ತಮ್ಮ ‘ಸ್ಪೈಡರ್’ ಸಿನಿಮಾ ತೆರೆಗೆ ಬರುವ ಮುಂಚೆಯೇ ‘ಭರತ್ ಅನೇ ನೇನು’ ಎಂಬ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ ತೆಲುಗು ನಟ ಮಹೇಶ್ಬಾಬು.
ಸಿನಿಮಾ ಆಯ್ಕೆಯಲ್ಲಿ ಜಾಣ್ಮೆ ತೋರುವ ಮಹೇಶ್ ಹೀಗೆ ಒಂದರ ಹಿಂದೆ ಒಂದು ಸಿನಿಮಾ ಮಾಡಿದ್ದು ಕಡಿಮೆ, ಒಂದು ಸಿನಿಮಾ ಬಿಡುಗಡೆ ಆಗುವ ಮೊದಲೇ ಮತ್ತೊಂದು ಚಿತ್ರೀಕರಣದಲ್ಲಿ ತೊಡಗಿಕೊಂಡಿರುವುದು ಮಹೇಶ್ ಅಭಿಮಾನಿಗಳಲ್ಲಿ ಆಶ್ಚರ್ಯದ ಜೊತೆಗೆ ಸಿನಿಮಾ ಬಗ್ಗೆ ಕುತೂಹಲವನ್ನೂ ಕೆರಳಿಸಿದೆ.
ಈಗಾಗಲೇ ಆಂಧ್ರದಲ್ಲಿ ಒಂದು ಹಂತದ ಚಿತ್ರೀಕರಣ ಮುಗಿದಿದೆ. ಸಿನಿಮಾ ತಂಡಕ್ಕೆ ಎರಡನೇ ಹಂತದಲ್ಲಿ ಅಡೆತಡೆ ಎದುರಾಗಿದೆ. ಭರದಿಂದ ಸಾಗುತ್ತಿದ್ದ ‘ಭರತ್..’ ಚಿತ್ರದ ಚಿತ್ರೀಕರಣಕ್ಕೆ ಪುರಾತತ್ವ ಇಲಾಖೆ ಬ್ರೇಕ್ ಹಾಕಿದೆ. ಲಖನೌನ ಐತಿಹಾಸಿಕ ಕಟ್ಟಡವೊಂದರಲ್ಲಿ ಹೊಡೆದಾಟದ ದೃಶ್ಯ ಚಿತ್ರೀಕರಿಸಲು ತಯಾರಾಗಿದ್ದ ಚಿತ್ರತಂಡಕ್ಕೆ ಪುರಾತತ್ವ ಇಲಾಖೆ ಅಧಿಕಾರಿಗಳು ಚಿತ್ರೀಕರಣ ಮಾಡದಂತೆ ತಡೆ ಹಿಡಿದಿದ್ದಾರೆ.
ಚಿತ್ರೀಕರಣ ನಡೆದರೆ ಐತಿಹಾಸಿಕ ಕಟ್ಟಡಕ್ಕೆ ಧಕ್ಕೆ ಉಂಟಾಗುತ್ತದೆ ಎಂಬ ಕಾರಣಕ್ಕೆ ಪುರಾತತ್ವ ಇಲಾಖೆ ಚಿತ್ರೀಕರಣಕ್ಕೆ ತಡೆಯೊಡ್ಡಿದೆ. ನಂತರ ತಂಡ ಲಖನೌ ಹೊರವಲಯದ ಮೂಸಾಬಾದ್ಗೆ ಚಿತ್ರೀಕರಣವನ್ನು ಸ್ಥಳಾಂತರಿಸಿದೆ.
‘ಭರತ್..’ ಸಿನಿಮಾವನ್ನು ಕೊರಟಾಲ ಶ್ರೀನಿವಾಸ್ ನಿರ್ದೇಶಿಸುತ್ತಿದ್ದಾರೆ, ಈ ಮುಂಚೆ ಮಹೇಶ್, ಕೊರಟಾಲ ಶ್ರೀನಿವಾಸ್ ಜೋಡಿ ‘ಶ್ರೀಮಂತುಡು’ ಚಿತ್ರ ನಿರ್ಮಿಸಿ ಗೆದ್ದಿತ್ತು. ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಈ ಚಿತ್ರದ ಮೂಲಕ ಮೊದಲ ಬಾರಿಗೆ ದಕ್ಷಿಣ ಭಾರತದ ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ.
ಈ ಮುಂಚೆ ಇವರು ಹಿಂದಿಯ ‘ಫಗ್ಲಿ’, ‘ಧೋನಿ’ ಸಿನೆಮಾಗಳಲ್ಲಿ ನಟಿಸಿದ್ದರು. ಚಿತ್ರಕ್ಕೆ ದೇವಿಶ್ರೀಪ್ರಸಾದ್ ಸಂಗೀತ ನೀಡಿದ್ದಾರೆ. ನಿರ್ಮಾಣದ ಜವಾಬ್ದಾರಿ ಡಿವಿವಿ ದಾನಯ್ಯ ಅವರದ್ದು.