ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದ ಕಾಲುವೆಗಳಿಗೆ ಗುರುವಾರ ರಾತ್ರಿಯಿಂದ ನೀರು ಹರಿಸುತ್ತಿದ್ದು, ರೈತ ಸಮುದಾಯದಲ್ಲಿ ಸಂತಸ ಮೂಡಿದೆ.
ಡದಂಡೆ ಮುಖ್ಯ ಕಾಲುವೆ (ಎಲ್.ಬಿ.ಸಿ.) ಹೊರತುಪಡಿಸಿ ಉಳಿದ ಎಲ್ಲ ಕಾಲುವೆಗಳಿಗೆ ಸೆಪ್ಟೆಂಬರ್, ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ತಲಾ ಇಪ್ಪತ್ತು ದಿನ ನೀರು ಹರಿಸಲು (ಆನ್ ಅಂಡ್ ಆಫ್ ಪದ್ಧತಿ) ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿತ್ತು.
ಅದರಂತೆ ಕಾಲುವೆಗಳಿಗೆ ನೀರು ಬಿಡಲಾಗುತ್ತಿದೆ. ಬಲದಂಡೆ ಕೆಳಮಟ್ಟದ ಕಾಲುವೆಗೆ (ಆರ್.ಬಿ.ಎಲ್.ಎಲ್.ಸಿ.) ಒಟ್ಟು ನಾಲ್ಕು ಟಿ.ಎಂ.ಸಿ. ಅಡಿ ನೀರು ಮೀಸಲಿಟ್ಟಿದ್ದು, ಅದಕ್ಕೆ ನಿಗದಿಪಡಿಸಿದ ಅವಧಿಯಲ್ಲಿ ನಿತ್ಯ 675 ಕ್ಯುಸೆಕ್ ನೀರು ಹರಿಸಲಾಗುವುದು.
ಬಲದಂಡೆ ಮೇಲ್ಮಟ್ಟದ ಕಾಲುವೆಗೆ (ಆರ್.ಬಿ.ಎಚ್.ಎಲ್.ಸಿ.) ಆರು ಟಿ.ಎಂ.ಸಿ. ಅಡಿ ನೀರು ಮೀಸಲಿಡ ಲಾಗಿದ್ದು, ನಿತ್ಯ 3,200 ಕ್ಯುಸೆಕ್ ನೀರು ಬಿಡಲಾಗುವುದು. ಎರಡೂ ಕಾಲುವೆಗಳಲ್ಲಿ ಹರಿಯುವ ನೀರು ಬಳ್ಳಾರಿ ಜಿಲ್ಲೆ ಹಾಗೂ ಆಂಧ್ರ ಪ್ರದೇಶದ ಕಡಪ, ಅನಂತಪುರ ಜಿಲ್ಲೆಗಳ ನಡುವೆ ಹಂಚಿಕೆ ಮಾಡಲಾಗಿದೆ.
ರಾಯಚೂರು ಜಿಲ್ಲೆಗೆ ನೀರುಣಿಸುವ ಎಡದಂಡೆ ಮುಖ್ಯ ಕಾಲುವೆಗೆ ಒಟ್ಟು 22 ಟಿ.ಎಂ.ಸಿ. ನೀರು ಮೀಸಲಿಡಲಾಗಿದೆ. ಸೆ.1ರಿಂದ 30ರ ವರೆಗೆ ನಿತ್ಯ 2,800 ಕ್ಯುಸೆಕ್, ಅ. 1ರಿಂದ ನ. 30ರ ವರೆಗೆ 3,800 ಕ್ಯುಸೆಕ್ ನೀರು ಹರಿಸಲಾಗುವುದು.
ಇನ್ನು ರಾಯ, ಬಸವ, ಬೆಲ್ಲ ಹಾಗೂ ವಿಜಯನಗರ ಕಾಲುವೆಗೆ ತಲಾ ಎರಡು ಟಿ.ಎಂ.ಸಿ. ಅಡಿ ನೀರು ಹಂಚಿಕೆ ಮಾಡ ಲಾಗಿದ್ದು, 120 ದಿನಗಳ ವರೆಗೆ ನಿತ್ಯ 200 ಕ್ಯುಸೆಕ್ ನೀರು ಬಿಡಲಾಗುವುದು. 12 ಟಿ.ಎಂ.ಸಿ. ಅಡಿ ನೀರು ಕುಡಿಯಲು ಮೀಸಲಿಡಲಾಗಿದೆ. ಗುರುವಾರ ರಾತ್ರಿ ಯಿಂದ ಎಲ್.ಬಿ.ಸಿ.ಗೆ 1,064 ಕ್ಯುಸೆಕ್, ಆರ್.ಬಿ. ಎಲ್.ಎಲ್.ಸಿ.ಗೆ 700 ಕ್ಯುಸೆಕ್ ಹಾಗೂ ಆರ್.ಬಿ.ಎಚ್.ಎಲ್.ಸಿ.ಗೆ 500 ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ದಿನ ಕಳೆದಂತೆ ನೀರಿನ ಪ್ರಮಾಣ ಹೆಚ್ಚಿಸ ಲಾಗುವುದು ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ತಿಳಿಸಿದೆ.
‘ಯಾವ ಕಾಲುವೆಗೆ ಎಷ್ಟು ನೀರು ಹರಿಸಬೇಕು ಎಂದು ನಿರ್ಧಾರವಾಗಿ ದೆಯೋ ಅದಕ್ಕೆ ತಕ್ಕಂತೆ ನೀರು ಹರಿಸ ಲಾಗುವುದು. ಇದರಲ್ಲಿ ಎರಡು ಮಾತಿಲ್ಲ. ಆದರೆ, ಒಂದೇ ಬಾರಿಗೆ ಹೆಚ್ಚಿನ ಪ್ರಮಾಣದಲ್ಲಿ ಕಾಲುವೆಗೆ ನೀರು ಬಿಟ್ಟರೆ ಕಾಲುವೆ ಒಡೆದು ಹೋಗಬಹುದು. ಹಾಗಾಗಿ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಹೆಚ್ಚಿಸಲಾಗುವುದು’ ಎಂದು ಮಂಡಳಿ ಕಾರ್ಯದರ್ಶಿ ಡಿ. ರಂಗಾರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.
ರೈತರಲ್ಲಿ ಸಂತಸ: ತಡವಾಗಿಯಾದರೂ ಕಾಲುವೆಗಳಿಗೆ ನೀರು ಹರಿಸುತ್ತಿರುವು ದಕ್ಕೆ ರೈತರು ಸಂತಸಗೊಂಡಿದ್ದಾರೆ. ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿ ದ್ದಾರೆ. ಮೆಕ್ಕೆ ಜೋಳ, ಮೆಣಸಿನಕಾಯಿ, ಜೋಳ ಹಾಕಿದವರು ಸದ್ಯ ನಿರಾಳರಾಗಿ ದ್ದಾರೆ. ‘ಮೆಕ್ಕೆಜೋಳ, ಮೆಣಸಿನಕಾಯಿ, ಜೋಳ ಹಾಕಿರುವವರಿಗೆ ತುರ್ತಾಗಿ ನೀರಿನ ಅಗತ್ಯವಿತ್ತು. ಸಕಾಲಕ್ಕೆ ನೀರು ಹರಿಸುತ್ತಿರುವುದು ಒಳ್ಳೆಯ ವಿಚಾರ. ಆದರೆ, ನಾಲ್ಕು ತಿಂಗಳು ನೀರು ಹರಿಸ ಬೇಕು’ ಎನ್ನುತ್ತಾರೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಜೆ. ಕಾರ್ತಿಕ್.
67 ಟಿ.ಎಂ.ಸಿ. ಅಡಿ ನೀರು ಸಂಗ್ರಹ: ಒಳಹರಿವು ಭಾರಿ ಹೆಚ್ಚಳ
ಇಲ್ಲಿನ ತುಂಗಭದ್ರಾ ಜಲಾಶಯಕ್ಕೆ ಕಳೆದ ಮೂರು ದಿನಗಳಲ್ಲಿ ಸುಮಾರು ಆರು ಟಿ.ಎಂ.ಸಿ. ಅಡಿಗೂ ಅಧಿಕ ನೀರು ಹರಿದು ಬಂದಿದೆ. ಶುಕ್ರವಾರ ಅಣೆಕಟ್ಟೆಯಲ್ಲಿ 67.752 ಟಿ.ಎಂ.ಸಿ. ಅಡಿ ನೀರಿನ ಸಂಗ್ರಹ ದಾಖಲಾಗಿದೆ. ಗುರುವಾರ 65.282 ಟಿ.ಎಂ.ಸಿ. ಅಡಿ, ಬುಧವಾರ 63.671 ಟಿ.ಎಂ.ಸಿ. ಅಡಿ, ಮಂಗಳವಾರ 61.736 ಟಿ.ಎಂ.ಸಿ. ಅಡಿ ನೀರು ಸಂಗ್ರಹವಾಗಿತ್ತು.
ಗುರುವಾರ 20,524 ಕ್ಯುಸೆಕ್ನಷ್ಟಿದ್ದ ಒಳಹರಿವು ಶುಕ್ರವಾರ 31,303 ಕ್ಯುಸೆಕ್ಗೆ ಹೆಚ್ಚಳವಾಗಿದೆ. ಬುಧವಾರ 23,438 ಕ್ಯುಸೆಕ್, ಮಂಗಳವಾರ 17,422 ಕ್ಯುಸೆಕ್ ಒಳಹರಿವು ದಾಖಲಾಗಿತ್ತು.
* *
ಜಲಾಶಯದಲ್ಲಿ ದಿನೇ ದಿನೇ ನೀರಿನ ಸಂಗ್ರಹ ಹೆಚ್ಚಾಗುತ್ತಿರು ವುದು ಖುಷಿ ವಿಚಾರ. ಇನ್ನೂ 25 ಟಿ.ಎಂ.ಸಿ. ನೀರು ಬಂದರೆ ಎರಡನೇ ಬೆಳೆಗೂ ಅನುಕೂಲವಾಗುತ್ತದೆ
ಜೆ. ಕಾರ್ತಿಕ್
ಜಿಲ್ಲಾ ಅಧ್ಯಕ್ಷ, ರಾಜ್ಯ ರೈತ ಸಂಘ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.