ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಮ್ಮನ ದರ್ಶನಕ್ಕೆ ಭಕ್ತಸಾಗರ

ನಾಳೆ ಚಂದ್ರಮಂಡಲೋತ್ಸವ, ದುಗ್ಗಳೋತ್ಸವ
Last Updated 31 ಆಗಸ್ಟ್ 2017, 8:54 IST
ಅಕ್ಷರ ಗಾತ್ರ

ಅರಸೀಕೆರೆ: ಪವಿತ್ರ ಧಾರ್ಮಿಕ ಯಾತ್ರಾ ಸ್ಥಳಗಳಲ್ಲಿ ಒಂದಾದ ತಾಲ್ಲೂಕಿನ ಮಾಡಾಳು ಗ್ರಾಮದ ಸ್ವರ್ಣ ಗೌರಮ್ಮ ದೇವಿ ದರ್ಶನಕ್ಕೆ ಹೊರ ರಾಜ್ಯ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರ ದಂಡು ಹರಿದು ಬರುತ್ತಿದೆ.

ತಾಲ್ಲೂಕಿನ ಒಂದು ಪುಟ್ಟ ಗ್ರಾಮ ಮಾಡಾಳು, ವರ್ಷಕ್ಕೊಮ್ಮೆ ರಾಜ್ಯದ ಜನರ ಗಮನವನ್ನು ಸೂಜಿಗಲ್ಲಿನಂತೆ ಸೆಳೆದು, 9 ದಿನಗಳಲ್ಲಿ ಲಕ್ಷಾಂತರ ಮಂದಿ ಭಕ್ತರನ್ನು ಬರಮಾಡಿಕೊಳ್ಳುತ್ತದೆ. ದೇವಿಯ ಸದ್ಭಾವನಾ ಮಹೋತ್ಸವ ಶ್ರದ್ಧಾ–ಭಕ್ತಿಯ ಸಂಗಮದೊಂದಿಗೆ ಧಾರ್ಮಿಕ ವಿಧಿ–ವಿಧಾನಗಳೊಂದಿಗೆ ವೈಭವೋಪೇತವಾಗಿ ನಡೆಯುತ್ತಾ ಬಂದಿದೆ.

ಪ್ರತಿ ದಿನ ಅಪಾರ ಸಂಖ್ಯೆಯ ಭಕ್ತರು ದೇವಿ ದರ್ಶನ ಪಡೆಯುತ್ತಿದ್ದಾರೆ. ಇಷ್ಟಾರ್ಥ ಸಿದ್ಧಿಗಾಗಿ ದೇವಿಗೆ ಕರ್ಪೂರ ಹಚ್ಚಿ ಹರಕೆ ತೀರಿಸುತ್ತಿದ್ದಾರೆ. ದೇವಾ ಲಯದ ಮುಂಭಾಗ ನಿರ್ಮಿಸಿರುವ ಕರ್ಪೂರದ ಕುಂಡದಲ್ಲಿ ಅಗ್ನಿಜ್ವಾಲೆ ಮುಗಿಲೆತ್ತರಕ್ಕೆ ಪ್ರಜ್ವಲಿಸುತ್ತದೆ.

ಆ. 24ರಿಂದ ಜನ ಜಾತ್ರೆ ಕಂಡು ಬರುತ್ತಿದೆ. ಅರಸೀಕೆರೆ–ಹುಳಿಯಾರು ರಸ್ತೆ ಎರಡು ಬದಿ ಹಾಗೂ ಗ್ರಾಮ ಪ್ರವೇಶಿಸುವ ರಸ್ತೆ ಎರಡು ಬದಿಗಳಲ್ಲಿ ಸಂತೆಯ ವಾತಾವರಣ, ಅಂಗಡಿಗಳು ಹಾಗೂ ಕೊಲಂಬಸ್‌ ಜೇಂಟ್‌, ಪುಟಾಣಿ ರೈಲುಗಾಡಿ ಸೇರಿದಂತೆ ಮಕ್ಕಳನ್ನು ಮನರಂಜಿಸುವ ವಿವಿಧ ಆಟೋಟಗಳು ಕಣ್ಮನ ಸೆಳೆಯುತ್ತಿವೆ.

ಗೌರಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಈಗ 153ನೇ ವರ್ಷದ ಸಂಭ್ರಮ. ಬಸವೇಶ್ವರ ದೇವಾಲಯದಲ್ಲಿ ಕೋಡಿಮಠದ ಶಿವಾನಂದ ಶಿವಯೋಗೀರಾಜೇಂದ್ರ ಸ್ವಾಮೀಜಿ ಸಮ್ಮುಖದಲ್ಲಿ ಪ್ರತಿಷ್ಠಾಪನೆಗೊಂಡಿರುವ ಗೌರಮ್ಮ ದೇವಿಗೆ ಸತತ ಒಂಬತ್ತು ದಿನ ತ್ರಿಕಾಲ ಪೂಜೆ ಸಲ್ಲಿಸಲಾಗುತ್ತಿದೆ. ಚಿನ್ನಾಭರಣ ಧರಿಸದ ದೇವಿ ಸೀರೆ, ದಾಸೋಹಕ್ಕೆ ಅಕ್ಕಿ ಹಾಗೂ ಕರ್ಪೂರ ಪ್ರಿಯೆ.

ಹರಕೆ ತೀರಿಸಲು ಅಗ್ನಿ ಕುಂಡದಲ್ಲಿ ಕರ್ಪೂರ ಹಚ್ಚುತ್ತಾರೆ. ಹಾಗೆಯೇ ದೇವಾಲಯದ ಆವರಣದಲ್ಲಿ ಅಕ್ಕಿ ಕೊಡುತ್ತಾರೆ. ಅಲ್ಲದೆ ಹರಕೆ ರೂಪದಲ್ಲಿ ಸುಟ್ಟ ಕರ್ಪೂರದ ಬೆಲೆ ಸುಮಾರು ₹ 30 ಲಕ್ಷಕ್ಕೂ ಮೀರಿದೆ. ದೇವಿ ದರ್ಶನಕ್ಕೆ ಬರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ.

ಮಹಾ ಮಂಗಳಾರತಿ: ಆ.31ರಂದು ರಾತ್ರಿ 11 ಗಂಟೆಗೆ ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿಯಂತೆ ಗೌರಿ ದೇವಿಗೆ ಪ್ರಿಯವಾದ ದೊಡ್ಡ ಮಂಗಳಾರತಿ (ಮಹಾ ಮಂಗಳಾರತಿ) ಹಾರನಹಳ್ಳಿ ಕೋಡಿಮಠ ಶಿವಾನಂದ ಶಿವಯೋಗೀರಾಜೇಂದ್ರ ಸ್ವಾಮೀಜಿ ಸಮ್ಮುಖದಲ್ಲಿ ನಡೆಯಲಿದೆ.

**

ಪುಷ್ಪಾಲಂಕೃತ ಮಂಟಪದಲ್ಲಿ ದೇವಿ

ಸೆ.1ರಂದು ಬೆಳಗಿನ ಜಾವ 4ಗಂಟೆ ನಂತರ ದೇವಾಲಯದ ಮುಂಭಾಗ ಇರುವ ವಿಶಾಲ ಆವರಣದಲ್ಲಿ ಚಂದ್ರಮಂಡಲೋತ್ಸವ ಜರುಗಲಿದೆ. ಪುಷ್ಪಾಲಂಕೃತ ಮಂಟಪದಲ್ಲಿ ದೇವಿ ಪ್ರತಿಷ್ಠಾಪಿಸಿ ಪಕ್ಕದಲ್ಲಿ ಗ್ರಾಮ ದೇವರಾದ ಬಸವೇಶ್ವರ ಸ್ವಾಮಿ, ಚನ್ನಬಸವಣ್ಣ, ತಿರುಮಲ ದೇವರುಗಳನ್ನು ಕೂರಿಸಲಾಗುವುದು. ಬಳಿಕ ನೂರಾರು ಮಹಿಳೆಯರು ತಲೆ ಮೇಲೆ ದುಗ್ಗಲದ ಬಟ್ಟಲನ್ನು ಹೊತ್ತು ಸೇವೆ ಸಲ್ಲಿಸುವರು.

ಸೆ.25ರಂದು ಬೆಳಿಗ್ಗೆ ಮಂಗಲ ಕರಡೇವು ವಾದ್ಯದೊಂದಿಗೆ ಗೌರಮ್ಮ ದೇವಿಯ ಉತ್ಸವ ನಡೆಯಲಿದೆ. ಸಂಜೆ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ನಂತರ ಕಲ್ಯಾಣಿಯಲ್ಲಿ ವಿಸರ್ಜಿಸಲಾಗುವುದು.

ಕೋಡಿ ಮಠಕ್ಕೂ ಮಾಡಾಳು ಗ್ರಾಮದ ಮುದ್ದೇಗೌಡರ ವಂಶಕ್ಕೂ ಹಿಂದಿನಿಂದಲೂ ಅವಿನಾವಭಾವ ಸಂಬಂಧ. ಮಠದ ಮೂಲ ಭಕ್ತರು ಗ್ರಾಮದ ಮುದ್ದೇಗೌಡ ಹಾಗೂ ಗೌಡರ ವಂಶಸ್ಥರು ಎಂಬ ಪ್ರತೀತಿ ಹಿಂದಿನಿಂದಲೂ ಬೆಳೆದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT