ಸೋಮವಾರಪೇಟೆ: ಅರಣ್ಯ ಕಚೇರಿ ಎದುರಿನಲ್ಲಿಯೇ ಬೆಳೆದಿದ್ದ ಮರವನ್ನು ಕಡಿದು ಸಾಗಿಸಿರುವ ಘಟನೆ ಸಮೀಪದ ಬೇಳೂರು ಗ್ರಾಮದಲ್ಲಿ ನಡೆದಿದೆ. ಉಪ ವಲಯ ಅರಣ್ಯ ಕಚೇರಿ ಆವರಣದಲ್ಲಿ ಕೂಳಿಮರವನ್ನು ಶುಕ್ರವಾರ ರಾತ್ರಿ ಕಡಿದು ಸಾಗಿಸಲಾಗಿದೆ. ಕಚೇರಿಯಲ್ಲಿ ಸಿಬ್ಬಂದಿ ಇಲ್ಲದ ವೇಳೆ ಈ ಕೃತ್ಯ ಎಸಗಲಾಗಿದೆ. ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ, ಮರ ಕಳವಿನ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಬೇಳೂರು ಅರಣ್ಯ ಉಪ ವಲಯ ದಲ್ಲಿ ಯಡವನಾಡು ಮೀಸಲು ಅರಣ್ಯ ವಿದ್ದು, ಅರಣ್ಯ ರಕ್ಷಣೆಗೆ ಬೇಳೂರಿನಲ್ಲಿ ಅರಣ್ಯ ಕಚೇರಿಯನ್ನು ಸ್ಥಾಪಿಸಲಾಗಿದೆ. ಇಲ್ಲಿ ವನಪಾಲಕ, ಸಿಬ್ಬಂದಿ ವಾಸ್ತವ್ಯ ಮಾಡಬೇಕು. ಆದರೆ, ವಸತಿಗೃಹ ಸರಿಯಿಲ್ಲ ಎಂಬ ಕಾರಣ ನೀಡಿ ಉಳಿಯಲು ಹಿಂದೇಟು ಹಾಕುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.