ಆಲಮೇಲ: ಸಮೀಪದ ತಾರಾಪುರ ಗ್ರಾಮಕ್ಕೆ ಭೀಮಾನದಿ ನೀರು ಸುತ್ತುವರಿದುಕೊಳ್ಳುತ್ತಿದ್ದು ಭಾನುವಾರ ಬೆಳಿಗ್ಗೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ನೀರು ಬಂದಿದ್ದು ಗ್ರಾಮಸ್ಥರು ತೀವ್ರ ಆತಂಕ ಎದುರಿಸುತ್ತಿದ್ದಾರೆ.
ಮೇಲಗಡೆಯಿಂದ ನೀರು ಹರಿದು ಬರುತ್ತಿದ್ದು, ಕೆಳಗಡೆಯ ಸೊನ್ನ ಬ್ಯಾರೇಜ್ನಿಂದ ಶನಿವಾರ 5 ಸಾವಿರ ಕ್ಯುಸೆಕ್ ನೀರು ಬಿಡಲಾಗಿದೆ. ಭಾನುವಾರ ಸಂಜೆವರೆಗೂ ತಾಂತ್ರಿಕ ತೊಂದರೆಯಿಂದಾಗಿ ನೀರು ಬಿಡುಗಡೆಯಾಗಿಲ್ಲ. ಹೀಗಾಗಿ ಗ್ರಾಮದ ರಸ್ತೆಗೆ ನೀರು ಆವ ರಿಸಿದೆ. ಭಾನುವಾರ ಸಂಜೆಯಿಂದಲೇ 15 ಸಾವಿರ ಕ್ಯುಸೆಕ್ ನೀರು ಹರಿಬಿಡುವ ಮೂಲಕ ಪರಿಸ್ಥಿತಿ ನಿಭಾಯಿಸುವುದಾಗಿ ಭೀಮಾ ಏತ ನೀರಾವರಿಯ ಸೊನ್ನ ಬ್ಯಾರೇಜಿನ ಮುಖ್ಯ ಎಂಜಿನಿಯರ್ ತಿಳಿಸಿದ್ದಾರೆ.
ಈ ಸುದ್ದಿ ತಿಳಿದ ತಕ್ಷಣ ಶಾಸಕ ರಮೇಶ ಭೂಸನೂರ ಗ್ರಾಮಕ್ಕೆ ದೌಡಾ ಯಿಸಿದರು. ತಮ್ಮ ಕಾರನ್ನು ದೂರದಲ್ಲಿ ನಿಲ್ಲಿಸಿ ನೀರಿನಲ್ಲಿಯೇ ನಡೆದುಕೊಂಡು ಗ್ರಾಮಕ್ಕೆ ಬಂದು ಜನರ ಅಹವಾಲು ಆಲಿಸಿದರು.
ಗ್ರಾಮ ಮುಳುಗಡೆಯಾಗಿ ಹೊಸ ಬಡಾವಣೆಗೆ ಸ್ಥಳಾಂತರ ಮಾಡುವ ಪ್ರಕ್ರಿಯೆ ಶೀಘ್ರಗತಿಯಲ್ಲಿ ಮಾಡುವುದಾಗಿ ಹೇಳಿದ ಅವರು, ಎಂಟು ವರ್ಷಗಳಿಂದ ಹಿಂದೆಯೇ ಈ ಗ್ರಾಮವನ್ನು ಸಮೀಪದಲ್ಲಿಯೇ ಸ್ಥಳಾಂತ ರಿಸಿದೆ. ಮನೆ ಕಳೆದುಕೊಂಡವರಿಗೆ ಆಗ ಪರಿಹಾರ ನೀಡಲಾಗಿತ್ತು, ಆದರೂ ಗ್ರಾಮಸ್ಥರು ಈವರೆಗೂ ಸ್ಥಳಾಂತರವಾ ಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಶಾಸಕರು ಹೊಸ ಬಡವಾಣೆಯಲ್ಲಿ ನಿವೇಶನದ ಹಕ್ಕುಪತ್ರಗಳನ್ನು ನೀಡಿ ಸ್ಥಳಾಂತರಿಸುವ ಪ್ರಕ್ರಿಯೆ ಬೇಗ ಮಾಡುವುದಾಗಿ ತಿಳಿಸಿದರು.
ಸ್ವತಃ ಶಾಸಕರು ನದಿ ದಂಡೆಯ ಮನೆಗಳ ಸಮೀಕ್ಷೆ ಮಾಡಿ ಒಟ್ಟು 65 ಭಾಧಿತ ಕುಟುಂಬಗಳಿಗೆ ಹೊಸ ಬಡಾ ವಣೆಯಲ್ಲಿ ಬಸವ ವಸತಿ ಯೋಜನೆಯಲ್ಲಿ ಮನೆ ನಿರ್ಮಿಸಿ ಕೊಡುವುದಾಗಿ ಹೇಳಿದರು.
ಹೊಸ ಬಡಾವಣೆಯಲ್ಲಿ 260 ನಿವೇಶನಗಳಿದ್ದು ಸರಿಯಾದ ರೀತಿಯಲ್ಲಿ ಹಂಚಿಕೆಯಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದು, ಯೋಗ್ಯ ಫಲಾನು ಭವಿಗಳನ್ನು ಗರುತಿಸುವ ಕೆಲಸ ಆಗ ಬೇಕು ಎಂದು ಹೋರಾಟಗಾರ ವಿಶ್ವನಾಥ ಹಿರೇಮಠ ಪತ್ರಿಕೆಗೆ ತಿಳಿಸಿದರು.
* *
ನಾಲ್ಕು ಮಕ್ಕಳನ್ನು ಕಟ್ಟಿಕೊಂಡು ಗುಡಿಸಲಿನಲ್ಲಿಯೇ ವಾಸಿಸುತ್ತಿದ್ದೇನೆ. ಹೊಸ ಬಡಾವಣೆಯಲ್ಲಿ ನಿವೇಶನ ನೀಡಿಲ್ಲ, ಎಷ್ಟೇ ನೀರು ಬಂದರೂ ನಾವು ಈ ಊರು ಬಿಡುವುದಿಲ್ಲ. ಇಲ್ಲಿಯೇ ಸಾಯುತ್ತೇವೆ
ಗುರುಪ್ಪ ಸಾಯಬಣ್ಣ ವಡ್ಡರ
ನಿವೇಶನ ವಂಚಿತ ಗ್ರಾಮಸ್ಥ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.