ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಪಾ ಶಶಿಧರ್‌ಗೆ ಟಿಕೆಟ್ ಖಚಿತ: ಮುನಿಯಪ್ಪ

Last Updated 6 ಸೆಪ್ಟೆಂಬರ್ 2017, 6:55 IST
ಅಕ್ಷರ ಗಾತ್ರ

ಕೆಜಿಎಫ್: ‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೆಜಿಎಫ್ ವಿಧಾನಸಭಾ ಕ್ಷೇತ್ರದಿಂದ ಅಪೆಕ್ಸ್‌ ಬ್ಯಾಂಕ್ ನಿರ್ದೇಶಕಿ ರೂಪಾ ಶಶಿಧರ್‌ ಅವರಿಗೆ ಕಾಂಗ್ರೆಸ್ ಟಿಕೆಟ್‌ ಸಿಗುವುದು ಖಚಿತ’ ಎಂದು ಸಂಸದ ಕೆ.ಎಚ್‌.ಮುನಿಯಪ್ಪ ಹೇಳಿದರು.

ಬೇತಮಂಗಲದಲ್ಲಿ ಮಂಗಳವಾರ ನಡೆದ ಬೂತ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಇತರ ಆಕಾಂಕ್ಷಿಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ. ರೂಪಾ ಮಾಡುತ್ತಿರುವ ಪಕ್ಷದ ಸಂಘಟನೆ ಮತ್ತು ಸೇವೆಯನ್ನು ಹೈಕಮಾಂಡ್‌ ಖಂಡಿತವಾಗಿಯೂ ಗುರುತಿಸಿದೆ’ ಎಂದರು.

‘ರಾಜ್ಯದಲ್ಲಿ ಯಾವ ಪಂಚಾಯಿತಿಯಲ್ಲಿಯೂ ಸಾಮಾನ್ಯ ವರ್ಗದವರಿಗೆ ಸರ್ಕಾರಿ ಮನೆ ಇಲ್ಲ. ಸಾಮಾನ್ಯ ವರ್ಗದವರಲ್ಲಿ ಕೂಡ ಬಡವರಿದ್ದಾರೆ. ಇಂತಹ ವರ್ಗದವರಿಗೆ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ಎರಡು ಸಾವಿರ ಮನೆಗಳನ್ನಾದರೂ ಕೊಡಬೇಕು ಎಂಬ ತೀರ್ಮಾನವನ್ನು ಪಕ್ಷದ ವರಿಷ್ಠರ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಅದು ಈಗ ಅನುಷ್ಠಾನಕ್ಕೆ ಬರುತ್ತಿದೆ’ ಎಂದರು.

‘ರಾಜ್ಯದ ಇತಿಮಿತಿಯಲ್ಲಿ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ಆದರೆ ಕೇಂದ್ರ ಸರ್ಕಾರ ಮಾತ್ರ ಸಾಲ ಮನ್ನಾ ಮಾಡಲು ಆಸಕ್ತಿ ತೋರಲಿಲ್ಲ. ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ನಾವು ಸಾಲ ಮನ್ನಾ ಮಾಡಲು ನೋಟ್ ಪ್ರಿಂಟ್‌ ಮಾಡುತ್ತೇವಾ ಎಂದು ದುರಹಂಕಾರದ ಮಾತುಗಳನ್ನಾಡಿದ್ದರು’ ಎಂದು ಆರೋಪಿಸಿದರು.

‘ಕೆಜಿಎಫ್ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಸರ್ಕಾರ ನೀಡುವ ಅನುದಾನವನ್ನು ಬಳಸಿಕೊಂಡು ತಮ್ಮ ಸಾಧನೆ ಎಂದು ಶಾಸಕಿ ವೈ.ರಾಮಕ್ಕ ಮತ್ತು ಅವರ ಪುತ್ರ ಪ್ರಚಾರ ಪಡೆಯುತ್ತಿದ್ದಾರೆ. ರಾಜ್ಯ ಸರ್ಕಾರದ ಸಾಧನೆಗಳ ಪಟ್ಟಿಯನ್ನು ದಾಖಲೆ ಸಮೇತ ಮತದಾರರಿಗೆ ನೀಡುವೆ’ ಎಂದು ಹೇಳಿದರು.

ರೂಪಾ ಶಶಿಧರ್ ಮಾತನಾಡಿ, ‘ಪಕ್ಷದ ಸಂಘಟನೆಯಲ್ಲಿ ಹೊಸಬರು ಮತ್ತು ಹಳಬರು ಎಂಬ ತಾರತಮ್ಯ ಬೇಡ. ಸಿದ್ಧಾಂತ ಮತ್ತು ತತ್ವಗಳನ್ನು ಒಪ್ಪಿ ಬರುವವರನ್ನು ಸಂಘಟನೆಯಲ್ಲಿ ಬಳಸಿಕೊಳ್ಳಬೇಕು’ ಎಂದರು.

ಮುಖಂಡರಾದ ವೆಂಕಟಕೃಷ್ಣರೆಡ್ಡಿ, ಮುನಿರತ್ನಂನಾಯ್ಡು, ಕ್ಯಾಸಂಬಳ್ಳಿ ಮನೋಹರ್‌, ಕಾರಿ ಪ್ರಸನ್ನ, ವಿಜಯರಾಘವರೆಡ್ಡಿ, ಸಂದ ಮುನಿಸ್ವಾಮಿ, ಆರ್‌.ನಾರಾಯಣರೆಡ್ಡಿ, ಕೆ.ವಿ.ಕುಮಾರಿ, ರಾಮಚಂದ್ರ, ಸುಬ್ರಹ್ಮಣಿ, ದುರ್ಗಾಪ್ರಸಾದ್‌, ನಾಗರಾಜ್‌ ಮಾತನಾಡಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT