ಸಕಲೇಶಪುರ: ತಾಲ್ಲೂಕಿನ ಯಸಳೂರು ಗ್ರಾಮದಲ್ಲಿ ಮೂರು ಎಕರೆ ಹೊಲದಲ್ಲಿ ಹುಲುಸಾಗಿ ಬೆಳೆದಿದ್ದ ಜೋಳವನ್ನು ಟ್ರ್ಯಾಕ್ಟರ್ ಹಾಗೂ ಜೆಸಿಬಿ ಯಂತ್ರದಿಂದ ನಾಶ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೈಸೂರಿನಲ್ಲಿ ವಾಸವಾಗಿರುವ ಜಗದೀಶ್ ಎಂಬುವವರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಇದರಿಂದ ರೈತ ಯಸಳೂರು ಗ್ರಾಮದ ಭವನ್ ಅವರಿಗೆ ಸುಮಾರು ₹ 4 ಲಕ್ಷ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಜಗದೀಶ್ ಅವರ ಪತ್ನಿ ಕಮಲಾಕ್ಷಿ ಅವರಿಗೆ ಸೇರಿದ 3 ಎಕರೆ ಜಾಗವನ್ನು ಭವನ್ ಅವರು 2019ರ ವರೆಗೆ ಲೀಸ್ ಪಡೆದಿದ್ದಾರೆ. ಕಾಡು ಹಾಗೂ ದಿಣ್ಣೆಯಾಗಿದ್ದ ಭೂಮಿಯನ್ನು ₹ 1.50 ಲಕ್ಷ ಖರ್ಚು ಮಾಡಿ ಸಮತಟ್ಟು ಮಾಡಿಸಿ, ಜೋಳ ಬೆಳೆದಿದ್ದರು.
ಫಲವತ್ತಾಗಿ ಬಂದಿದ್ದ ಜೋಳದಿಂದ ಸುಮಾರು ₹ 4 ಲಕ್ಷ ಆದಾಯ ನಿರೀಕ್ಷೆ ಮಾಡಲಾಗಿತ್ತು. ಆದರೆ, ಜಗದೀಶ್ ಅವರು ಸೆ. 2ರಂದು ಏಕಾಏಕಿ ಬೆಳೆ ನಾಶ ಮಾಡಿದ್ದಾರೆ ಎಂದು ಭವನ್ ಯಸಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.