ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶನ ಪೂಜೆಗೆ ‘ಇಷ್ಟಫಲ’ದ ವಿಗ್ರಹ

Last Updated 21 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ನೈಸರ್ಗಿಕವಲ್ಲದ ವಸ್ತುಗಳಿಂದ ತಯಾರಿಸುವ ಗಣಪನ ಮೂರ್ತಿಯನ್ನು ಸಾರ್ವಜನಿಕವಾಗಿ ಇಲ್ಲವೆ ಮನೆಗಳಲ್ಲಿ ಪ್ರತಿಷ್ಠಾಪಿಸಬಾರದು’ ಎಂಬ ಆದೇಶವನ್ನು ಸರ್ಕಾರ ಹೊರಡಿಸಿದೆ. ಗಣೇಶ ಚತುರ್ಥಿ ಸಂದರ್ಭದ ಆರಾಧನೆಯಲ್ಲಿ ಮಣ್ಣಿನ ಮೂರ್ತಿಗಳ ಬಳಕೆ ಅಪೇಕ್ಷಣೀಯ. ಮೂರ್ತಿಗೆ ಬಳಸಿದ ನೈಸರ್ಗಿಕ ಬಣ್ಣ ಸೇರಿ ಎಲ್ಲವೂ ನೀರಿನಲ್ಲಿ ಕರಗುತ್ತದೆ. ಇದರಿಂದ ಪರಿಸರ, ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ.

ನೀರಿನಲ್ಲಿ ಕರಗದ ಪ್ಲಾಸ್ಟರ್ ಆಫ್‌ ಪ್ಯಾರಿಸ್‌ನಿಂದ (ಪಿಒಪಿ) ತಯಾರಿಸಿದ ವಿಗ್ರಹಗಳು, ರಾಸಾಯನಿಕ ಬಣ್ಣಗಳು ಹಾನಿಕಾರಕ. ಈ ನೆಲೆಯಲ್ಲಿ ಸರ್ಕಾರಿ ಆದೇಶ ವರ್ತಮಾನದ ಅನಿವಾರ್ಯತೆ.

ಆರಾಧನೆಯ ಬಳಿಕ ವಿಗ್ರಹವನ್ನು ವಿಸರ್ಜಿಸುವ ಜಲಮೂಲಗಳ ರಕ್ಷಣೆಯ ಕಾಳಜಿ ನೋಟವು ಆದೇಶದ ಹಿಂದಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಪಿಒಪಿಗೆ ಪರ್ಯಾಯ ವ್ಯವಸ್ಥೆಯತ್ತ ಯೋಚಿಸಿದೆ. ತೆಂಗಿನ ಕಾಯಿಯಿಂದ ಕೆತ್ತಲಾದ ಗಣಪನ ವಿಗ್ರಹಗಳನ್ನು ಜನರ ಮುಂದೆ ಪ್ರಸ್ತುತಪಡಿಸುತ್ತಿದೆ. ಮನೆಮನೆ ಭೇಟಿ ಮಾಡಿ ಜನರಲ್ಲಿ ಅರಿವನ್ನು ಬಿತ್ತುವ ಕೆಲಸ ಮಾಡುತ್ತಿದೆ.

ಪಿಒಪಿ, ರಾಸಾಯನಿಕಗಳ ಬಳಕೆಯ ಮಾರಕವನ್ನು ತಿಳಿಸುತ್ತಿದೆ. ಪರಿಣಾಮವಾಗಿ ಈಗಾಗಲೇ 500 ಜನ ತೆಂಗಿನ ಕಾಯಿಯಲ್ಲಿ ಮೂಡಿಸಿದ ಗಣಪನ ವಿಗ್ರಹಗಳನ್ನು ಮನೆಯಲ್ಲಿ ಪ್ರತಿಷ್ಠಾಪಿಸಲು ಆಯ್ದುಕೊಂಡಿದ್ದಾರೆ. ಇದೊಂದು ಸದ್ದಿಲ್ಲದ ನಡೆಯುತ್ತಿರುವ ಪರಿವರ್ತನೆ.

ಧಾರವಾಡ ಎಂಜಿನಿಯರಿಂಗ್ ಕಾಲೇಜಿನ ನಿರ್ವಹಣಾ ಮೇಲ್ವಿಚಾರಕ ಜಗದೀಶ ಗೌಡ ಬಾವಿಕಟ್ಟಿ ಮತ್ತು ಅವರ ಸಹೋದರ ವೀರನಗೌಡ ಅವರು ತೆಂಗಿನಿಂದ ಕಲಾತ್ಮಕ ಕುಸುರಿಗಳನ್ನು ಮಾಡಿ ಆಸಕ್ತರಿಗೆ, ಸ್ನೇಹಿತರಿಗೆ ಹಂಚುತ್ತಿದ್ದರು. ಅವರ ಸಂಗ್ರಹದ ತೆಂಗಿನ ಗಣಪನ ಕಲಾಕೃತಿ ವಿನ್ಯಾಸವನ್ನು ಪಿಒಪಿಗೆ ಪರ್ಯಾಯವಾಗಿ ನೀಡಬಹುದೆಂಬ ಯೋಚನೆಯಿಂದ ಆಂದೋಲನ ರೂಪಿಸಲಾಗಿದೆ.

ಗ್ರಾಮಾಭಿವೃದ್ಧಿ ಯೋಜನೆಯ ‘ಕೌಶಲ್ಯ ಅಭಿವೃದ್ಧಿ ತರಬೇತಿ’ಯಡಿ ಸ್ವ-ಸಹಾಯ ಸಂಘದ ಐವತ್ತು ಮಹಿಳೆಯರಿಗೆ ಜಗದೀಶ ಅವರಿಂದ ತರಬೇತಿ ಕೊಡಿಸ ಲಾಗಿದೆ. ಇಪ್ಪತ್ತೈದು ಮಂದಿಯ ಎರಡು ತಂಡಕ್ಕೆ ಏಳೇಳು ದಿವಸಗಳ ಕಲಿಕೆ. ಫಲವಾಗಿ ನೂರಾರು ತೆಂಗಿನಕಾಯಿಗಳಲ್ಲಿ ಗಣೇಶ ಒಡಮೂಡಿದ್ದಾನೆ.

‘ಗಣೇಶನ ಮೂರ್ತಿ ಅಂದಾಗ ನೀರಿನಲ್ಲಿ ವಿಸರ್ಜಿಸಬೇಕೆನ್ನುವ ಮನಃಸ್ಥಿತಿ ಸಹಜವಾಗಿ ಬೆಳೆದಿದೆ. ತೆಂಗಿನ ಗಣಪನನ್ನು ನೀರಿನಲ್ಲಿ ವಿಸರ್ಜನೆ ಮಾಡಿ ನಂತರ ಮಣ್ಣಿಗೆ ಸೇರಿಸಿದರೆ ಅದು ಮೊಳಕೆ ಬಂದು ಸಸಿಯಾಗುತ್ತದೆ; ಕಲ್ಪವೃಕ್ಷವಾಗುತ್ತದೆ. ಅಂದಕ್ಕಾಗಿ ಷೋಕೇಸಿನಲ್ಲಿ ಇಡಬಹುದು. ನಮ್ಮ ವಿಚಾರಗಳಿಗೆ ಮಹಿಳೆಯರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ’ ಎಂದು ಹೇಳಿದರು ಪ್ರಿಯಾ ಖೋದಾನಪುರ. ಇವರು ಧಾರವಾಡದಲ್ಲಿ ರೂಪುಗೊಂಡ ‘ತೆಂಗಿನಕಾಯಿ ಗಣೇಶನ ಮೂರ್ತಿ ಕೆತ್ತನೆಗಾರರ ಸಮಿತಿ’ಯ ಮುಖ್ಯಸ್ಥರು.

ತರಬೇತಿ ಪಡೆದ ಸಮಿತಿ ಸದಸ್ಯೆಯರು ಸಂತೋಷದಿಂದ ಕಾರ್ಯರಂಗಕ್ಕೆ ಧುಮುಕಿದರು. ಆರಂಭದಲ್ಲಿ ಎಡವಿದರೂ, ಮಾಡುತ್ತಾ ಸುಲಭವಾಯಿತು. ಈಗ ಒಬ್ಬರು ದಿವಸಕ್ಕೆ ನಾಲ್ಕು ಮೂರ್ತಿಗಳನ್ನು ರಚಿಸುವಷ್ಟು ಪಳಗಿದ್ದಾರೆ. ಉರುಟಾಗಿರುವ ಸುಲಿಯದ ಕಾಯಿಯು ಹೆಚ್ಚು ಎಳೆಯದಾಗಿರಬಾರದು, ಕೊಬ್ಬರಿಯ ಹಂತಕ್ಕೂ ತಲುಪಿರಬಾರದು – ಇಂತಹ ಕಾಯಿಗಳನ್ನು ಮೂರ್ತಿಯ ರಚನೆಗೆ ಆಯ್ಕೆ ಮಾಡುತ್ತಾರೆ.

ಯಲ್ಲಾಪುರದಿಂದ ಕುಸುರಿಗೆ ಬೇಕಾದ ಕಾಯಿಗಳನ್ನು ಖರೀದಿಸುತ್ತಾರೆ. ಅದರ ಮೇಲೆ ಸ್ಕೆಚ್ ಹಾಕುವುದು ಮೊದಲ ಕೆಲಸ. ಮತ್ತೆಲ್ಲಾ ಚಾಕುವಿನ ಚಮತ್ಕಾರ. ಮನದೊಳಗಿನ ಕಲೆಯು ಚಕಚಕನೆ ತೆಂಗಿಗೆ ಆಕಾರ ಕೊಡುತ್ತದೆ. ಗಣಪನನ್ನು ಕೂರಿಸುವುದಕ್ಕೆ ಚಿಕ್ಕ ಪೀಠ. ಒಂದು ಮೂರ್ತಿಗೆ ₹ 401 ದರ ನಿಗದಿ ಮಾಡಲಾಗಿದೆ.

ಮೂರ್ತಿಗೆ ಕಿರೀಟ, ಕಿವಿ ಆಭರಣ, ಕಣ್ಣುಗಳನ್ನು ಪ್ರತ್ಯೇಕವಾಗಿ ಕೂಡಿಸುತ್ತಾರೆ. ಬಹುಕಾಲ ಕೆಡದಿರುವಂತೆ ಟಚ್‌ ವುಡ್‌ ಲೇಪನವಿದೆ. ‘ಟಚ್‌ ವುಡ್‌ ಲೇಪನದಿಂದ ಮೂರ್ತಿ ಬಹುಕಾಲ ಬಾಳುತ್ತದೆ. ಅಲಂಕಾರಕ್ಕಾಗಿ ಕಾಪಿಡಬಹುದು. ಪರಿಸರಕ್ಕೆ ಹಾನಿಯಿಲ್ಲ. ತೆಂಗು ನೈಸರ್ಗಿಕ ಉತ್ಪನ್ನ. ಬದಲಾದ ಕಾಲಘಟ್ಟದಲ್ಲಿ ಇಂತಹ ಬದಲಾವಣೆ ಅನಿವಾರ್ಯ. ಬಹುಕಾಲ ಇದನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದವರು ಫಕ್ಕನೆ ಒಪ್ಪಲಾರರು ಎಂಬುದು ಗೊತ್ತಿದೆ. ಗಣೇಶನಿಗೆ ತೆಂಗು ಇಷ್ಟಫಲವಾದ್ದರಿಂದ ಗಣೇಶನಿಗೂ ಪ್ರಿಯವಾದೀತು. ಜನರೂ ಒಪ್ಪುತ್ತಿದ್ದಾರೆ’ ಎಂದು ಅಭಿಪ್ರಾಯಪಟ್ಟರು ಗ್ರಾಮಾಭಿವೃದ್ಧಿ ಯೋಜನೆಯ ವಲಯ ನಿರ್ದೇಶಕ ಜಯಶಂಕರ ಶರ್ಮ.

ಯಾವುದೇ ಮೂರ್ತಿಗಳನ್ನು ತೆಂಗಿನಲ್ಲಿ ಮೂಡಿಸಬಹುದೆಂಬ ಧೈರ್ಯ ಬಂದಿದೆ. ಮುಂದಿನ ದಿನಗಳಲ್ಲಿ ಗುಣಮಟ್ಟ ವೃದ್ಧಿಸುವ ಸಂಕಲ್ಪವಿದೆ ಎಂದವರು ಮೂರ್ತಿ ರಚನೆಯಲ್ಲಿ ತೊಡಗಿದ ಕುಶಲಕರ್ಮಿಗಳು.

ಧಾರವಾಡದ ಕೆಲಕೇರಿಯ ಮಂಜುನಾಥ ಹಿರೇಮಠ ಮತ್ತು ಅವರ ತಂಡ ಬಹುಕಾಲದಿಂದ ಇಂತಹ ನೈಸರ್ಗಿಕ ವಿಚಾರಗಳನ್ನು ಜನರ ಮುಂದಿಡುತ್ತ ಬಂದಿದೆ. ಪರಿಸರಸ್ನೇಹಿ ಹಬ್ಬದ ಆಚರಣೆಗೆ ಜನ ಸಮುದಾಯವನ್ನು ಹುರಿದುಂಬಿಸುತ್ತಿದೆ.

ಒಂದು ವ್ಯವಸ್ಥೆಯ ಬದಲಾವಣೆಗೆ ಮನಸ್ಸು ಹಿಂಜರಿಯುವುದು ಸಹಜ. ಪರಿಸರ, ಆರೋಗ್ಯ ಮೊದಲಾದ ವಿಚಾರಗಳು ಮುಂದೆ ಬಂದಾಗ ಬದಲಾಗಬೇಕಾದುದು ಅನಿವಾರ್ಯ. ಗ್ರಾಮಾಭಿವೃದ್ಧಿ ಯೋಜನೆಯು ನೈಸರ್ಗಿಕ ಗಣೇಶ ವಿಗ್ರಹದ ಮಾದರಿಯೊಂದನ್ನು ಜನರ ಮುಂದಿಟ್ಟಿದೆ. ಜನಸ್ವೀಕೃತಿಯೂ ಪಡೆಯುತ್ತಿದೆ. ನಿಜಾರ್ಥದಲ್ಲಿ ಇದೊಂದು ಸದ್ದಿಲ್ಲದ ಪರಿಸ್ನೇಹಿ ಆಂದೋಲನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT