ಬೀಜಿಂಗ್ : ಸಿಕ್ಕಿಂ ವಲಯದ ದೋಕಲಾ ಪ್ರದೇಶದಲ್ಲಿ ಇರುವ ಸೇನೆಯನ್ನು ಭಾರತ ಬೇಷರತ್ ಆಗಿ ವಾಪಸ್ ಕರೆಯಿಸಿಕೊಂಡರೆ ಮಾತ್ರ ಬಿಕ್ಕಟ್ಟು ಬಗೆಹರಿಯಲು ಸಾಧ್ಯ ಎಂದು ಚೀನಾ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ದೋಕಲಾ ಸಮಸ್ಯೆ ಬಗೆಹರಿಸಲು ಚೀನಾ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಭಾರತದ ಗೃಹ ಸಚಿವ ರಾಜನಾಥ್ಸಿಂಗ್ ಅವರು ಸೋಮವಾರ ನೀಡಿದ ಹೇಳಿಕೆಗೆ ಚೀನಾ ಈ ಪ್ರತಿಕ್ರಿಯೆ ನೀಡಿದೆ.
‘ಭಾರತೀಯ ಸೇನೆ ಅಕ್ರಮವಾಗಿ ಗಡಿ ದಾಟಿದೆ. ದೋಕಲಾ ಪ್ರದೇಶದಲ್ಲಿ ಚೀನಾ ರಸ್ತೆ ನಿರ್ಮಿಸುವುದಕ್ಕೆ ಭಾರತ ಅಡ್ಡಿಪಡಿಸುವುದು ಹಾಸ್ಯಾಸ್ಪದ. ಹೀಗಾಗಿ ಭಾರತ ತನ್ನ ಸೇನೆ ಮತ್ತು ಎಲ್ಲ ಸೇನಾ ಉಪಕರಣಗಳನ್ನು ವಾಪಸ್ ಪಡೆಯುವ ಅಗತ್ಯವಿದೆ’ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ಹುವಾ ಚುನ್ಯಿಂಗ್ ತಿಳಿಸಿದ್ದಾರೆ.
‘ಚೀನಾ ಶಾಂತಿ ಬಯಸುತ್ತದೆ. ಶಾಂತಿ ನೆಲೆಸಲು ನಡೆಯುವ ಪ್ರಯತ್ನಗಳನ್ನು ಬೆಂಬಲಿಸುತ್ತೇವೆ. ಜತೆಗೆ ನಮ್ಮ ಪ್ರದೇಶದ ಸಾರ್ವಭೌಮತೆಯನ್ನು ರಕ್ಷಿಸಲು ಬದ್ಧರಾಗಿದ್ದೇವೆ’ ಎಂದು ಹೇಳಿದರು.