ಶೃಂಗೇರಿ: ಭಾರತೀಯರು ಚೀನಾದ ಅಗ್ಗ ವಸ್ತುಗಳನ್ನು ಖರೀದಿಸುವುದನ್ನು ನಿಲ್ಲಿಸಬೇಕು. ಹತ್ತು ವರ್ಷಗಳಿಂದ ಅಲ್ಲಿನ ಅಗ್ಗದ ಸರಕುಗಳು ಪ್ರವಾಹದಂತೆ ಭಾರತಕ್ಕೆ ಹರಿದು ಬರುತ್ತಿದೆ. ದೇಶದ ಗುಣಮಟ್ಟದ ವಸ್ತುಗಳನ್ನು ಖರೀದಿಸಿ ದೇಶ ಪ್ರೇಮ ತೋರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಸ್ವದೇಶಿ ಜಾಗರಣ ಮಂಚ್ನ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ಎಂ.ಕುಮಾರಸ್ವಾಮಿ ತಿಳಿಸಿದರು.
ಶೃಂಗೇರಿ ಪಟ್ಟಣದ ಜ್ಞಾನಭಾರತೀ ವಿದ್ಯಾ ಕೇಂದ್ರದಲ್ಲಿ ತಾಲ್ಲೂಕು ಸ್ವದೇಶಿ ಜಾಗರಣ ಮಂಚ್ ಭಾನುವಾರ ಆಯೋಜಿಸಿದ ಜನ ಜಾಗರಣ ಸಭೆಯಲ್ಲಿ ‘ಭಾರತೀಯ ಮಾರುಕಟ್ಟೆಯಲ್ಲಿ ಚೀನಾ ನಿರ್ಮಿತ ವಸ್ತುಗಳು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
27 ವರ್ಷಗಳಿಂದ ನಮ್ಮ ದೇಶದ ಮೇಲೆ ಚೀನಾದವರು ಆರ್ಥಿಕ ಆಕ್ರಮಣ ಮಾಡುತ್ತಾ ಬಂದಿದ್ದು, ಮಾರುಕಟ್ಟೆಯ ಮೇಲೆ ಏಕಸ್ವಾಮ್ಯತೆ ಸಾಧಿಸುವುದು ಅವರ ಮೂಲ ಉದ್ದೇಶ. 2016-17ರಲ್ಲಿ ಚೀನಾದೊಂದಿಗೆ 55 ಬಿಲಿಯನ್ ಡಾಲರ್ ವ್ಯಾಪಾರ ಮಾಡಿದ್ದೇವೆ.
ಆದರೆ, ಚೀನಾಕ್ಕೆ 9 ಬಿಲಿಯನ್ ಡಾಲರ್ ಸರಕುಗಳನ್ನು ನಾವು ರಫ್ತು ಮಾಡಿದ್ದೇವೆ. ಹಾಗಾಗಿ, ನಾವು ಸ್ವದೇಶಿ ವಸ್ತುಗಳನ್ನು ಖರೀದಿಸುವತ್ತ ಹೆಚ್ಚಿನ ಗಮನ ಹರಿಸಬೇಕು. ಪಾಕಿಸ್ತಾನದೊಂದಿಗೆ ಮಿತ್ರತ್ವ ಹೊಂದಿದ ಚೀನಾದ ಇಬ್ಬಗೆಯ ಧೋರಣೆಗೆ ನಾವು ತಕ್ಕ ಉತ್ತರ ನೀಡಬೇಕು ಎಂದರು.
ಜ್ಞಾನಭಾರತೀ ಕೇಂದ್ರದ ಅಧ್ಯಕ್ಷ ಲಕ್ಷ್ಮೀನಾರಾಯಣ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ವಕೀಲರಾದ ಉಮೇಶ್ ಹೆಗಡೆ ವಹಿಸಿದ್ದರು. ಸ್ವದೇಶಿ ಜಾಗರಣ ಮಂಚ್ನ ಜಿಲ್ಲಾಧ್ಯಕ್ಷ ಎ.ಎಸ್.ನಯನ, ತಾಲ್ಲೂಕು ಅಧ್ಯಕ್ಷ ಶ್ರೇಯಸ್ಸು ಇದ್ದರು.