ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರೊಳಗಿರುವ ಹುಲಿರಾಯ!

Last Updated 7 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

‘ಸಿನಿಮಾ ಕಮರ್ಷಿಯಲ್‌ ಆಗಿಯೂ ಹಿಟ್‌ ಆಗುವುದು ಎಷ್ಟು ಮುಖ್ಯ ಎಂದು ನನಗೀಗ ಚೆನ್ನಾಗಿ ಮನವರಿಕೆ ಆಗಿದೆ’ ಹೀಗೆಂದು ನಕ್ಕರು ನಿರ್ದೇಶಕ ಅರವಿಂದ್‌ ಕೌಶಿಕ್‌. ಅವರ ಮಾತಿನಲ್ಲಿ ಹಳೆ ಸೋಲುಗಳಿಂದ ಕಲಿತ ಪಾಠ ಮತ್ತು ಹೊಸ ಆಲೋಚನೆಯನ್ನು ಜನರಿಗೆ ತಲುಪಿಸುವುದರ ಜತೆಗೆ ತಾನೂ ಬಚಾವಾಗುವ ಜಾಣತನ ಎರಡರ ಸುಳಿವೂ ಇತ್ತು. ಅವರ ಮೂರನೇ ಸಿನಿಮಾ ‘ಹುಲಿರಾಯ’ನನ್ನು ಮುಂದಿನ ತಿಂಗಳ ಮಧ್ಯಭಾಗದಲ್ಲಿ ತೆರೆಗೆ ತರುವ ಸಿದ್ಧತೆಯಲ್ಲಿದ್ದಾರೆ.

ಅರವಿಂದ್‌ ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದವು. ಮೊದಲಿನಿಂದಲೂ ಬರವಣಿಗೆಯಲ್ಲಿ ಆಸಕ್ತಿ ಇತ್ತು. ಸಣ್ಣ ಕಥೆ, ಕವಿತೆಗಳನ್ನು ಬರೆಯುತ್ತಿದ್ದರು.ಜತೆ ಜತೆಗೇ ಸಿನಿಮಾ ವ್ಯಾಮೋಹವೂ ಕುಡಿಯೊಡೆದಿತ್ತು. ಪಿಯುಸಿ ಮುಗಿಸುವಷ್ಟರಲ್ಲಿ ಓದಿ ಬರೆಯುವ ಅಂಕಗಳ ಪರೀಕ್ಷೆಗಿಂತ, ಬರೆದು ನೋಡುವ – ಜನರ ಎದುರಿಗೆ ತನ್ನ ಸೃಜನಶೀಲತೆಯನ್ನು ಪರೀಕ್ಷೆಗೊಡ್ಡಿಕೊಳ್ಳುವ ಸಿನಿಮಾ ಮಾಧ್ಯಮವೇ ತನಗೆ ಸರಿಹೊಂದುತ್ತದೆ ಎನಿಸಿತು. ಆದರೆ ಮನಸಿಗೆ ಕಂಡಷ್ಟು ಸುಲಭವಾಗಿ ಸಿನಿಮಾ ಮಾಡಿಮುಗಿಸಿಬಿಡುವುದು ಸಾಧ್ಯವಿಲ್ಲ ಎಂಬುದೂ ಅವರಿಗೆ ಚೆನ್ನಾಗಿಯೇ ತಿಳಿದಿತ್ತು. ಸಾಕಷ್ಟು ಪೂರ್ವಿಸಿದ್ಧತೆ ಮಾಡಿಕೊಂಡೇ ಚಿತ್ರರಂಗಕ್ಕೆ ಅಡಿಯಿಡಲು ನಿರ್ಧರಿಸಿ ‘ಕರ್ನಾಟಕ ಫಿಲಂ ಟೆಕ್ನಿಕಲ್‌ ಟ್ರೇನಿಂಗ್‌ ಸೆಂಟರ್‌’ ಸೇರಿಕೊಂಡರು. ಅಲ್ಲಿ ಸಿನಿಮಾ ನಿರ್ದೇಶನದಲ್ಲಿ ಡಿಪ್ಲೋಮಾ ಮಾಡಿದರು. ಈ ನಡುವೆ ಅವರು  ಇಂಗ್ಲೀಷಿನಲ್ಲಿ ಬರೆದ ಸಣ್ಣ ಕಥೆಗಳ ಸಂಕಲನವೂ ಬಿಡುಗಡೆಯಾಯಿತು. ‘ಬರವಣಿಗೆಯೇ ಸಿನಿಮಾ ಮಾಧ್ಯಮದತ್ತ ಆಕರ್ಷಿತವಾಗಲು ಕಾರಣವಾಯಿತು’ ಎಂದು ನೆನಪಿಸಿಕೊಳ್ಳುತ್ತಾರೆ ಅರವಿಂದ್‌. ತಾಂತ್ರಿಕ ತಿಳಿವಳಿಕೆಯನ್ನು ಕಲಿಯುವುದಕ್ಕಾಗಿ ಸಂಕಲನದ ಕೋರ್ಸ್‌ ಕೂಡ ಮಾಡಿಮುಗಿಸಿದರು.

ಅಕಾಡೆಮಿಕ್‌ ತಿಳಿವಳಿಕೆಯ ಜತೆಗೆ ಪ್ರಾಯೋಗಿಕ ಸಿದ್ಧತೆಯೂ ಬೇಕು ಎನ್ನುವ ಕಾರಣಕ್ಕೆ ಹಲವು ಬಿ. ಸುರೇಶ್‌ ಮತ್ತು ಗಿರೀಶ್‌ ಕಾಸರವಳ್ಳಿ ಅವರಂಥ ಖ್ಯಾತ ನಿರ್ದೇಶಕರ ಬಳಿ ಸಹಾಯಕ ನಿರ್ಕಿದೇಶಕರಾಗಿಯೂ ಕೆಲಸ ಮಾಡಿದರು. ಹಾಗೆಯೇ ಹಲವು ಟಿ.ಎನ್‌. ಸೀತಾರಾಮ್‌, ಅಶೋಕ್‌ ಕಶ್ಯಪ್‌, ಫಣಿರಾಮಚಂದ್ರ ಅವರ ಕಿರುತೆರೆ ಧಾರಾವಾಹಿಗಳಲ್ಲಿ ಅರವಿಂದ್‌ ನಟಿಸಿಯೂ ಇದ್ದಾರೆ. ‘ಅಶೋಕ್‌ ಕಶ್ಯಪ್‌ ಅವರ ನಿರ್ದೇಶನದ ನಂದಗೋಕುಲ ಧಾರಾವಾಹಿಯಲ್ಲಿ ನನಗೆ ಒಳ್ಳೆಯ ಅನುಭವ ದೊರಕಿತು’ ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಇಷ್ಟು ಅನುಭವ ಪಡೆದ ಅರವಿಂದ್ ಮೊದಲ ಬಾರಿಗೆ ಸಿನಿಮಾ ನಿರ್ದೇಶಕನ ಕ್ಯಾಪ್‌ ಧರಿಸಿದ್ದು 2008ರಲ್ಲಿ ‘ನಮ್‌ ಏರಿಯಾದಲ್ಲಿ ಒಂದಿನ’ ಸಿನಿಮಾದ ಮೂಲಕ. ಇದು ಅನೀಶ್‌ ತೇಜೇಶ್ಚರ್‌ ಮತ್ತು ರಕ್ಷಿತ್‌ ಶೆಟ್ಟಿ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಸಿನಿಮಾವೂ ಹೌದು. ನಂತರ 2011ರಲ್ಲಿ ‘ತುಘಲಕ್‌’ ಎನ್ನುವ ಸಿನಿಮಾ ನಿರ್ದೇಶಿಸಿದರು. ರಕ್ಷಿತ್‌ ಶೆಟ್ಟಿಯೇ ಈ ಚಿತ್ರದಲ್ಲಿ ನಾಯಕನಾಗಿದ್ದರು.

ಈ ಎರಡೂ ಚಿತ್ರಗಳಿಗೂ ಭಿನ್ನ ಪ್ರಯೋಗಗಳು ಎಂಬ ಪ್ರಶಂಸೆ ವ್ಯಕ್ತವಾದರೂ ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲಲಿಲ್ಲ. ದೊಡ್ಡ ಬಂಡವಾಳ ಬೇಡುವ ಸಿನಿಮಾದಂಥ ಮಾಧ್ಯಮದಲ್ಲಿ ಗೆಲುವು ಎಷ್ಟು ಅವಶ್ಯಕ ಎಂಬುದು ಈ ಎರಡೂ ಸಿನಿಮಾಗಳು ಅವರಿಗೆ ಮನವರಿಕೆ ಮಾಡಿವೆ. ‘ನನ್ನ ಮೊದಲಿನ ಎರಡೂ ಸಿನಿಮಾಗಳಲ್ಲಿ ನಾನು ಸ್ವಲ್ವ ಹೆಚ್ಚೇ ಪ್ರಯೋಗ ಮಾಡಿದ್ದೆ. ಅದು ಜನರಿಗೆ ತಲುಪಲಿಲ್ಲ. ನಾವು ಮಾಡುವ ಪ್ರಯೋಗಗಳು ಜನರಿಗೆ ಅರ್ಥವಾಗುವುದು, ಅವರಿಗೆ ಇಷ್ಟ ಆಗುವುದು ಎಷ್ಟು ಮುಖ್ಯ ಎನ್ನುವುದು ನನಗೀಗ ಗೊತ್ತಾಗಿದೆ. ಆ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡೇ ಹೊಸ ಸಿನಿಮಾವನ್ನು ಮಾಡಿದ್ದೇನೆ’ ಎನ್ನುತ್ತಾರೆ ಅವರು. ‘ಹುಲಿರಾಯ’ ಗಲ್ಲಾಪೆಟ್ಟಿಗೆಯಲ್ಲಿ ಸಾಕಷ್ಟು ಜೋರಾಗಿಯೇ ಗರ್ಜಿಸುತ್ತಾನೆ ಎಂಬ ವಿಶ್ವಾಸ ಅವರಿಗಿದೆ.

(ಹುಲಿರಾಯ ಚಿತ್ರದಲ್ಲಿ ಬಾಲು ನಾಗೇಂದ್ರ)

ಎರಡು ಸಿನಿಮಾಗಳನ್ನು ಮಾಡಿದ್ದರೂ ಮೂರನೇ ಸಿನಿಮಾ ಆರಂಭಿಸುವುದು ಅವರಿಗೆ ಸುಲಭದ ಕೆಲಸವೇನೂ ಆಗಿರಲಿಲ್ಲ. ಬಾಲು ನಾಗೇಂದ್ರ ಈ ಚಿತ್ರಕ್ಕೆ ನಾಯಕ ಎಂದು ಕಥೆ ಬರೆಯುವಾಗಲೇ ನಿರ್ಧಾರವಾಗಿತ್ತು. ಆದ್ದರಿಂದ ಮೊದಲಿಗೆ ಸ್ನೇಹಿತರೆಲ್ಲ ಸೇರಿಕೊಂಡು ತಮ್ಮ ಕಲ್ಪನೆಯನ್ನು ಬಿಂಬಿಸುವ ಒಂದು ಟೀಸರ್‌ ತಯಾರಿಸಿದರು. ಅದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿತು. ಅದನ್ನು ನೋಡಿದ ನಾಗೇಶ್‌ ಅವರು ಹಣ ಹೂಡಲು ಮುಂದೆ ಬಂದರು.

ಅವರೇ ಹೇಳಿಕೊಳ್ಳುವ ಹಾಗೆ ‘ಹುಲಿರಾಯ’ ಪಕ್ಕಾ ಕಗ್ಗಾಡಿನಲ್ಲಿನ ವಾಸವಾಗುವ ಹುಡುಗನೊಬ್ಬ ಮಹಾನಗರಕ್ಕೆ ಬಂದಾಗ ಏನಾಗುತ್ತದೆ ಎನ್ನುವುದನ್ನು ಹೇಳುವ ಕಥೆ. ಅರವಿಂದ್ ಮಹಾನಗರದಲ್ಲಿಯೇ ಹುಟ್ಟಿ ಬೆಳೆದವರು. ಕಾಡಿನ ಹುಡುಗನ ಬದುಕನ್ನು ಕಟ್ಟಿಕೊಡುವುದು ಹೇಗೆ ಸಾಧ್ಯವಾಯಿತು ಎಂದು ಕೇಳಿದರೆ ‘ನೋಡಿ ಕಂಡಿದ್ದು’ ಎಂದು ಉತ್ತರಿಸುತ್ತಾರೆ.

‘ತುಘಲಕ್‌ ಸಿನಿಮಾ ಆದ ಮೇಲೆ ಒಂದಿಷ್ಟು ಟೆಲಿವಿಷನ್‌ ಪ್ರಾಡಕ್ಟ್ಸ್‌ ಮಾಡುತ್ತಿದ್ದೆವು. ಅದಕ್ಕಾಗಿ ಆರೇಳು ತಿಂಗಳು ಕಾಡಿನಲ್ಲಿಯೇ ಕಳೆಯುವ ಅವಕಾಶ ಬಂದಿತ್ತು. ಅಲ್ಲಿನ ಓಡಾಟದಲ್ಲಿ ನಮ್ಮ ನಗರ ಜೀವನಕ್ಕೂ ಕಾಡಿನಲ್ಲಿ ಸ್ವಚ್ಛಂದವಾಗಿ ಬೆಳೆಯುವ ಹುಡುಗನ ಮನಸ್ಥಿತಿಗೂ ಎಷ್ಟು ಅಜಗಜಾಂತರ ವ್ಯತ್ಯಾಸ ಇರುತ್ತದೆಯಲ್ಲವೇ ಎಂದು ಅನಿಸುತ್ತಿತ್ತು. ನಮ್ಮ ಒತ್ತಡ, ಸಂಕಟ, ಹೊಡೆದಾಟಗಳು ಬೇರೆಯೇ ಆಗಿರುತ್ತವೆ. ಆದರೆ ಪ್ರತಿಯೊಬ್ಬ ಮನುಷ್ಯನ ಮನಸ್ಸೂ ಸ್ವಾತಂತ್ರ್ಯವನ್ನು ಹುಡುಕುತ್ತಿರುತ್ತದೆ. ಅದಕ್ಕೆ ಹಳ್ಳಿ – ಕಾಡು ಎಂದು ಭಿನ್ನತೆ ಇರುವುದಿಲ್ಲ. ಅಂಥ ಸ್ವಾತಂತ್ರ್ಯವನ್ನೇ ಹಂಬಲಿಸಿ ಹಳ್ಳಿಯ ಎಷ್ಟೋ ಜನ ಮಹಾನಗರಕ್ಕೆ ಬರುತ್ತಾರೆ. ಅಲ್ಲಿ ಬೆಟ್ಟ, ನದಿ ಕಾಡಿನ ಮಧ್ಯ ಇದ್ದವರಿಗೆ ಇಲ್ಲಿನ ಜಗತ್ತು ನೋಡಿ ದಿಗ್ಭ್ರಮೆ ಉಂಟಾಗುತ್ತದೆ. ಆದರೂ ಹೇಗೋ ರಾಜಿಯಾಗಿ ಬದುಕುತ್ತಾರೆ. ಅಂಥ ಹಲವು ಮನುಷ್ಯರು ನಗರದಲ್ಲಿ ಕಾಣುತ್ತಾರೆ. ನಮ್ಮ ಕಥೆಯ ನಾಯಕನೂ ಇಂಥದ್ದೇ ಒಂದು ಪಾತ್ರ. ನಮ್ಮ ಸಿನಿಮಾದಲ್ಲಿ ಒಂದು ಸಾಲಿದೆ. ಪ್ರತಿಯೊಬ್ಬ ಹುಡುಗನಲ್ಲಿಯೂ ಒಂದು ಹುಲಿ ಅಡಗಿದೆ ಎಂದು. ಅಂದರೆ ಹುಲಿ ಕಾಡಿನಲ್ಲಿ ಸ್ವಚ್ಛಂದವಾಗಿರಬೇಕು. ಅದು ಪ್ರಾಣಿಸಂಗ್ರಹಾಲಯದಲ್ಲಿ ಪಂಜರದಲ್ಲಿ ಬಂದಿಸಿಟ್ಟರೆ ಹೇಗಿರುತ್ತದೆ? ನಾವೇನೋ ಫೋಟೊ ತೆಗೆದುಕೊಂಡು ಖುಷಿಯಾಗಿ ಹೋಗುತ್ತೇವೆ. ಆದರೆ ಆ ಹುಲಿಯ ಮನಸ್ಥಿತಿ ಹೇಗಿರಬಹುದು ಎಂಬ ಆಲೋಚನೆಯ ಸುತ್ತಲೇ ಈ ಸಿನಿಮಾ ಹೆಣೆದಿದೆ’ ಎಂದು ಸುದೀರ್ಘವಾಗಿ ತಮ್ಮ ಸಿನಿಮಾದ ನೆಲೆಗಟ್ಟಿನ ಬಗ್ಗೆ ಅವರು ಮಾತನಾಡುತ್ತಾರೆ.

ತಾವು ಬೆಳೆದ ವಾತಾವರಣದಿಂದ ಪೂರ್ತಿ ಭಿನ್ನವಾಗಿರುವ ಪಾತ್ರವನ್ನು ಕಲ್ಪಿಸಿಕೊಳ್ಳಲು ಅರವಿಂದ್‌ಗೆ ಸಾಧ್ಯವಾಗಿದ್ದು ಗ್ರಹಿಕೆಯ ಮೂಲಕ. ಕಾಡಿನಲ್ಲಿರುವ ಜನರನ್ನು ಅಲ್ಲಿನ ತರುಣರನ್ನು ಅವರು ತುಂಬ ಸೂಕ್ಷ್ಮವಾಗಿ ಗಮನಿಸಿದ್ದಾರೆ. ನೆಟ್‌ವರ್ಕ್ ಇಲ್ಲದಿದ್ದರೂ ಮೊಬೈಲ್‌ ಇಟ್ಟುಕೊಂಡು ಹಾಡು ಕೇಳುವುದು, ಅಪರೂಪಕ್ಕೆ ಸಿನಿಮಾ ನೋಡಿಬಂದು ಹೀರೊಯಿಸಂ ಬಗ್ಗೆ ಬಗೆ ಬಗೆ ಕಲ್ಪನೆ ಬೆಳೆಸಿಕೊಂಡು ಬದುಕುವುದು ಹೀಗೆ ಅವರು ಕಂಡ ವಿವರಗಳೆಲ್ಲವೂ ‘ಹುಲಿರಾಯ’ನಿಗೆ ರಕ್ತ, ಮಾಂಸಗಳನ್ನು ತುಂಬಿವೆ.

‘ನಗರದಲ್ಲಿ ಹುಟ್ಟಿ ಬೆಳೆದ ನಾನು ಕಾಡಿನಲ್ಲಿ ಪೂರ್ತಿ ಅಪರಿಚಿತ. ಅದೇ ಕಾಡಿನಿಂದ ಬಂದ ತರುಣ ನಗರದಲ್ಲಿ ಪೂರ್ತಿ ಅನಾಮಿಕ. ಹೀಗೆ ಈ ಸಿನಿಮಾ ಅಂಥದ್ದೊಂದು ಪಾತ್ರ ಮತ್ತು ನಿರ್ದೇಶಕನ ನಡುವೆ ಘಟಿಸುವ ಕಥೆ’ ಎಂದೂ ಅವರು ಹೇಳುತ್ತಾರೆ.

ಚಿತ್ರ ಪೂರ್ತಿಯಾದ ಮೇಲೆ ಆಪ್ತರ ಬಳಗಕ್ಕೆ ಸಿನಿಮಾ ತೋರಿಸುವಾಗ ಅರವಿಂದ್, ರಕ್ಷಿತ್‌ ಶೆಟ್ಟಿ ಅವರನ್ನೂ ಕರೆದಿದ್ದರು. ರಕ್ಷಿತ್‌ಗೆ ಈ ಸಿನಿಮಾ ತುಂಬ ಇಷ್ಟವಾಗಿ ‘ಪುಷ್ಕರ್‌ ಮಲ್ಲಿಕಾರ್ಜುನಯ್ಯ ಅವರಿಗೆ ತೋರಿಸೋಣ. ಅವರಿಗೂ ಇಷ್ಟವಾದರೆ ಬಿಡುಗಡೆಯನ್ನು ನಾವೇ ಮಾಡುತ್ತೇವೆ’ ಎಂದು ಆಶ್ವಾಸನೆಯನ್ನೂ ಕೊಟ್ಟರು. ಅಂದುಕೊಂಡಂತೆ ಪುಷ್ಕರ್‌ ಅವರಿಗೂ ಸಿನಿಮಾ ಇಷ್ಟವಾಗಿ ಈಗ ವಿತರಣೆಯ ಜವಾಬ್ದರಿಯನ್ನು ಅವರೇ ವಹಿಸಿಕೊಂಡಿದ್ದಾರೆ.

ಪ್ರಯೋಗದ ದೃಷ್ಟಿಯಿಂದಲೂ ಗಮನಸೆಳೆಯುವಂತಿದ್ದು, ಸ್ಟಾರ್‌ ನಟರಿಗೂ ಸಿನಿಮಾ ಮಾಡಬೇಕು ಎಂಬುದು ಅರವಿಂದ್‌ ಅವರ ಕನಸು. ಅದಕ್ಕಾಗಿ ಅವರು ಹಲವು ಸ್ಕ್ರಿಪ್ಟ್‌ಗಳನ್ನೂ ಅವರು ಬರೆದಿಟ್ಟುಕೊಂಡಿದ್ದಾರೆ. ‘ಹುಲಿರಾಯ’ ಬಿಡುಗಡೆಯಾದ ಮೇಲೆ ಆ ಅವಕಾಶಗಳು ಸಿಗುತ್ತವೆ ಎಂಬ ವಿಶ್ವಾಸವೂ ಅವರಿಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT