ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಹಣಬೆ, ತಿಪ್ಪೂರು, ತೂಬಗೆರೆ, ಸಾಸಲು ಸೇರಿದಂತೆ ವಿವಿಧ ಪ್ರಮುಖ ಗ್ರಾಮಗಳಿಂದ ದಶಕಗಳಿಂದ ಸಂಚರಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ಗಳು ಪ್ರಯಾಣಿಕರ ತೀವ್ರ ಕೊರತೆಯಿಂದ ಸಂಚಾರವನ್ನು ಸ್ಥಗಿತಗೊಳಿಸುತ್ತಿವೆ ಎಂದು ತೂಬಗೆರೆ ಗ್ರಾಮದ ವಿದ್ಯಾರ್ಥಿ ಮಹೇಶ್ ಆರೋಪಿಸಿದ್ದಾರೆ.
ಇದರಿಂದ ಗ್ರಾಮೀಣ ಭಾಗದಿಂದ ನಗರದ ವಿವಿಧ ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ರಾಜ್ಯ ಸರ್ಕಾರ ಈಗ ಎಸ್ಸಿ,ಎಸ್ಟಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಇತರೆ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ಗಳನ್ನು ನೀಡುತ್ತಿದೆ.
ಇದರಿಂದ ಬಹುತೇಕ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುತಿತ್ತು. ಆದರೆ ಇತ್ತೀಚೆಗೆ ಗ್ರಾಮಾಂತರ ಪ್ರದೇಶದಲ್ಲೂ ಆಪೆ ಆಟೋಗಳು ಹಾಗೂ ಇತರೆ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು ಕೆಎಸ್ಆರ್ಟಿಸಿ ಬಸ್ಗಳು ಪ್ರಯಾಣಿಕರು ಇಲ್ಲದೆ ಬಣಗುಡುವಂತಾಗಿದೆ.
ಕೆಎಸ್ಆರ್ಟಿಸಿ ಬಸ್ಗಳು ಬರಿ ವಿದ್ಯಾರ್ಥಿ ಪಾಸ್ಗಳನ್ನು ಹೊಂದಿರುವವರ ಪ್ರಯಾಣಿಕರಿಗೆ ಮಾತ್ರ ಸೀಮಿತವಾಗುತ್ತಿವೆ. ಇದರಿಂದ ಹಣ ವಸೂಲಿಯಾಗದೆ ಮಾರ್ಗಗಳನ್ನು ನಿಲ್ಲಿಸುವುದು ಅಥವಾ ನಾಲ್ಕು ಬಾರಿ ಸಂಚರಿಸುವ ಕಡೆ ಎರಡು ಬಾರಿ ಮಾತ್ರ ಸಂಚರಿಸುವಂತಾಗಿವೆ. ಹಣಬೆ ಹಾಗೂ ತೂಬಗೆರೆ ಗ್ರಾಮಗಳಿಂದ ಸುಮಾರು 30 ವರ್ಷಗಳಿಂದ ಕೆಎಸ್ಆರ್ಟಿಸಿ ಬಸ್ ಪ್ರತಿ ದಿನ ನಾಲ್ಕು ಬಾರಿ ನಗರಕ್ಕೆ ಬಂದು ಹೋಗುತಿತ್ತು.