ಗೋಣಿಕೊಪ್ಪಲು: ಪಡೆದುಕೊಂಡ ಸಾಲದ ಹಣ ಮರುಪಾವತಿಸಿಲ್ಲ ಎಂಬ ಕಾರಣಕ್ಕೆ ಕೂಲಿ ಕಾರ್ಮಿಕರೊಬ್ಬರನ್ನು ಗೂಡಿನಲ್ಲಿ ಕೂಡಿಹಾಕಿ ನಾಯಿಯಿಂದ ಕಚ್ಚಿಸಿದ ಘಟನೆ ಬಾಳೆಲೆಯಲ್ಲಿ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಹರೀಶ್ (32) ನಾಯಿಯಿಂದ ದಾಳಿಗೆ ಒಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕಿಶನ್ ಎಂಬುವರು ನಾಯಿ ಛೂ ಬಿಟ್ಟು ಕಚ್ಚಿಸಿದ್ದಾರೆ.
ಹಿನ್ನೆಲೆ: ಕಿಶನ್ ಬಾಳೆಲೆಯಲ್ಲಿ ಕಾಫಿ ಬೆಳೆಗಾರನಾಗಿದ್ದು, ಇವರಿಂದ ಹರೀಶ್ ಎರಡು ವರ್ಷದ ಹಿಂದೆ ₹ 20 ಸಾವಿರ ಸಾಲ ಪಡೆದಿದ್ದರು. ಸಾಲ ಮರುಪಾವತಿಸಿರಲಿಲ್ಲ. ಈಚೆಗೆ ಹರೀಶ್ ಅವರನ್ನು ತಮ್ಮ ವಾಹನದಲ್ಲಿ ಕೂರಿಸಿಕೊಂಡು ಹೋಗಿ ನಾಯಿ ಗೂಡಿಗೆ ಕೂಡಿಹಾಕಿ ಅದರಿಂದ ದಾಳಿಮಾಡಿಸಿದ್ದಾರೆ.
ನಾಯಿ ಕಡಿತದಿಂದ ಕಾಲು, ಕೈ, ಬೆನ್ನು ಭಾಗದಲ್ಲಿ ಗಾಯವಾಗಿದೆ. ತೀವ್ರವಾಗಿ ಗಾಯಗೊಂಡ ಹರೀಶ್ ಮೈಸೂರಿಗೆ ತೆರಳಿ ಚಿಕಿತ್ಸೆಪಡೆದ ನಂತರ ಪೊನ್ನಂಪೇಟೆಗೆ ಬಂದು ದೂರು ನೀಡಿದ್ದಾರೆ. ಹಲ್ಲೆ, ಜಾತಿನಿಂದನೆ ಮೊಕದ್ದಮೆ ದಾಖಲಿಸಿದ್ದಾರೆ. ಘಟನೆಯನ್ನು ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕ ಖಂಡಿಸಿದೆ.