ಚೆನ್ನೈ/ದೆಹಲಿ: ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರ ಮೂರು ದಿನಗಳ ತಮಿಳುನಾಡು ಪ್ರವಾಸವನ್ನು ಮುಂದೂಡಲಾಗಿದೆ. ಸದ್ಯದಲ್ಲೇ ಕೇಂದ್ರ ಸಂಪುಟ ಪುನರ್ ರಚನೆಯಾಗಲಿದೆ ಎಂಬ ವದಂತಿಗೆ ಇದು ಪುಷ್ಟಿ ನೀಡಿದೆ.
‘ಅವರು ಈ ಸಂದರ್ಭದಲ್ಲಿ ದೆಹಲಿಯಲ್ಲಿ ಇರಬೇಕಾದುದು ಹೆಚ್ಚು ಮುಖ್ಯವಾಗಿದೆ. ಹಾಗಾಗಿ ಪ್ರವಾಸ ಮುಂದೂಡಿಕೆಯಾಗಿದೆ’ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.
ಬಿಜೆಪಿ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಮತ್ತು ಇತರ ಮಹತ್ವದ ಕಾರ್ಯಕ್ರಮಗಳ ಕಾರಣದಿಂದ ಷಾ ಅವರು ಭೇಟಿಯನ್ನು ಮುಂದಕ್ಕೆ ಹಾಕಲಾಗಿದೆ ಎಂದು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ತಮಿಳುಸಾಯಿ ಸುಂದರ್ರಾಜನ್ ಹೇಳಿದ್ದಾರೆ.
ಷಾ ಅವರ 95 ದಿನಗಳ ಭಾರತ ಪ್ರವಾಸದ ಭಾಗವಾಗಿ ತಮಿಳುನಾಡು ಪ್ರವಾಸವನ್ನು ಹಮ್ಮಿಕೊಳ್ಳಲಾಗಿದೆ. ಷಾ ಅವರ ತಮಿಳುನಾಡು ಪ್ರವಾಸ ಎರಡನೇ ಬಾರಿಗೆ ಮುಂದೂಡಿಕೆಯಾಗಿದೆ. ಭೇಟಿಯ ಮುಂದಿನ ದಿನಾಂಕವನ್ನು ಪ್ರಕಟಿಸಲಾಗಿಲ್ಲ.