ಅಫಜಲಪುರ: ತಾಲ್ಲೂಕಿನಲ್ಲಿ ಕಳೆದ 3 ದಿನಗಳಿಂದ ಅಲ್ಲಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ತೊಗರಿ ಮತ್ತು ಸೂರ್ಯಕಾಂತಿ, ಹತ್ತಿ ಬೆಳೆಗೆ ಅನುಕೂಲವಾಗಿದೆ. ಬೆಳೆಗಳು ಚೇತರಿಸಿಕೊಳ್ಳುತ್ತಿವೆ.
ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ಹೆಸರು, ಉದ್ದು, ಎಳ್ಳು, ಮೆಕ್ಕೆಜೋಳ ಸಂಪೂರ್ಣವಾಗಿ ತೇವಾಂಶ ಕೊರತೆಯಿಂದ ಹಾಳಾಗಿವೆ. ಒಂದು ತಿಂಗಳ ಹಿಂದೆ ಇದೇ ಮಳೆ ಬಂದಿದ್ದರೆ ಹೆಸರು, ಉದ್ದು ಬಂಪರ್ ಬೆಳೆ ಬರುತ್ತಿದ್ದವು ಎಂದು ಹೇಳಲಾಗುತ್ತಿದೆ.
ಸದ್ಯಕ್ಕೆ 3 ದಿನಗಳಿಂದ ಮಳೆಯಾಗುತ್ತಿದೆ. ಕೆಲವು ಕಡೆ ಧಾರಾಕಾರ ಮಳೆಯಾದರೆ, ಇನ್ನೂ ಕೆಲವು ಕಡೆ ತುಂತುರು ಮಳೆಯಾಗುತ್ತಿದೆ. ಘತ್ತರಗಿ ಭಾಗದಲ್ಲಿ ಚವಡಾಪುರ ವಲಯದಲ್ಲಿ ಹೆಚ್ಚು ಮಳೆಯಾಗಿದೆ. ಅಫಜಲಪುರ ಮತ್ತು ಕರಜಗಿ ಹೋಬಳಿಯಲ್ಲಿ ಕಡಿಮೆ ಮಳೆಯಾಗಿದೆ ಎಂದು ಕೃಷಿ ಇಲಾಖೆಯವರು ತಿಳಿಸಿದ್ದಾರೆ.
ಮಳೆ ಕುರಿತು ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ ಸೋಮವಾರ ಮಾಹಿತಿ ನೀಡಿ, ಹೆಚ್ಚು ಕಡಿಮೆ ತಾಲ್ಲೂಕಿನ ಎಲ್ಲಾ ಭಾಗದಲ್ಲಿ ಮಳೆಯಾಗುತ್ತಿದೆ. ಆದರೆ, ಮಳೆ 2 ತಿಂಗಳು ವಿಳಂಬವಾಗಿದ್ದರಿಂದ ಶೇ 90 ಉದ್ದು, ಹೆಸರು, ಎಳ್ಳು, ಮೆಕ್ಕೆಜೋಳ ಬೆಳೆ ಹಾಳಾಗಿ ಹೋಗಿವೆ ಎಂದು ತಿಳಿಸಿದ್ದಾರೆ.
ಸದ್ಯಕ್ಕೆ ಮಳೆಯಾಗುತ್ತಿರುವುದರಿಂದ ರೈತರು ಹಿಂಗಾರು ಹಂಗಾಮಿಗಾಗಿ ಸೂರ್ಯಕಾಂತಿ ಬಿತ್ತನೆ ಮಾಡಬಹುದು. ರೈತ ಸಂಪರ್ಕ ಕೇಂದ್ರದಲ್ಲಿ ಸಹಾಯಧನದಲ್ಲಿ ಸೂರ್ಯಕಾಂತಿ ಬೀಜ ಲಭ್ಯವಿರುತ್ತವೆ. ಮತ್ತು ಹತ್ತಿಗೆ ಬೇಕಾಗುವ ಕೀಟನಾಶಕ ಮತ್ತು ರೋಗ ನಿರೋಧಕ ಔಷಧಗಳು ಸಹಾಯಧನದಲ್ಲಿ ರೈತರು ಪಡೆದುಕೊಳ್ಳಬಹುದು ಎಂದು ಅವರು ಸಲಹೆ ನೀಡಿದ್ದಾರೆ.