವೇಶಗಳು ಎದುರಾ ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಕಾಲುವೆಯಲ್ಲಿ ಮೂರ್ತಿ ವಿಸರ್ಜನೆಗೆ ತಡೆ
‘ಕೆಳಹಂತದ ಕಾಲುವೆಯಲ್ಲಿ ಈಗ ನೀರು ಹರಿದುಬರುತ್ತಿದ್ದು ಅಲ್ಲಿ ಮೂರ್ತಿಗಳನ್ನು ವಿಸರ್ಜಿಸಿದರೆ ನೀರು ಮಲಿನಗೊಳ್ಳುತ್ತದೆ. ಹೀಗಾಗಿ ಪರ್ಯಾಯ ವ್ಯವಸ್ಥೆ ಮಾಡಲು ಚಿಂತನೆ ನಡೆಯುತ್ತಿದೆ’ ಎಂದು ಪಾಲಿಕೆ ಆಯುಕ್ತ ಎಂ.ಕೆ.ನಲ್ವಡಿ ತಿಳಿಸಿದರು. ‘ತಾತ್ಕಾಲಿಕವಾಗಿ ಹೊಂಡದ ವ್ಯವಸ್ಥೆ ಮಾಡಿ ಅಲ್ಲಿ ನೀರನ್ನು ತುಂಬಿಸಿ ಮೂರ್ತಿಗಳನ್ನು ವಿಸರ್ಜಿಸಲು ವ್ಯವಸ್ಥೆ ಮಾಡಬೇಕು. ನೀರು ಇಂಗದ ರೀತಿ ಎಚ್ಚರಿಕೆ ವಹಿಸಬೇಕು. ಆ ಬಗ್ಗೆ ಸೋಮವಾರ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು’ ಎಂದರು.
ದುರ್ಗಮ್ಮ ಗುಡಿ ದಾಸೋಹಕ್ಕೆ ಅಕ್ಕಿ ದೇಣಿಗೆ
ಕನಕದುರ್ಗಮ್ಮ ಗುಡಿಯ ಆವರಣದಲ್ಲಿ ಸುಮಾರು 40 ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಈ ಮಳಿಗೆಗಳ ವರ್ತಕರಿಂದ ದೇವಸ್ಥಾನ ಸಮಿತಿಯು ತಲಾ ಒಂದು ಕ್ವಿಂಟಲ್ ಅಕ್ಕಿಯನ್ನು ದೇಣಿಗೆಯನ್ನಾಗಿ ಸ್ವೀಕರಿಸುತ್ತಿದೆ. ಉಳಿದಂತೆ, ಯಾವ ಖರ್ಚೂ ಇಲ್ಲದೆ ವರ್ತಕರು ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದಾರೆ.
* *
ಪಿಓಪಿ ಮೂರ್ತಿಗಳನ್ನು ಮಾರಾಟ ಮಾಡಬಾರದು ಎಂದು ವರ್ತಕರಿಗೆ ಎಚ್ಚರಿಕೆ ನೀಡಲಾಗಿದೆ. ಹಬ್ಬ ಸೂಕ್ಷ್ಮ ವಿಚಾರವಾಗಿರುವುದರಿಂದ ವರ್ತಕರ ವಿರುದ್ಧ ಕಠಿಣ ಕ್ರಮ ಕೈಗೊಂಡಿಲ್ಲ
ಎಂ.ಕೆ.ನಲ್ವಡಿ, ಪಾಲಿಕೆ ಆಯುಕ್ತ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.