ಹಾಸನ: ಕ್ಷೇತ್ರದ ಶಾಸಕ ಎಚ್.ಎಸ್. ಪ್ರಕಾಶ್ ಅವರು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ವಿರುದ್ಧ ಹರಿಹಾಯಲು ಕರೆದಿದ್ದ ಪತ್ರಿಕಾಗೋಷ್ಠಿಯ ಆರಂಭದಲ್ಲಿಯೇ ಚುನಾವಣೆ ಮತ್ತು ಮಸ್ತಕಾಭಿಷೇಕದ ವ್ಯಾಖ್ಯಾನ ಮಾಡಿದ್ದು ವಿಶೇಷವಾಗಿತ್ತು.
ಶಾಸಕರು ತಮ್ಮ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಅವರನ್ನು ಮಾತಿಗೆಳೆದ ಮಾಧ್ಯಮದವರು, ‘ಏನ್ ಸರ್ ಮಸ್ತಕಾಭಿಷೇಕ ಜೋರಾ? ಎಂದರು.
ಆಗ ಶಾಸಕರು, ‘ಬಾಹುಬಲಿಗೆ 12 ವರ್ಷಕ್ಕೊಮ್ಮೆ ಅಭಿಷೇಕ ಆದ್ರೆ ನಮ್ಗೆಲ್ಲ 5 ವರ್ಷಕ್ಕೊಮ್ಮೆ ನಡೆಯುತ್ತೆ. ಜನ ಹಾಲು ಹಾಕ್ತಾರೋ ಅಥವಾ ಬೇರೆ ಏನಾದ್ರು ಹಾಕ್ತಾರೋ ಕಾದು ನೋಡಬೇಕು. ಡಿಸೆಂಬರ್ ಆಗಲಿ ಮೇ ಆಗಲಿ, ನಾನಂತೂ ಅಭಿಷೇಕ ಮಾಡಿಸಿಕೊಳ್ಳುವುದಕ್ಕೆ ಶೇ 100ರಷ್ಟು ತಯಾರಾಗಿದ್ದೇನೆ’ ಎಂದರು.
ಸುದ್ದಿಗೋಷ್ಠಿಯ ವಿಷಯ ಹೇಳಲು ಆರಂಭಿಸಿದ ಸ್ವಲ್ಪ ಹೊತ್ತಿನಲ್ಲೇ ಶಾಸಕರು ಮತ್ತೆ ಅಭಿಷೇಕದ ಚರ್ಚೆಗೆ ಬಂದರು. ‘ಎಲ್ಲ ನಿಮ್ಮ ಕೈಯಲ್ಲೇ ಇದೆ ಸರ್.
ಶಾಸಕರ ನಡೆಗೆ ಅಭೂತಪೂರ್ವ ಬೆಂಬಲ, ಜನರಿಂದ ಉತ್ತಮ ನಿರೀಕ್ಷೆ ಇಂತಹ ತಲೆ ಬರಹಗಳು ಪತ್ರಿಕೆಯಲ್ಲಿ ಬರುತ್ತಿದ್ದರೆ ನಮಗೂ ಸಮಾಧಾನ ಇರುತ್ತೆ. ನಮ್ಮನ್ನ ಮುಳುಗಿಸೋದು ಅಥವಾ ತೇಲಿಸೋದು ಎಲ್ಲ ನಿಮ್ಮ ಕೈಲಿದೆ ಸರ್’ ಎಂದು ಹೇಳುವ ಮೂಲಕ ನಗೆ ಚಟಾಕಿ ಹಾರಿಸಿದರು.