ಲಕ್ಷ್ಮೇಶ್ವರ: ಸಮೀಪದ ಬಟ್ಟೂರು ಗ್ರಾಮದ ಜಗದೀಶಗೌಡ ಮತ್ತು ಪರ ಮೇಶಗೌಡ ಪಾಟೀಲ ಸಹೋದರರು ಲಭ್ಯವಿರುವ ಅತಿ ಕಡಿಮೆ ಪ್ರಮಾಣದ ನೀರನ್ನು ಸದ್ಬಳಕೆ ಮಾಡಿಕೊಂಡು ಏಳು ಎಕರೆ ಜಮೀನಿನಲ್ಲಿ ಬಾಳೆ ಮತ್ತು ಬಿಟಿ ಹತ್ತಿ ಬೆಳೆ ಬೆಳೆದಿದ್ದಾರೆ.
ಸಸಿ ನಾಟಿ: ಪಾಟೀಲ ಸಹೋದರರು ಬೆಂಗಳೂರಿನಿಂದ ಜಿ–9 ತಳಿಯ 8,500 ಪಚ್ಚಬಾಳೆ ಸಸಿಗಳನ್ನು ಪ್ರತಿ ಸಸಿಗೆ ₹12ರಂತೆ ಖರೀದಿಸಿ ಜನವರಿಯಲ್ಲಿ ನಾಟಿ ಮಾಡಿದ್ದಾರೆ. ಪಾಟೀಲ ಸಹೋದರರು ಸಸಿಗಳಿಗೆ ಹನಿ ನೀರಾವರಿ ಮೂಲಕ ನೀರುಣಿಸು ತ್ತಿದ್ದಾರೆ ಡ್ರಿಪ್ ನೀರಿನಿಂದಲೇ ಬೆಳೆ ಸಮೃದ್ಧವಾಗಿ ಬಂದಿದೆ.
ಖರ್ಚು ವೆಚ್ಚ: ಬಾಳಿ ಸಸಿಗೆ ₹ 1.10 ಲಕ್ಷ ಸೇರಿ ಡ್ರಿಪ್ ಅಳವಡಿಕೆ ಮತ್ತು ಉಳಿದ ಕೆಲಸಗಳಿಗೆ ₹ 2 ಲಕ್ಷ ಖರ್ಚು ಮಾಡಿ ದ್ದಾರೆ. ಈಗ ಬಾಳೆಹಣ್ಣಿಗೆ ಉತ್ತಮ ಬೆಲೆ ಇದ್ದು ಕ್ವಿಂಟಲ್ಗೆ ₹ 1,600 ದರ ಇದೆ. ಹೀಗಾಗಿ, ಈ ಬಾರಿ ಪಾಟೀಲರು ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದಾರೆ.
‘ಡ್ರಿಪ್ ಮೂಲಕವೇ ಪೀಕಿಗೆ ಜೀವಾ ಮೃತ ಕೊಡ್ತೇವಿ. ಹಿಂಗಾಗಿ ನಮ್ಮ ತ್ವಾಟದಾಗಿನ ಬಾಳಿ ಗಿಡ ಭಾಳ ಚಲೋ ಬೆಳದಾವ್ರಿ. ಅದರಂಗ ಹತ್ತಿಗೂ ಜೀವಾ ಮೃತ ಕೊಡಕಾತ್ತೇವೆ. ಅದೂ ಭಾಳ ಚಲೋ ಐತ್ರಿ’ ಎಂದು ಜಗದೀಶಗೌಡ ಪಾಟೀಲ ಹೇಳಿದರು.