ಜಾವಗಲ್: ಪಟ್ಟಣದ ಹಳೇ ಬಸ್ನಿಲ್ದಾಣ ಸಮೀಪ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 234ರ ಕಾಮಗಾರಿ ಅವೈಜ್ಞಾನಿಕವಾಗಿ ನಡೆದಿರುವ ಕಾರಣ ರಸ್ತೆ ಮೇಲೆ ಮಳೆ ನೀರು ನಿಲ್ಲುತ್ತದೆ. ಜೋರು ಮಳೆ ಬಂದರೆ ಎರಡು ಅಡಿ ನೀರು ನಿಲ್ಲುತ್ತದೆ. ಇದರಿಂದ ಹಾರನಹಳ್ಳಿ ರಸ್ತೆ ಕಡೆ ಬರುವ ಮತ್ತು ಹೋಗುವ ದ್ವಿಚಕ್ರ ಹಾಗೂ ನಾಲ್ಲು ಚಕ್ರದ ವಾಹನಗಳ ಕೆಟ್ಟು ನಿಂತು ಸಾಕಷ್ಟ ತೊಂದರೆ ಉಂಟಾಗಿದೆ. ವಾಹನಗಳು ರಸ್ತೆ ಮಧ್ಯೆ ನಿಲ್ಲುವುದರಿಂದ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ರಸ್ತೆ ಗುಂಡಿಯಲ್ಲಿ ಇಳಿದ ವಾಹನಗಳನ್ನು ನೂಕಲು ಹರಸಾಹಸ ಪಡಬೇಕಾಗಿದೆ. ಜೆ.ಕೆ.ಕೃಷ್ಣಮೂರ್ತಿ, ವ್ಯಾಪಾರಿ
ಪಾಳು ಬಿದ್ದ ಶೌಚಾಲಯ
ಅರಸೀಕೆರೆ: ತಾಲ್ಲೂಕಿನ ಮಾಡಾಳು ಗ್ರಾಮದ ಸ್ವರ್ಣಗೌರಿ ಅನುದಾನಿತ ಪ್ರೌಢಶಾಲೆ ಉತ್ತಮ ಕಟ್ಟಡ ಹೊಂದಿದೆ. ಆದರೆ ವಿದ್ಯಾರ್ಥಿಗಳಿಗೆ ನಿರ್ಮಿಸಿರುವ ಶೌಚಾಲಯ ಮಾತ್ರ ಬಳಕೆಯಾಗುತ್ತಿಲ್ಲ.
ಮಕ್ಕಳು ಮಲ, ಮೂತ್ರ ವಿಸರ್ಜನೆಗೆ ಬಯಲಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವರ್ಷದಿಂದ ವರ್ಷಕ್ಕೆ ಬಾಲಕಿಯರ ಸಂಖ್ಯೆ ಹೆಚ್ಚುತ್ತಿದ್ದು, ಅವರು ಮೂತ್ರ ವಿಸರ್ಜನೆಗೆ ಮುಜುಗರದಿಂದಲೇ ಶಾಲೆ ಹಿಂಭಾಗದಲ್ಲಿ ಬೆಳೆದಿರುವ ಗಿಡ–ಗಂಟಿಗಳ ಮರೆಗೆ ಹೋಗುವುದು ಅನಿವಾರ್ಯವಾಗಿದೆ.
ಈ ಬಗ್ಗೆ ಪೋಷಕರು ಹಾಗೂ ವಿದ್ಯಾರ್ಥಿಗಳು ಶಾಲೆಯ ಆಡಳಿತ ಮಂಡಳಿಗೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಸಂಬಂಧಪಟ್ಟ ಇಲಾಖೆ ಅಧಿಕಾರಿ ಗಳು ಪಾಳು ಬಿದ್ದಿರುವ ಶೌಚಗೃಹ ದುರಸ್ತಿಪಡಿಸಿ ಸೌಲಭ್ಯ ಕಲ್ಪಿಸಬೇಕು. ಇಲ್ಲದಿದ್ದರೆ ಶಾಲೆ ಎದುರು ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಪೋಷಕರು ಎಚ್ಚರಿಕೆ ನೀಡಿದ್ದಾರೆ. ಶವಣ್ಣ. ರಮೇಶ್, ಮಾಡಾಳು ನಿವಾಸಿಗಳು