ಭಾಲ್ಕಿ: ಹೈನುಗಾರಿಕೆ ನಡೆಸುವ ಮೂಲಕ ಗ್ರಾಮೀಣ ಭಾಗದ ಜನರು ಆರ್ಥಿಕವಾಗಿ ಪ್ರಗತಿ ಹೊಂದಲು ಪಶುಭಾಗ್ಯ ಯೋಜನೆ ಸಹಕಾರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನುಡಿದರು.
ಪಟ್ಟಣದ ಬಿಕೆಐಟಿ ಕಾಲೇಜಿನಲ್ಲಿ ಮಂಗಳವಾರ ಪಶು ಸಂಗೋಪನೆ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಪಶುಭಾಗ್ಯ ಬಾಂಡ್ ವಿತರಿಸಿ ಮಾತನಾಡಿದರು.
ಸಮಾಜದ ಎಲ್ಲ ವರ್ಗದವರ ಏಳಿಗೆಗಾಗಿ ಸರ್ಕಾರಿ ಅನೇಕ ಜನಪರ ಕಾರ್ಯಕ್ರಮ ಹಮ್ಮಿಕೊಂಡಿದೆ. ಪಶುಭಾಗ್ಯ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಎಮ್ಮೆ, ಆಕಳು ಖರೀದಿಸಲು ಬಾಂಡ್ ವಿತರಿಸಲಾಗಿದೆ. ಹಾಲು ಮಾರಾಟಕ್ಕೆ ₹5 ಸಬ್ಸಿಡಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸರ್ಕಾರ ಕುರಿ ಸಾಕಾಣಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಾಮಾನ್ಯ ವರ್ಗದವರಿಗೆ ₹16 ಸಾವಿರ, ಎಸ್ಸಿ, ಎಸ್ಟಿ ಜನರಿಗೆ ₹33 ಸಾವಿರ ಸಹಾಯ ಧನ ನೀಡುತ್ತಿದೆ ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರೇಖಾ ವಿಲಾಸ ಪಾಟೀಲ, ಕಾಂಗ್ರೆಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಹಣಮಂತ ಚವ್ಹಾಣ. ಸಹಾಯಕ ನಿರ್ದೇಶಕ ಶ್ರೀಹರಿ, ವೈದ್ಯರಾದ ನಾಗರಾಜ, ಬಸವರಾಜ ಭಂಗಾರೆ, ಪಶುಭಾಗ್ಯ ನಿರ್ದೇಶಕರಾದ ಸಂಗಮೇಶ ವಾಲೆ, ಸಂತೋಷ ಬಿ.ಜಿ.ಪಾಟೀಲ್, ಬಸವರಾಜ ಸೈನೂರೆ, ಸುಜಾತಾ ಹಳ್ಳೆ ಇದ್ದರು.