ಮುಂಬೈ : ಹಬ್ಬದ ದಿನಗಳು ಹತ್ತಿರ ಬರುತ್ತಿರುವಂತೆಯೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ), ಕಾರ್ ಖರೀದಿ, ಚಿನ್ನದ ಸಾಲ ಮತ್ತು ವೈಯಕ್ತಿಕ ಸಾಲಗಳ ಮಂಜೂರಾತಿ ಪ್ರಕ್ರಿಯೆ ಶುಲ್ಕವನ್ನು ಶೇ 100ರಷ್ಟು ಮನ್ನಾ ಮಾಡಿದೆ.
ಗೃಹ ಸಾಲಕ್ಕೆ ಈಗಾಗಲೇ ಈ ರಿಯಾಯ್ತಿ ಜಾರಿಯಲ್ಲಿದೆ. ಈ ಹೊಸ ಕೊಡುಗೆಯು ಸೀಮಿತ ಅವಧಿಯವರೆಗೆ ಇರಲಿದೆ ಎಂದು ಬ್ಯಾಂಕ್ ತಿಳಿಸಿದೆ.
ಕಾರ್ ಖರೀದಿ ಸಾಲದ ಮೇಲಿನ ಪ್ರೊಸೆಸಿಂಗ್ ಶುಲ್ಕ ಮನ್ನಾ ಕೊಡುಗೆಯು ಈ ವರ್ಷದ ಡಿಸೆಂಬರ್ 31ರವರೆಗೆ ಜಾರಿಯಲ್ಲಿ ಇರಲಿದೆ. ವೈಯಕ್ತಿಕ ಚಿನ್ನದ ಸಾಲದ ಮೇಲಿನ ಶೇ 50ರಷ್ಟು ಶುಲ್ಕ ವಿನಾಯ್ತಿ ಕೊಡುಗೆಯು ಅಕ್ಟೋಬರ್ 31ರವರೆಗೆ ಇರಲಿದೆ. ಬ್ಯಾಂಕ್ ಕೊಡ ಮಾಡುವ ವೈಯಕ್ತಿಕ ಸಾಲ (ಎಕ್ಸ್ಪ್ರೆಸ್ ಕ್ರೆಡಿಟ್) ಸೌಲಭ್ಯದ ಮೇಲಿನ ಶೇ 50ರಷ್ಟು ಶುಲ್ಕ ರಿಯಾಯ್ತಿ ಕೊಡುಗೆಯು ಸೆಪ್ಟೆಂಬರ್ ತಿಂಗಳಾಂತ್ಯದವರೆಗೆ ಇರಲಿದೆ.
ಆಮದು ನಿರ್ಬಂಧ ಪಟ್ಟಿಯಲ್ಲಿ ಉದ್ದು, ಹೆಸರು ಬೇಳೆ
ನವದೆಹಲಿ (ಪಿಟಿಐ): ಉದ್ದು ಮತ್ತು ಹೆಸರು ಬೇಳೆಗಳನ್ನು ಆಮದು ನಿರ್ಬಂಧ ಪಟ್ಟಿಯಲ್ಲಿ ಸೇರಿಸಿರುವ ಕೇಂದ್ರ ಸರ್ಕಾರ, ಮೂರು ಲಕ್ಷ ಟನ್ಗಳ ಮಿತಿ ವಿಧಿಸಿದೆ.
ದೇಶಿ ಮಾರುಕಟ್ಟೆಯಲ್ಲಿ ಇವುಗಳ ಬೆಲೆ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಮಟ್ಟಕ್ಕೆ ಕುಸಿದಿದೆ. ಇದರಿಂದ ರೈತರಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಈ ಕಾರಣಕ್ಕೆ ಇವುಗಳ ಮುಕ್ತ ಆಮದನ್ನು ಈಗ ನಿರ್ಬಂಧಿತ ಆಮದು ವ್ಯಾಪ್ತಿಗೆ ತರಲಾಗಿದೆ ಎಂದು ವಿದೇಶ ವ್ಯಾಪಾರ ಮಹಾ ನಿರ್ದೇಶನಾಲಯವು ತಿಳಿಸಿದೆ.
ಹೆಸರು ಬೇಳೆ ಉತ್ಪಾದನೆಯು 2016–17ನೇ ಬೆಳೆ ವರ್ಷದಲ್ಲಿ 20 ಲಕ್ಷ ಟನ್ಗಳಿಗೆ ತಲುಪಿತ್ತು.