ಗುಂಡ್ಲುಪೇಟೆ: ತಾಲ್ಲೂಕಿನಾದ್ಯಂತ ಭಾನುವಾರ ಸಂಜೆ ಉತ್ತಮ ಮಳೆಯಾಗಿದೆ. ಪಟ್ಟಣದ ಅಂಚಿನಲ್ಲಿರುವ ಅಣ್ಣೂರು ಕೇರಿ. ಮಲ್ಲಯನಪುರ, ವೀರನಪುರ, ಕೋಡಹಳ್ಳಿ, ಭೀಮನಬೀಡು ಗ್ರಾಮದ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು, ಸಣ್ಣ ಪುಟ್ಟ ಕೆರೆ ಕಟ್ಟೆಗಳು ತುಂಬಿವೆ.
ಪಟ್ಟಣದಲ್ಲಿ ಸುಮಾರು ಒಂದು ಗಂಟೆ ಸುರಿದ ಭಾರಿ ಮಳೆಯಿಂದ ಪಾದಚಾರಿಗಳು ಮತ್ತು ವಾಹನ ಸವಾರರು ಸಂಚರಿಸಲು ಪರದಾಡಿದರು. ಮೊಣಕಾಲಿನವರೆಗೆ ನೀರು ತುಂಬಿಕೊಂಡಿದ್ದ ಬಸ್ ನಿಲ್ದಾಣ ಈಜುಕೊಳದಂತೆ ಭಾಸವಾಗುತ್ತಿತ್ತು. ಪ್ರಯಾಣಿಕರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಾಡಲು ಹರಸಹಾಸ ಪಡುವ ದೃಶ್ಯ ಕಂಡುಬಂತು.
ಆಗಸ್ಟ್ ತಿಂಗಳಿನಿಂದೀಚೆಗೆ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದ್ದರೂ, ತಾಲ್ಲೂಕಿಗೆ ವರುಣನ ಕೃಪೆ ದೊರೆತಿರಲಿಲ್ಲ. ಈಗ ಸುರಿದಿರುವ ಮಳೆ ನೀರಿಲ್ಲದೆ ಒಣಗಿರುವ ಬೆಳೆಗಳಿಗೆ ಅನುಕೂಲಕರವಾಗಲಿವೆ ಎಂಬ ನಿರೀಕ್ಷೆ ರೈತರದು.