ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಗಾರರಿಗೆ ಪುನಶ್ಚೇತನ ಪ್ಯಾಕೇಜ್

Last Updated 23 ಆಗಸ್ಟ್ 2017, 9:04 IST
ಅಕ್ಷರ ಗಾತ್ರ

ಮಂಗಳೂರು: ತಾಲ್ಲೂಕಿನ ಉಳ್ಳಾಲ ಸುತ್ತಮುತ್ತ ತೆಂಗಿನ ಮರಗಳಲ್ಲಿ ಕಪ್ಪು ಹುಳ ಬಾಧೆ ನಿಯಂತ್ರಣಕ್ಕೆ ಈಗಾಗಲೇ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ತೀವ್ರ ಹುಳ ಪೀಡಿತವಾಗಿರುವ ಮರಗಳನ್ನು ತೆಗೆದು, ಹೊಸದಾಗಿ ತೆಂಗಿನ ಗಿಡ ನೆಡಲು ರೈತರಿಗೆ ತೋಟಗಾರಿಕೆ ಇಲಾಖೆಯು ಪುನಶ್ಚೇತನ ಪ್ಯಾಕೇಜ್ ಜಾರಿಗೊಳಿಸಿದೆ ಎಂದು ಮಂಗಳೂರು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಸೀಮಾ ತಿಳಿಸಿದರು.

ತೋಟಗಾರಿಕೆ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳ ಆಶ್ರಯದಲ್ಲಿ ಸೋಮವಾರ ಕಲ್ಲಾಪು ಪರಿಸರದಲ್ಲಿ ಕಪ್ಪು ಹುಳ ಪೀಡಿತ ತೆಂಗಿನ ತೋಟದಲ್ಲಿ ನಡೆದ ಹುಳಬಾಧೆ ನಿಯಂತ್ರಣ ಕುರಿತು ಬೆಳೆಗಾರರಿಗೆ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪುನಶ್ಚೇತನ ಪ್ಯಾಕೇಜ್ ಅನ್ವಯ 1 ತೆಂಗಿನ ಮರಕ್ಕೆ ₹1ಸಾವಿರದಂತೆ ಒಂದು ಹೆಕ್ಟೇರ್ ಜಮೀನಿಗೆ ಗರಿಷ್ಠ ₹44,750 ಪರಿಹಾರವನ್ನು ತೆಂಗಿನ ಮರಗಳ ಪುನಶ್ಚೇತನಕ್ಕೆ ಇಲಾಖೆ ನೀಡಲಿದೆ. ಬೆಳೆಗಾರರು ಇದರ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆ ಹಾಗೂ ಕಂದಾಯ ಇಲಾಖೆ ಜತೆಗೂಡಿ ಹುಳ ಬಾಧೆಯಿಂದ ಹಾನಿಗೀಡಾಗಿರುವ ಮರ ಮತ್ತು ತೋಟಗಳ ಜಂಟಿ ಸಮೀಕ್ಷೆಯನ್ನು ಶೀಘ್ರದಲ್ಲೇ ನಡೆಸಲಾಗುವುದು. ಅಂದಾಜು 100 ಹೆಕ್ಟೇರ್ ಜಮೀನಿನಲ್ಲಿ ತೆಂಗಿನ ಮರಗಳಿಗೆ ಕಪ್ಪು ಹುಳ ಬಾಧೆ ತಗುಲಿದೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಈ ಬಗ್ಗೆ ನಿಖರ ವಾಗಿ ಅಂದಾಜಿಸಲು ಸಮೀಕ್ಷೆ ನಡೆಸ ಲಾಗುತ್ತಿದ್ದು, ಈ ವಾರದಲ್ಲೇ ಸಮೀಕ್ಷೆ ಆರಂಭವಾಗಲಿದೆ ಎಂದು ಹೇಳಿದರು.

ತೆಂಗಿನ ಮರಗಳಿಗೆ ಕಪ್ಪು ಹುಳ ಬಾಧೆ ನಿಯಂತ್ರಿಸಲು ಮರಗಳಿಗೆ ವೈಜ್ಞಾನಿಕವಾಗಿ ಸಂಶೋಧಿಸಿದ ಪರೋಪ ಜೀವಿಗಳನ್ನು ಬಿಡಲಾಗುತ್ತಿದೆ. ಪ್ರತಿ 15 ದಿನಗಳಿಗೊಮ್ಮೆ ಪರೋಪ ಜೀವಿಗಳನ್ನು ತೆಂಗಿನ ಮರಕ್ಕೆ ಬಿಡುವುದರಿಂದ ಕಪ್ಪುಹುಳ ಬಾಧೆ ನಿಯಂತ್ರಣವಾಗಲಿದೆ.

ತೋಟಗಾರಿಕೆ ಇಲಾಖೆಯು ಬೆಳೆಗಾರರಿಗೆ ಪರೋಪ ಜೀವಿಯನ್ನು ಒದಗಿಸಲಿದೆ. ಈ ನಿಟ್ಟಿನಲ್ಲಿ ಸುಮಾರು 20ಲಕ್ಷ ಪರೋಪ ಜೀವಿ ಅಗತ್ಯವಿದ್ದು, ಈ ಪೈಕಿ ತುಂಬೆಯಲ್ಲಿರುವ ತೋಟಗಾರಿಕೆ ಇಲಾಖೆಯ ಘಟಕದಲ್ಲಿ 12ಲಕ್ಷ ಜೀವಿಗಳನ್ನು ಉತ್ಪಾದಿಸ ಲಾಗುವುದು. ಉಳಿದ ಜೀವಿಗಳನ್ನು ಹೊರಜಿಲ್ಲೆಗಳಿಂದ ತರಿಸಲಾಗುವುದು ಎಂದು ಸೀಮಾ ತಿಳಿಸಿದರು.

ಬೆಳೆಗಾರರು ತೆಂಗಿನ ಮರಗಳಿಗೆ ಸೂಕ್ತ ನಿರ್ವಹಣಾ ಪದ್ಧತಿ ಅನುಸರಿಸಿದರೆ ಕೀಟಬಾಧೆ ಕಡಿಮೆಯಾಗಲಿದೆ. ಮುಖ್ಯವಾಗಿ ಹುಳಬಾಧೆಗೆ ಈಡಾಗಿರುವ ತೆಂಗಿನ ಗರಿಗಳನ್ನು ಹಾಗೆಯೇ ಬಿಡದೆ, ಸುಟ್ಟು ನಾಶ ಮಾಡಬೇಕು. ಗರಿಗಳನ್ನು ಸುಡದೆ ಸಂಗ್ರಹಿಸಿಟ್ಟರೆ, ಕೀಟಬಾಧೆ ಇನ್ನಷ್ಟು ಅಧಿಕವಾಗಲಿದೆ.

ತೆಂಗಿನ ಗಿಡಗಳಿಗೆ ಗೊಬ್ಬರ ನಿರ್ವಹಣೆ ಹಾಗೂ ಸಾವಯವ ಹೊದಿಕೆಯಿಂದ ನಿಯಂತ್ರಣವಾಗಲಿದೆ. ಈ ನಿಟ್ಟಿನಲ್ಲಿ ಬೆಳೆಗಾರರ ಸಹಕಾರ ಅಗತ್ಯವಾಗಿದೆ ಎಂದು ತೋಟಗಾರಿಕೆ ಅಧಿಕಾರಿಗಳು ಮಾಹಿತಿ ನೀಡಿದರು.

ಬಳಿಕ, ಇಲ್ಲಿನ ತೆಂಗಿನ ಮರಗಳಿಗೆ ಕಪ್ಪುಹುಳ ನಿಯಂತ್ರಣಕ್ಕೆ ಪರೋಪ ಜೀವಿಗಳನ್ನು ಬಿಡಲಾಯಿತು. ಕಾರ್ಯಕ್ರಮದಲ್ಲಿ ತೆಂಗಿನ ಬೆಳೆಗಾರರು, ತೋಟಗಾರಿಕೆ ಇಲಾಖೆ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT