ಪಲ್ಲೆಕೆಲೆ: ಶ್ರೀಲಂಕಾ ತಂಡವು ಸತತ ಸೋಲುಗಳಿಂದಾಗಿ ಆತ್ಮವಿಶ್ವಾಸವನ್ನೇ ಕಳೆದುಕೊಂಡಿದೆ. ಆಟಗಾರರಲ್ಲಿ ಗೆಲ್ಲುವ ಛಲವೇ ಇಲ್ಲದಂತಾಗಿದೆ ಎಂದು ಹಿರಿಯ ಕ್ರಿಕೆಟಿಗ ಮಾಹೇಲ ಜಯವರ್ಧನೆ ಹೇಳಿದ್ದಾರೆ.
‘ಸೋಲಿನ ಭೀತಿಯಿಂದಾಗಿಯೇ ತಂಡವು ವೈಫಲ್ಯ ಅನುಭವಿಸುತ್ತಿದೆ. ಎಲ್ಲ ವಿಭಾಗಗಳಲ್ಲೂ ತಂಡ ಕುಸಿತ ಕಂಡಿದೆ. ಹೋರಾಟಕಾರಿ ಮನೋಭಾವ ಬೆಳೆಸಿಕೊಂಡು ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯವಿದೆ’ ಎಂದು ಕ್ರೀಡಾ ವೆಬ್ಸೈಟ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
‘ಟೆಸ್ಟ್ ಸರಣಿಯಲ್ಲಿ ಅನುಭವಿಸಿದ ಸೋಲು ತಂಡದ ಆಟಗಾರರಿಗೆ ನಿರಾಸೆ ಉಂಟುಮಾಡಿದೆ. ವಿಶ್ವದ ಅಗ್ರ ಕ್ರಮಾಂಕದ ತಂಡದೊಂದಿಗೆ ಸ್ಪರ್ಧಿಸುವುದು ಆಟಗಾರರಿಗೆ ದೊಡ್ಡ ಸವಾಲಾಗಿತ್ತು ನಿಜ. ಆದರೆ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲರಾದ ಕಾರಣ ಹೀನಾಯ ಸೋಲು ಅನುಭವಿಸಬೇಕಾಯಿತು’ ಎಂದು ಅವರು ಹೇಳಿದರು.