ಮದ್ದೂರು: ಮರಳು ದಂಧೆಯಲ್ಲಿ ಕಂದಾಯ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳೇ ಶಾಮೀಲಾಗಿರುವುದು ತಾಲ್ಲೂಕಿನ ಕೂಳಗೆರೆ ಗ್ರಾಮದಲ್ಲಿ ಪೊಲೀಸ್ ದಾಳಿ ವೇಳೆ ಬೆಳಕಿಗೆ ಬಂದಿದೆ. ಚಿಕ್ಕರಸಿನಕೆರೆಕೆರೆ ಹೋಬಳಿಯ ಕಂದಾಯ ನಿರೀಕ್ಷಕ ರಾಮಣ್ಣ, ಕೂಳಗೆರೆ ಗ್ರಾಮ ಪಂಚಾಯಿತಿ ಗ್ರಾಮ ಲೆಕ್ಕಾಧಿಕಾರಿ ದ್ಯಾವಪ್ಪ, ಕೂಳಗೆರೆ ಗ್ರಾಮ ಪಂಚಾಯಿತಿ ಪಿಡಿಒ ಅನೀಲ್ ಕುಮಾರ್ ಮರಳು ದಂಧೆಯ ಆರೋಪ ಎದುರಿಸುತ್ತಿರುವ ಅಧಿಕಾರಿಗಳು.
ತಾಲ್ಲೂಕಿನ ಕೂಳಗೆರೆ ಗ್ರಾಮದ ಸಮೀಪ ಶಿಂಷಾ ನದಿಯಲ್ಲಿ ಮರಳು ದಂಧೆ ನಡೆಯುತ್ತಿರುವ ಬಗ್ಗೆ ಪಟ್ಟಣ ಪೊಲೀಸರಿಗೆ ಭಾನುವಾರ ಸಂಜೆ ಮಾಹಿತಿ ತಿಳಿದು ಬಂದಿತು. ಈ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯರಾತ್ರಿ ದಾಳಿ ನಡೆಸಿದರು.
ದಾಳಿ ಸಮಯದಲ್ಲಿ ರಾಜು, ಕಳಸೇಗೌಡ, ಕೆಂಪರಾಜು, ರಾಮು, ಮನು ಮತ್ತು ಮಧು ಎಂಬ ಆರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದರು. ಇವರಂದ ಜೆಸಿಬಿ ಯಂತ್ರ, ಐದು ಟ್ರ್ಯಾಕ್ಟರ್ಗಳನ್ನು ವಶಕ್ಕೆ ಪಡೆದಿದ್ದರು.
ಸ್ಥಳದಲ್ಲಿದ್ದ ಉಳಿದ ಏಳು ಜನರು ಪೊಲೀಸರನ್ನು ಕಂಡು ಪರಾರಿಯಾದರು. ಬಂಧಿತರಿಂದ ಪರಾರಿಯಾದವರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದಾಗ, ಪರಾರಿಯಾದವರಲ್ಲಿ ಈ ಮೂವರು ಅಧಿಕಾರಿಗಳು ಸ್ಥಳದಲ್ಲಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ.
ಕ್ರಮ ಮರಳು ದಂಧೆಯಲ್ಲಿ ಅಧಿಕಾರಿಗಳ ಹೆಸರು ಕೇಳಿ ಬಂದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಬಂಧಿತ ಆರೋಪಿಗಳು ಉದ್ದೇಶ ಪೂರ್ವಕವಾಗಿ ಅಧಿಕಾರಿಗಳ ಹೆಸರನ್ನು ಬಳಸಿಕೊಂಡರೆ, ಅಥವಾ ಅಧಿಕಾರಿಗಳು ಮರಳು ದಂಧೆಯಲ್ಲಿ ನಿಜವಾಗಿಯೂ ಭಾಗಿಯಾಗಿದ್ದಾರೆ ಎಂಬ ಬಗೆ ಪಟ್ಟಣ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಈ ಸಂಬಂಧ ಅಧಿಕಾರಿಗಳು ಸೇರಿದಂತೆ ಆರು ಮರಳುಕೋರರ ಮೇಲೆ ಪ್ರಕರಣ ದಾಖಲಿಸಲಾಗಿದೆ.