ದಾವಣಗೆರೆ: ‘ಮುಸ್ಲಿಮರನ್ನು ಈ ದೇಶದಿಂದ ಎಲ್ಲಿಗೆ ಕಳುಹಿಸಬೇಕೆಂದು ತೀರ್ಮಾನಿಸಿದ್ದೀರಿ‘ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಪ್ರಶ್ನಿಸಿದರು. ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜೆಡಿಎಸ್ ಜಿಲ್ಲಾ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
‘ಈ ದೇಶಕ್ಕೆ ಬೆಂಕಿ ಚೆಂಡು ಮಂತ್ರಿಗಳು ಬೇಕಾಗಿಲ್ಲ. ಇಂತಹವರಿಗೆ ಮಂತ್ರಿ ಸ್ಥಾನ ನೀಡಿ ನೀವು ಯಾವ ಸಂದೇಶವನ್ನು ನೀಡುತ್ತಿದ್ದೀರಿ?’ ಎಂದು ಪರೋಕ್ಷವಾಗಿ ಈಚೆಗೆ ನಡೆದ ಕೇಂದ್ರ ಸಚಿವ ಸಂಪುಟ ವಿಸ್ತರಣೆಯನ್ನು ಟೀಕಿಸಿದರು.
‘ಈಗ ಇಡೀ ದೇಶವನ್ನು ಸಾಮರಸ್ಯದಿಂದ ತೆಗೆದುಕೊಂಡು ಹೋಗುವಂತಹ ನಾಯಕರು ನಮಗೆ ಬೇಕು. ಗಾಂಧೀಜಿ ಅಂತಹ ಕೆಲಸ ಮಾಡಿದ್ದರು’ ಎಂದು ಸ್ಮರಿಸಿದರು.
‘ಸಿದ್ದರಾಮಯ್ಯ ವ್ಯಕ್ತಿ ಅಲ್ಲ, ಶಕ್ತಿ ಎಂದು ಹಿಂದೆ ದಾವಣಗೆರೆ ಸಮಾವೇಶದಲ್ಲಿ ಹೇಳಿದ್ದೆ. ಆದರೆ, ಅವರೇ ಈಗ ನನ್ನನ್ನು ಶಕ್ತಿ ಇಲ್ಲದವನು ಎಂದು ಟೀಕಿಸಿದ್ದಾರೆ.
ಇದಕ್ಕೆ ನನಗೇನೂ ಬೇಸರ ಇಲ್ಲ. ಇನ್ನೂ ಮೂರು ತಿಂಗಳು ರಾಜ್ಯವನ್ನು ಸುತ್ತುತ್ತೇನೆ. ನಂತರವಷ್ಟೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇನೆ’ ಎಂದು ದೇವೇಗೌಡ ಹೇಳಿದರು.