ಕಡೂರು: ದಶಕಗಳ ನಂತರ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಕ್ಷೇತ್ರಕ್ಕೆ ₹1.65 ಕೋಟಿ ಮಂಜೂರಾಗಿದೆ ಎಂದು ಶಾಸಕ ವೈ.ಎಸ್.ವಿ ದತ್ತ ತಿಳಿಸಿದರು. ಕಡೂರಿನ ಕೆ.ಎಂ.ರಸ್ತೆಯ ಗೂಡ್ಸ್ ಶೆಡ್ ಪಕ್ಕದ ಕೊಳಚೆ ಪ್ರದೇಶದಲ್ಲಿ ₹25 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕರ್ನಾಟಕ ಕೊಳಚೆ ನಿರ್ಮೂಲನ ಮಂಡಳಿಯ ಅಧ್ಯಕ್ಷ ಆರ್.ವಿ.ದೇವರಾಜ್ ಅವರನ್ನು ಭೇಟಿಯಾಗಿ ಬೀರೂರು ಮತ್ತು ಕಡೂರು ಅವಳಿ ಪಟ್ಟಣಗಳ ಕೊಳಚೆ ಪ್ರದೇಶದ ಅಭಿವೃದ್ದಿಗೆ ₹3 ಕೋಟಿ ಅನುದಾನ ಕೋರಲಾಗಿತ್ತು. ಅದರ ಫಲವಾಗಿ ಈಗ ₹1.65 ಕೋಟಿ ಅನುದಾನ ಬಿಡುಗಡೆಯಾಗಿದೆ.
ಇದರಲ್ಲಿ ಕಡೂರು ಭೋವಿ ಕಾಲೋನಿ, ಅಂಬೇಡ್ಕರ್ ನಗರ,ಈದ್ಗಾ ನಗರ, ಮೂರ್ತಿಹಾಳ್ನ ಕೊಳಚೆ ಪ್ರದೇಶದ ಚರಂಡಿ, ಕಾಂಕ್ರೀಟ್ ರಸ್ತೆಗೆ ತಲಾ ₹25 ಲಕ್ಷದಂತೆ ₹1 ಕೋಟಿ, ಬೀರೂರಿನ ಕೊಳಚೆ ಪ್ರದೇಶಗಳ ಅಭಿವೃದ್ದಿಗೆ ₹65 ಲಕ್ಷ ಅನುದಾನದಡಿಯಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದರು.
ಇಷ್ಟೇ ಅಲ್ಲದೆ ಇನ್ನೂ ₹2 ಕೋಟಿ ಅನುದಾನ ಹಾಗೂ 400 ಮನೆಗಳನ್ನು ಕೋರಲಾಗಿದೆ. ಶೀಘ್ರವಾಗಿ ಬಿಡುಗಡೆ ಮಾಡುವ ಭರವಸೆ ಸಿಕ್ಕಿದ್ದು, ಇದಕ್ಕಾಗಿ ಮಂಡಳಿ ಅಧ್ಯಕ್ಷರನ್ನು ಅಭಿನಂದಿಸುತ್ತೇನೆ ಎಂದರು.
ನಿರ್ಮೂಲನ ಮಂಡಳಿಯ ಹಾಸನ ವಿಭಾಗದ ಮುಖ್ಯ ಎಂಜಿನಿಯರ್ ಜಿ.ಎಸ್.ರಾಮಚಂದ್ರ, ಎಂಜಿನಿಯರ್ ಯಶವಂತ್ ಮತ್ತು ಇಲಾಖೆಯ ಶ್ರೀರಾಮ್, ಪುರಸಭೆ ಸದಸ್ಯ ಬಶೀರ್ ಸಾಬ್, ಭಂಡಾರಿ ಶ್ರೀನಿವಾಸ್ ಇದ್ದರು.