ರಾಮನಗರ: ಕನಕಪುರ ಭಾಗದಲ್ಲಿ ಭರ್ಜರಿ ಮಳೆಯಾಗುತ್ತಿದ್ದು, ನದಿಯ ನೀರು ತಮಿಳುನಾಡಿನತ್ತ ಹರಿಯುತ್ತಿದೆ. ಕಳೆದ ಕೆಲವು ದಿನಗಳಿಂದ ಸುರಿದ ಮಳೆಯಿಂದಾಗಿ ಅರ್ಕಾವತಿ ನದಿ ಹಾಗೂ ಸನಂದಾ ಹೊಳೆಯಲ್ಲಿನ ಪ್ರವಾಹ ಹೆಚ್ಚಾಗಿದೆ.
ಇದರಿಂದಾಗಿ 1.430 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಕನಕಪುರ ತಾಲ್ಲೂಕಿನ ಹಾರೋಬೆಲೆ ಜಲಾಶಯವು ಭರ್ತಿಯಾಗಿದೆ. ಇಲ್ಲಿನ ಕ್ರೆಸ್ಟ್ ಗೇಟ್ಗಳ ಮೂಲಕ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದಿಂದ ಹೊರಹರಿಯುವ ನೀರು ಸಂಗಮದ ಬಳಿ ಕಾವೇರಿಯನ್ನು ಸೇರಿಕೊಳ್ಳಲಿದ್ದು, ಅಲ್ಲಿಂದ ತಮಿಳುನಾಡಿಗೆ ಹರಿಯಲಿದೆ.
ಭಾನುವಾರ ಜಲಾಶಯದ ಹೊರಹರಿವು 3,890 ಕ್ಯೂಸೆಕ್ನಷ್ಟಿದ್ದು, ಕಳೆದ ಮೂರು ದಿನಗಳಿಂದ ನೀರು ನದಿಗೆ ಹರಿಯುತ್ತಿರುವುದಾಗಿ ಜಲ ಸಂಪನ್ಮೂಲ ಇಲಾಖೆಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು. ಜಿಲ್ಲೆಯ ಮಂಚನಬೆಲೆ ಹಾಗೂ ಕಣ್ವ ಜಲಾಶಯಗಳ ನೀರು ಸಂಗ್ರಹ ಮಟ್ಟವೂ ಹೆಚ್ಚಿದೆ.