ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಿಗೆ ಜೀವ ತುಂಬಿ...

Last Updated 6 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಓದಿದ್ದು ಎಂಬಿಎ. ವಿದ್ಯಾಭಾಸಕ್ಕೆ ತಕ್ಕಂತೆ ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲಸ ಸಿಕ್ಕಿತು. ಕೈತುಂಬಾ ಸಂಬಳವೂ. ಒಂದೆರಡು ವರ್ಷ ಮಾಲೀಕನ ಆಜ್ಞಾಪಾಲಕನಾಗಿ ಕೆಲಸ ಮಾಡಿದ್ದಾಯಿತು. ಆದರೆ, ‘ಕಲ್ಲಿ’ನ ಸೆಳೆತ ಮನವನ್ನು ಕಟಿಯುತ್ತಲೇ ಇತ್ತು. ಚಿಕ್ಕಂದಿನಿಂದ ಆಡಿ, ಕಲಿತು, ಕಲೆತ ‘ಕಲ್ಲಿ’ನ ಸಖ್ಯವೇ ಬೇಕೆನಿಸಿತು. ಅಂದೇ ಉದ್ಯೋಗಕ್ಕೆ ಗುಡ್‌ಬೈ ಹೇಳಿ, ಕಲ್ಲಿಗೆ ಮೂರ್ತರೂಪ ಕೊಡಲು ಸಿದ್ಧರಾದರು. ಕಲ್ಲಿನಲ್ಲೇ ಭವಿಷ್ಯ ಕಂಡುಕೊಂಡು, ಅಮೂರ್ತ ಬದುಕಿಗೂ ಮೂರ್ತರೂಪ ಕೊಟ್ಟುಕೊಳ್ಳಲು ಮುಂದಾದರು ಮೈಸೂರಿನ ಶಿಲ್ಪ ಕಲಾವಿದ ಅರುಣ್‌ ಯೋಗಿರಾಜ್‌.

ಏಳೆಂಟು ವರ್ಷಗಳ ಕಠಿಣ ಪರಿಶ್ರಮದ ಫಲವಾಗಿ ಅವರೊಬ್ಬ ಪ್ರಸಿದ್ಧ ಶಿಲ್ಪಿಯಾಗಿ ಹೊರಹೊಮ್ಮಿದ್ದಾರೆ. ನಾಡು, ಹೊರನಾಡು, ಹೊರದೇಶಗಳಲ್ಲೂ ಇವರ ಉಳಿಪೆಟ್ಟು ತಿಂದ ಶಿಲ್ಪ ಕಲಾಕೃತಿಗಳು ಮೈದಳೆದಿವೆ. ಇವರ ಕೌಶಲದಿಂದ ತಯಾರಾದ ವಿಶ್ವೇಶ್ವರಯ್ಯ, ಅಂಬೇಡ್ಕರ್‌, ವಿಘ್ನೇಶನ ಮೂರ್ತಿಗಳಿಗೆ ಲೆಕ್ಕವಿಲ್ಲ.

ಕಲ್ಲನ್ನೂ ದೇವರಾಗಿಸುವ ಶಕ್ತಿ ಉಳಿಪೆಟ್ಟಿಗಿದೆ. ಆದರೆ, ಉಳಿ ಇಟ್ಟು ಪೆಟ್ಟು ಕೊಡುವ ಕಲೆ ಎಲ್ಲರಿಗೂ ಸಿದ್ಧಿಸದು. ಸರಿಯಾದ ಪೆಟ್ಟು ಕೊಡದಿದ್ದರೆ ಕಲ್ಲು ಪ್ರಯೋಜನಕ್ಕೆ ಬಾರದು. ಅರುಣ್‌ ಅವರ ‘ಪಾಠಶಾಲೆ’ಯಲ್ಲೂ ಅಂತಹ ಹಲವು ಮೂರ್ತಿಗಳಿವೆ. ಅವೆಲ್ಲವೂ ಅವರ ಕಲಿಕೆಗೆ ಮೆಟ್ಟಿಲಾಗಿವೆ. ನಿರಂತರ ಪ್ರಯೋಗಶೀಲತೆ, ಕಲಿಕೆಯ ಹಂಬಲ ಅರುಣ್‌ ಅವರನ್ನು ಶಿಲ್ಪಿಯಾಗಿಸಿವೆ. ನಿರ್ಜೀವ ಕಲ್ಲಿಗೂ ಜೀವಕಳೆ ತುಂಬುವ ಕಲೆ ಕರಗತವಾಗಿದೆ.

ಅಗ್ರಹಾರದ ಗನ್‌ಹೌಸ್‌ ಪಕ್ಕದಲ್ಲಿ ಶತಮಾನದಷ್ಟು ಹಳೆಯದಾದ ಅರುಣ್‌ ಅವರ ಮನೆಯ ಆವರಣದಲ್ಲಿರುವ ‘ವರ್ಕ್‌ಶಾಪ್‌’ನಿಂದ ‘ಕಟ್‌ ಕಟ್‌’ ಎಂಬ ಶಬ್ದ ದಾರಿಹೋಕರನ್ನು ಸೆಳೆಯುತ್ತದೆ. ಶಬ್ದದ ಜಾಡು ಹಿಡಿದು ಒಳಹೊಕ್ಕರೆ ಶಿಲ್ಪ ಕಲಾಕೃತಿಯ ‘ಪ್ರಯೋಗಶಾಲೆ’ ಅನಾವರಣಗೊಳ್ಳುತ್ತದೆ.

ತಪ್ಪು ಉಳಿಪೆಟ್ಟಿನಿಂದ ಅಲ್ಪಸ್ವಲ್ಪ ಅಂದಗೆಟ್ಟಿರುವ ಬುದ್ಧ, ಬಸವಣ್ಣ, ವಿಶ್ವೇಶ್ವರಯ್ಯ, ಬಿ.ಆರ್‌.ಅಂಬೇಡ್ಕರ್‌, ಜನರಲ್‌ ಕಾರ್ಯಪ್ಪ, ಡಾ.ರಾಜ್‌ಕುಮಾರ್‌, ನಂದಿ, ಲಕ್ಷ್ಮಿ, ಸರಸ್ವತಿ ಮೂರ್ತಿಗಳು ಸ್ವಾಗತವೀಯುತ್ತವೆ. ಅವೆಲ್ಲವೂ ಪ್ರಯೋಗಶಾಲೆಯ ಪೂರ್ಣಪಾಠವನ್ನು ಮೂಕವಿಸ್ಮಿತವಾಗುವಂತೆ ವಿವರಿಸುತ್ತವೆ. ಅರುಣ್‌ ಅವರ ಪ್ರಯೋಗಶೀಲತೆಗೆ ಈ ಮೂರ್ತಿಗಳು ಸಾಕ್ಷಿಯಾಗಿವೆ.

ಮೈಸೂರಿನ ಹಾರ್ಡಿಂಜ್‌ ವೃತ್ತದಲ್ಲಿ ನಿರ್ಮಿಸಿರುವ ಜಯಚಾಮರಾಜ ಒಡೆಯರ್‌ ಪ್ರತಿಮೆ ಇವರ ಕುಶಲತೆಗೆ ಹಿಡಿದ ಕೈಗನ್ನಡಿ. 14.5 ಎತ್ತರದ ಮೂರ್ತಿ (ಪೀಠವೂ ಸೇರಿ) ಅಮೃತಶಿಲೆಯಲ್ಲಿ ಅರಳಿದೆ. ಮೂವರು ಅರಸರ ಪ್ರತಿಮೆಗಳು ಆಲ್ಬರ್ಟ್‌ ವಿಕ್ಟರ್‌ ರಸ್ತೆಯೊಂದರಲ್ಲೇ ರಾರಾಜಿಸುತ್ತಿವೆ. ಚಾಮರಾಜ ಒಡೆಯರ್‌ ಪ್ರತಿಮೆ ಲಂಡನ್‌ನಲ್ಲಿ ಹಾಗೂ ಕೃಷ್ಣರಾಜ ಒಡೆಯರ್‌ ಪ್ರತಿಮೆ ಮುಂಬೈನಲ್ಲಿ ಸಿದ್ಧಗೊಂಡಿದ್ದವು. ಜಯಚಾಮರಾಜ ಒಡೆಯರ್‌ ಪ್ರತಿಮೆ ಮೈಸೂರಿನಲ್ಲಿ ಅದೂ ಇಲ್ಲಿನ ಕಲಾವಿದ ನಿರ್ಮಿಸಿರುವುದು ನಾಡಿನ ಹೆಮ್ಮೆಯೂ, ಮೈಸೂರಿಗೆ ಸಿಕ್ಕ ಗೌರವ ಕೂಡ.

ಜೈಪುರದಿಂದ ತಂದ ಏಕಶಿಲೆಯಲ್ಲಿ ಈ ಪ್ರತಿಮೆ ಕೆತ್ತಲಾಗಿದೆ. ಬರೋಬ್ಬರಿ 28 ಟನ್‌ ಇದ್ದ ಶಿಲೆ ಜಯಚಾಮರಾಜ ಒಡೆಯರ್‌ ರೂಪಕ್ಕೆ ಬಂದಾಗ 12 ಟನ್‌ಗೆ ಇಳಿಯಿತು. 8 ಮಂದಿ ಸಹಾಯಕರ ಜತೆಗೂಡಿ 6 ತಿಂಗಳಲ್ಲಿ ಈ ಮೂರ್ತಿಯನ್ನು ನಿರ್ಮಿಸಲಾಗಿದೆ. ಹಾಲು ಬಣ್ಣದ ಒಡೆಯರ್‌ ಪ್ರತಿಮೆಯನ್ನು ನೋಡುವುದೇ ಮೈಸೂರಿಗರಿಗೆ ಒಂದು ಹಬ್ಬ. ಈ ಕಲಾಕೃತಿ ಅರುಣ್‌ ಅವರಿಗೆ ಹೆಸರನ್ನೂ ತಂದುಕೊಟ್ಟಿತು. ಐದು ಅಡಿ ಪೀಠಸ್ಥಳದ ಮೇಲೆ ಪ್ರತಿಷ್ಠಾಪಿಸಿರುವ ಈ ಪ್ರತಿಮೆ 2016ರಲ್ಲಿ ಲೋಕಾರ್ಪಣೆಗೊಂಡಿತು.

‘ಒಡೆಯರ್‌ ಪ್ರತಿಮೆ ಮಾಡುವ ಅವಕಾಶ ಅರಸಿ ಬಂದಾಗ ಸಂತಸದ ಜತೆ ಆತಂಕವೂ ಮೂಡಿತ್ತು. ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸುವುದು ಸವಾಲಾಗಿತ್ತು. ಅಲ್ಲದೆ ಅಮೃತಶಿಲೆಯಲ್ಲಿ ಕೆತ್ತನೆ ಮಾಡಿದ್ದು ಅದೇ ಮೊದಲು. ಮನೆಯ ಮುಂಭಾಗವೇ ಶಿಲೆಗೆ ಮೂರ್ತರೂಪ ಕೊಟ್ಟೆ. ಒಡೆಯರ್‌ ಅವರನ್ನು ಕಣ್ಣಾರೆ ಕಂಡಿದ್ದ ಕೆಲವರು ‘ರಾಜರ ಮುಖಭಾವ ಯಥಾವತ್ತಾಗಿ ಮೂಡಿಬಂದಿದೆ. ರಾಜನೇ ಬಂದು ನಿಂತಂತಿದೆ’ ಎಂದು ಹೇಳಿದಾಗ ನನ್ನ ಶ್ರಮ ಸಾರ್ಥಕ್ಯ ಪಡೆದುಕೊಂಡಿತು. ಒಬ್ಬ ಕಲಾವಿದನಿಗೆ ಇದಕ್ಕಿಂತ ದೊಡ್ಡ ಬಹುಮಾನ ಇನ್ನೇನು ಬೇಕು’ ಎಂದು ಆತ್ಮವಿಶ್ವಾಸದ ನಗು ಬೀರುತ್ತಾರೆ ಅರುಣ್‌.

ಪ್ರತಿ ಕ್ಷಣವನ್ನೂ ನಿರ್ಜೀವ ಕಲ್ಲಿನ ಜತೆ ಕಳೆಯಲು ಬಯಸುವ ಅವರು, ಮೈಸೂರು ವಿಶ್ವವಿದ್ಯಾಲಯದಲ್ಲಿ ‘ಕ್ರಿಯೇಶನ್‌ ಆಫ್‌ ಕ್ರಿಯೇಶನ್ಸ್‌’ ಎಂಬ ಕಲಾಕೃತಿಯನ್ನು ರಚಿಸಿದ್ದಾರೆ. ಶ್ರೀರಂಗಪಟ್ಟಣದ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ 6 ಅಡಿ ಎತ್ತರದ ಗರುಡಮೂರ್ತಿ, ಮೈಸೂರಿನ ಕೆ.ಆರ್‌.ನಗರದಲ್ಲಿ 7 ಅಡಿ ಎತ್ತರದ ಯೋಗ ನರಸಿಂಹಸ್ವಾಮಿ ಮೂರ್ತಿ, ಆಂಧ್ರಪ್ರದೇಶದಲ್ಲಿ 7 ಅಡಿ ಎತ್ತರದ ಮಹೇಶ್ವರಿ ದೇವರ ಮೂರ್ತಿ, ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರಸ್ವಾಮೀಜಿ ಮೂರ್ತಿ, 6 ಅಡಿ ಎತ್ತರದ ನಂದಿ ವಿಗ್ರಹ, ಬುದ್ಧನ ವಿವಿಧ ಭಂಗಿಗಳ ಮೂರ್ತಿಗಳು, ಪಂಚಮುಖ ಗಣಪತಿ, ಲಕ್ಷ್ಮಿ, ಸರಸ್ವತಿ... ಹೀಗೆ ಅರುಣ್‌ ಅವರು ಕಲ್ಲಿನಿಂದ ನಿರ್ಮಿಸಿದ ಮೂರ್ತಿಗಳಿಗೆ ಲೆಕ್ಕವಿಲ್ಲ.

10 ಅಡಿ ಎತ್ತರದ ರಾಮಕೃಷ್ಣ ಪರಮಹಂಸರ (ಕುಳಿತಿರುವ ಭಂಗಿ) ಮೂರ್ತಿ, 6 ಅಡಿ ಎತ್ತರದ ನಂದಿ ವಿಗ್ರಹ, 8 ಅಡಿ ಎತ್ತರದ ಶಿವನ ಮೂರ್ತಿ, 6 ಅಡಿ ಎತ್ತರದ ಬನಶಂಕರಿ ಪ್ರತಿಮೆ ಸದ್ಯ ಇವರ ಉಳಿಪೆಟ್ಟಿನಿಂದ ಅರಳುತ್ತಿವೆ. ದೇವರ ಹಾಗೂ ಮನುಷ್ಯರ ಮೂರ್ತಿಗಳ ನಿರ್ಮಾಣದ ಜತೆಗೆ ಮಾಡರ್ನ್‌ ಆರ್ಟ್‌ನಲ್ಲೂ ಅರುಣ್‌ ಅವರದ್ದು ಎತ್ತಿದ ಕೈ. ಮೃಗಾಲಯದ 125ನೇ ವರ್ಷದ ನೆನಪಿಗಾಗಿ ‘ZOO’ ಅಕ್ಷರಗಳನ್ನು ಕಲ್ಲಿನಲ್ಲಿ ಕೆತ್ತಿದ್ದು, ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.ಶಿಲ್ಪ ಕಲಾಕೃತಿ ನಿರ್ಮಾಣದ ಜತೆಗೆ ಕ್ಲೇ ಮಾಡೆಲಿಂಗ್‌, ಚಿತ್ರಕಲೆಯಲ್ಲೂ ಛಾಪು ಮೂಡಿಸಿದ್ದಾರೆ. ಜತೆಗೆ ವಾಲಿಬಾಲ್‌ ಕ್ರೀಡೆಯಲ್ಲೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ ಅರುಣ್‌.

ಮನೆಯೇ ಪಾಠಶಾಲೆ: ಅರುಣ್‌ ಅವರಿಗೆ ಕಲ್ಲಿನ ಸಖ್ಯ ಇಂದು ನಿನ್ನೆಯದಲ್ಲ. ಹುಟ್ಟಿದಾಗಿನಿಂದ ಕಲ್ಲಿನ ಜತೆಯಲ್ಲೇ ಬೆಳೆದಿದ್ದಾರೆ. ಶಿಲ್ಪ ಕಲಾಕೃತಿಯ 5ನೇ ತಲೆಮಾರಿನವರು ಅರುಣ್‌. ಚೌಡಪ್ಪ ಆಚಾರ್‌, ಬಸವಣ್ಣ ಆಚಾರ್‌, ಬಸವಣ್ಣ ಶಿಲ್ಪಿ, ಯೋಗಿರಾಜ್‌ ಶಿಲ್ಪಿ ಪ್ರಸಿದ್ಧ ಶಿಲ್ಪ ಕಲಾವಿದರು. ತಾತ ಬಿ.ಬಸವಣ್ಣ ಶಿಲ್ಪಿ ಅರಮನೆ ಕಲಾವಿದರಾಗಿದ್ದರು. ಜಯಚಾಮರಾಜ ಒಡೆಯರ್‌ ಅವರ ಒಡನಾಡಿಯಾಗಿದ್ದ ಈ ಕುಟುಂಬದವರು ಅರಮನೆ ಆವರಣದಲ್ಲಿ ಗಾಯತ್ರಿ, ಭುವನೇಶ್ವರಿ ದೇಗುಲ ನಿರ್ಮಿಸಿದ್ದರು. ಕೃಷ್ಣರಾಜಸಾಗರ ಅಣೆಕಟ್ಟೆಯಲ್ಲಿರುವ ಕಾವೇರಿ ಪ್ರತಿಮೆಯನ್ನು ರಚಿಸಿದವರು ಅವರೇ. ಇನ್ನು ಅರುಣ್‌ ಅವರ ತಂದೆ ಯೋಗಿರಾಜ್‌ ಶಿಲ್ಪಿ ಕೂಡ ಶಿಲ್ಪ ಕಲಾಕೃತಿಗೆ ಹೆಸರಾದವರು. ಹೀಗಾಗಿ, ಸಹಜವಾಗೇ ಅರುಣ್‌ ಅವರಿಗೆ ಕಲ್ಲಿನ ನಂಟು ಅಂಟಿಕೊಂಡಿತು.

ತಾತ, ಅಪ್ಪ ಕೊಡುತ್ತಿದ್ದ ಉಳಿಪೆಟ್ಟು ಬಾಲ್ಯದ ಅರುಣ್‌ ಅವರನ್ನು ಬಹುವಾಗಿ ಆಕರ್ಷಿಸಿತು. ಎಲ್ಲ ಮಕ್ಕಳೂ ಬಿಡುವಿನ ವೇಳೆ ಆಟ ಆಡಲು ಬಯಸಿದರೆ, ಅರುಣ್‌ ಕಲ್ಲಿನ ಸಾಂಗತ್ಯಕ್ಕೆ ಹಾತೊರೆದರು. ಚೆಂಡು ಹಿಡಿದು ಆಡುವ ವಯಸ್ಸಲ್ಲಿ ಉಳಿಯನ್ನು ಹಿಡಿದರು. ಮನೆಯ ಮುಂಭಾಗದಲ್ಲೇ ಕಲಾಕೃತಿ ರಚನೆಯಲ್ಲಿ ತೊಡಗುತ್ತಿದ್ದ ತಾತ, ಅಪ್ಪನ ಕೆಲಸಕ್ಕೆ ನೆರವಾದರು. ಎಳೆಯ ಕೈಗಳು ಉಳಿಯನ್ನು ಹಿಡಿದು ಪೆಟ್ಟುಮಾಡಿಕೊಂಡಿದ್ದೂ ಉಂಟು. ಆದರೆ, ಅದಾವುದೂ ಅರುಣ್‌ ಅವರ ಉತ್ಸಾಹ ಕುಗ್ಗಿಸಲಿಲ್ಲ. ಶಾಲೆಯಿಂದ ಬಂದೊಡನೇ ಕೈಯಲ್ಲಿ ಉಳಿ ಹಿಡಿಯುತ್ತಿದ್ದರು. ಇನ್ನು ಕಾಲೇಜಿಗೆ ಹೋಗುವಾಗಲೂ, ಮೋಜು ಮಸ್ತಿ ಎಂದು ತಿರುಗದೆ ಕಲ್ಲಿನ ಒಡನಾಟ ಬೆಳೆಸಿಕೊಂಡರು. ವಿದ್ಯಾರ್ಥಿಯಾಗಿದ್ದಾಗಲೇ ಹಲವು ಮೂರ್ತಿಗಳನ್ನು ರಚಿಸಿ, ತಾತ, ಅಪ್ಪ ಹುಬ್ಬೇರಿಸುವಂತೆ ಮಾಡಿದ್ದರು.

‘ಪ್ರತಿ ಕಲ್ಲನ್ನೂ ಜೀವಂತವಾಗಿರಿಸಬೇಕು ಎಂಬುದು ನನ್ನ ಆಸೆ. ತಾತ, ಅಪ್ಪ ಕೊಡುತ್ತಿದ್ದ ಪ್ರತಿ ಉಳಿಪೆಟ್ಟೂ ನನ್ನನ್ನು ಗಾಢವಾಗಿ ಪ್ರಭಾವಿಸಿದವು. ನನ್ನನ್ನೂ ಸುಂದರ ಮೂರ್ತಿಯಾಗಿ ಹೊರಹೊಮ್ಮುವಂತೆ ಅವರು ಕಟೆದಿದ್ದಾರೆ. ಹಾಗಾಗಿ, ಮನೆಯೇ ನನಗೆ ಪಾಠಶಾಲೆಯಾಯಿತು’ ಎನ್ನುತ್ತಾರೆ ಅರುಣ್‌.

2014ರಲ್ಲಿ ಕೇಂದ್ರ ಸರ್ಕಾರದ ‘ಯಂಗ್‌ ಟ್ಯಾಲೆಂಟ್‌’ ಪ್ರಶಸ್ತಿ, ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಇವರನ್ನು ಅರಸಿ ಬಂದಿವೆ.ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೋಫಿ ಅನ್ನಾನ್‌ ಕೂಡ ಇವರ ಕಲಾಕೃತಿಗಳನ್ನು ಮೆಚ್ಚಿಕೊಂಡಿದ್ದಾರೆ. ಬಸವಣ್ಣ ಶಿಲ್ಪಿ ಆರಂಭಿಸಿದ ‘ಕಶ್ಯಪ ಶಿಲ್ಪ’ ಕಲಾ ಶಾಲೆಯನ್ನು ಮುನ್ನಡೆಸುತ್ತಿರುವ ಅರುಣ್‌, ವಿದೇಶಿಗರಿಗೂ ಉಚಿತವಾಗಿ ಶಿಲ್ಪಕಲಾ ಪಾಠ ಹೇಳಿಕೊಡುತ್ತಾರೆ. ಜತೆಗೆ ಶಿಲ್ಪಕಲೆ, ಚಿತ್ರಕಲೆಗೆ ಸಂಬಂಧಿಸಿದಂತೆ ಹಲವಾರು ಶಿಬಿರ, ಕಾರ್ಯಾಗಾರಗಳನ್ನೂ ಆಯೋಜಿಸಿ ಕಲಾವಿದರನ್ನು ಹುಟ್ಟುಹಾಕುವ ಪ್ರಯತ್ನದಲ್ಲಿಯೂ ತೊಡಗಿಕೊಂಡಿದ್ದಾರೆ.

‘ಅನೇಕ ದೇಶಗಳಲ್ಲಿ ಶಿಲ್ಪಕಲಾ ಪಾರ್ಕ್‌ಗಳು ರಚನೆಯಾಗಿವೆ. ಅವು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತವೆ. ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿರುವ ಮೈಸೂರಿನಲ್ಲೂ ಶಿಲ್ಪಕಲಾ ಪಾರ್ಕ್‌ ನಿರ್ಮಾಣವಾದರೆ ನಗರದ ಅಂದ ಇಮ್ಮಡಿಗೊಳ್ಳಲಿದೆ. ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆತಂತಾಗುತ್ತದೆ. ಈ ನಿಟ್ಟಿನಲ್ಲಿ ಕಾರ್ಯತತ್ಪರವಾಗಬೇಕಿದೆ’ ಎಂದು ಮನದ ಇಂಗಿತ ವ್ಯಕ್ತಪಡಿಸುತ್ತಾರೆ ಅರುಣ್‌.
ಅರುಣ್‌ ಅವರ ಸಂಪರ್ಕಕ್ಕೆ: 98861 43188.

ಅಪ್ರತಿಮ ಅಂಬೇಡ್ಕರ್‌ ಪ್ರತಿಮೆ
ಮೈಸೂರಿನ ಪುರಭವನದ ಮುಂದೆ ನಿರ್ಮಿತವಾಗಿರುವ ಮಾರ್ಬಲ್‌ ಮಂಟಪದಲ್ಲಿ ಅರುಣ್‌ ಅವರ ರಚನೆಯ ಅಮೃತಶಿಲೆಯ ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆ ಸದ್ಯದಲ್ಲೇ ವಿರಾಜಿಸಲಿದೆ. ಅಂಬೇಡ್ಕರ್‌ ಪ್ರತಿಮೆ ಎಂದರೆ ತಟ್ಟಂಥ ಕಪ್ಪು ಶಿಲೆಯ ಮೂರ್ತಿ ಕಣ್ಣಿನ ಪಟಲಗಳಲ್ಲಿ ಹಾದುಹೋಗುತ್ತದೆ. ಅಮೃತಶಿಲೆಯಲ್ಲಿ ಸಂವಿಧಾನ ಶಿಲ್ಪಿ ನಿರ್ಮಾಣವಾಗಿರುವುದು ಅಪರೂಪ. ಇದು ದೇಶದಲ್ಲೇ ಮೊದಲು ಎಂಬ ಮಾತೂ ಇದೆ. ಏಕಶಿಲೆಯಲ್ಲಿ 9.5 ಅಡಿ ಎತ್ತರದ ಅಂಬೇಡ್ಕರ್‌ ಪ್ರತಿಮೆ ತಯಾರಾಗಿದೆ.

ರಾಜಸ್ಥಾನದಿಂದ ಬೃಹತ್‌ ಶಿಲೆಯನ್ನು ತರಿಸಲಾಗಿದ್ದು, ಕೆತ್ತನೆಗೂ ಮುನ್ನ 30 ಟನ್‌ ಇದ್ದ ಶಿಲೆ ಈಗ 12 ಟನ್‌ ಶಿಲ್ಪವಾಗಿದೆ.‘ಎಡಗೈಯಲ್ಲಿ ಸಂವಿಧಾನದ ಗ್ರಂಥ ಹಿಡಿದು, ಬಲಗೈ ತೋರು ಬೆರಳು ಮುಂದೆ ಮಾಡಿದ ಶೈಲಿಯಲ್ಲಿ ಮೂರ್ತಿ ಇದೆ. ಈ ಶೈಲಿಯಲ್ಲಿ ಒಂದೇ ಕಲ್ಲಿನಲ್ಲಿ ಪ್ರತಿಮೆ ಕೆತ್ತುವುದು ನಿಜಕ್ಕೂ ತ್ರಾಸದಾಯಕ. ತುದಿ ಬೆರಳಿನಿಂದ ಹಿಡಿದು ಪಾದದವರೆಗೂ ಅಳತೆಯಲ್ಲಿ ಸ್ವಲ್ಪವೂ ವ್ಯತ್ಯಾಸ ಆಗದಂತೆ ಕೆತ್ತುವುದು ನನ್ನ ಮುಂದಿದ್ದ ಸವಾಲು. ಎಂಟು ಜನ ಸಹಾಯಕರೊಂದಿಗೆ ನಾಲ್ಕು ತಿಂಗಳು ಶ್ರಮಿಸಿದೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಅರುಣ್‌.

ಕಪ್ಪು ಕಲೆಗಳಿಲ್ಲದ ಅಮೃತ ಶಿಲೆಯನ್ನು ಹುಡುಕುವುದು ಸುಲಭ ಕೆಲಸವಲ್ಲ. ತಜ್ಞರೊಂದಿಗೆ ರಾಜಸ್ಥಾನಕ್ಕೆ ಹೋಗಿ ಶಿಲೆ ಆರಿಸಿ ತಂದರು ಅರುಣ್‌. ‘ಕೆಲ ಕಲ್ಲುಗಳು ಉಳಿಪೆಟ್ಟಿಗೆ ಬಿರುಕು ಬಿಡುವ ಸಂಭವ ಇರುತ್ತದೆ. ಇನ್ನು ಕೆಲವು ಒಳಭಾಗದಲ್ಲಿ ಕಪ್ಪು ಕಲೆಗಳಿಂದ ಕೂಡಿರುತ್ತವೆ. ಹೊರನೋಟಕ್ಕೆ ಅದನ್ನು ಪತ್ತೆ ಹಚ್ಚುವುದು ಕಷ್ಟ. ಅನುಭವದ ಆಧಾರದಲ್ಲಿ ನನಗೆ ಕಲ್ಲುಗಳ ಆಯ್ಕೆ ಸುಲಭವಾಯಿತು’ ಎನ್ನುತ್ತಾರೆ ಅರುಣ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT