ಪುತ್ತೂರು: ಭಾನುವಾರ ಶಾಂತಿಮೊ ಗರು ಬಳಿ ಕುಮಾರಧಾರಾ ನದಿಯಲ್ಲಿ ಯುವಕ ನೀರು ಪಾಲಾದ ಬೆನ್ನಲ್ಲೇ, ಮಂಗಳವಾರ ಸಂಜೆ ಇಬ್ಬರು ಸಹೋದರರು ಕುಮಾರಧಾರಾ ನದಿ ಪಾಲಾಗಿದ್ದಾರೆ. ಮಂಗಳವಾರ ಸಂಜೆ ಪುತ್ತೂರು ತಾಲ್ಲೂಕಿನ ಕುದ್ಮಾರು ಗ್ರಾಮದ ಶಾಂತಿ ಮೊಗರು ಬಳಿ ಕುಮಾರಧಾರಾ ನದಿಗೆ ಸ್ನಾನಕ್ಕಿಳಿದ ಕಡಬ ಕುಟ್ರುಪ್ಪಾಡಿ ಗ್ರಾಮದ ಅಲರ್ಮೆ ದಿ. ಚೆನ್ನಪ್ಪ ಪೂಜಾರಿ ಅವರ ಪುತ್ರರಾದ ಹರಿಪ್ರಸಾದ್(30) ಹಾಗೂ ಸತ್ಯಪ್ರಸಾದ್(25) ನೀರು ಪಾಲಾಗಿದ್ದಾರೆ. ಇವರ ಜತೆಯೇ ನೀರಿಗಿಳಿದಿದ್ದ ಅವರ ಚಿಕ್ಕಪ್ಪನ ಮಗ ರೋಹಿತ್ ಅಪಾಯದಿಂದ ಪಾರಾಗಿದ್ದಾರೆ.
ಮೂವರೂ ಸೋಮವಾರ ಸುಳ್ಯ ತಾಲ್ಲೂಕಿನ ಏನೇಕಲ್ಲು ಎಂಬಲ್ಲಿರುವ ಚಿಕ್ಕಮ್ಮನ ಮನೆಗೆ ಕಾರ್ಯಕ್ರಮಕ್ಕೆಂದು ಹೋಗಿದ್ದರು. ಮಂಗಳವಾರ ಶಾಂತಿಮೊಗರು ಮೂಲಕ ಕಡಬಕ್ಕೆ ತೆರಳುತ್ತಿದ್ದರು. ಕುದ್ಮಾರು ಗ್ರಾಮದ ಶಾಂತಿಮೊಗರು ಸೇತುವೆ ಬಳಿ ಸ್ನಾನಕ್ಕೆಂದು ಮೂವರು ನೀರಿಗಿಳಿದಿದ್ದು, ಆಳವನ್ನು ಅರಿಯದೇ ಅಪಾಯಕ್ಕೀಡಾದರು.
ನೀರುಪಾಲಾದವರ ಪತ್ತೆಗಾಗಿ ಸ್ಥಳೀಯ ಈಜುಗಾರರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಬೆಳ್ಳಾರೆ ಠಾಣಾ ಸಬ್ ಇನ್ಸ್ಪೆಕ್ಟರ್ ಎಂ.ವಿ. ಚೆಲುವಯ್ಯ ಹಾಗೂ ಸಿಬ್ಬಂದಿ ಸ್ಥಳದಲ್ಲಿ ಠಿಕಾಣಿ ಹೂಡಿದ್ದಾರೆ.
ಹರಿಪ್ರಸಾದ್ ಅವರು ಕಡಬದಲ್ಲಿ ಟೈಲರ್ ವೃತ್ತಿ ಮತ್ತು ರಾತ್ರಿ ಪಾಳಿಯಲ್ಲಿ ಬಿಎಸ್ಎನ್ಎಲ್ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅವಿವಾಹಿತ ಸತ್ಯಪ್ರಸಾದ್ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು ಬುಧವಾರ ಬೆಂಗಳೂರಿಗೆ ಮರಳಬೇಕಿತ್ತು.
ಘಟನಾ ಸ್ಥಳದಲ್ಲಿ ಭಾರಿ ಜನಸ್ತೋ ಮವೇ ನೆರೆದಿದ್ದು, ಸ್ಥಳಕ್ಕೆ ಸುಳ್ಯ ಶಾಸಕ ಎಸ್. ಅಂಗಾರ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಪ್ರಮೀಳಾ ಜನಾರ್ದನ, ಪಿ.ಪಿ. ವರ್ಗೀಸ್, ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಲಲಿತಾ ಈಶ್ವರ, ತಾರಾ ತಿಮ್ಮಪ್ಪ, ಜಿಲ್ಲಾ ಕೆಡಿಪಿ ಸದಸ್ಯ ಸತೀಶ್ ಕುಮಾರ್ ಕೆಡೆಂಜಿ, ಜಿಲ್ಲಾ ಸಹಕಾರ ಭಾರತೀಯ ಅಧ್ಯಕ್ಷ ಉದಯ ರೈ ಮಾದೋಡಿ, ಪುತ್ತೂರು ಎಪಿಎಂಸಿ ಸದಸ್ಯ ದಿನೇಶ್ ಮೆದು ಭೇಟಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.