ದಾವಣಗೆರೆ: ‘ಮಂಗಳೂರಿನಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ನಡೆಸುತ್ತಿರುವ ಪೈಪೋಟಿ ಯಾವ ಪುರುಷಾರ್ಥಕ್ಕೆ’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಪ್ರಶ್ನಿಸಿದರು. ‘ಮಂಗಳೂರು ವಿದ್ಯಮಾನ ಕುರಿತಂತೆ ಬಿಜೆಪಿ–ಕಾಂಗ್ರೆಸ್ ಪಕ್ಷಗಳ ನಡುವೆ ಶೀತಲ ಸಮರ ಇದೆ. ಆದರೆ, ಅವು ಶಾಂತಿ, ಸಾಮರಸ್ಯ ಸ್ಥಾಪಿಸಲು ಪ್ರಯತ್ನಿಸುತ್ತಿವೆಯೋ ಅಥವಾ ಕದಡಲು ಪೈಪೋಟಿ ನಡೆಸುತ್ತಿವೆಯೋ ಎಂಬುದು ಅರ್ಥವಾಗುತ್ತಿಲ್ಲ. ಈ ಮೂಲಕ ರಾಷ್ಟ್ರ ಮತ್ತು ರಾಜ್ಯಕ್ಕೆ ಯಾವ ಸಂದೇಶ ನೀಡಲು ಹೊರಟಿವೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ವಾಗ್ದಾಳಿ ನಡೆಸಿದರು.