ಗದಗ: ಮೋಡಬಿತ್ತನೆ ಫಲಿತಾಂಶವೋ, ನೈಸರ್ಗಿಕ ಕಾರಣವೋ, ಒಂದು ವಾರ ದಿಂದ ಜಿಲ್ಲೆಯಾದ್ಯಂತ ಉತ್ತಮ ಮಳೆ ಆಗುತ್ತಿದ್ದು, ಹಿಂಗಾರು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿರುವ ರೈತರಲ್ಲಿ ಮತ್ತೆ ಭರವಸೆ ಮೂಡಿದೆ.
ಮಳೆ ಕೊರತೆಯಿಂದ ಈ ಬಾರಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಆಗಿದ್ದ 1.51 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಶೇ 75ರಷ್ಟು ಬೆಳೆ ಹಾನಿಯಾಗಿದೆ. ರೋಣ, ಶಿರಹಟ್ಟಿ, ಮುಂಡರಗಿ, ಲಕ್ಷ್ಮೇ ಶ್ವರ ಸೇರಿ ಹಲವೆಡೆ ತೇವಾಂಶದ ಕೊರತೆ ಯಿಂದ ಬೆಳೆ ಮೊಳಕೆ ಹಂತದಲ್ಲೇ ಬಾಡಿ ದ್ದವು. ಕಂಟಿ ಶೇಂಗಾ, ಹೆಸರು ಕಾಳು ಬಿತ್ತಿದ್ದ ರೈತರು ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ಮೂಲಕ ಜಮೀನಿಗೆ ನೀರು ಪೂರೈಸಿದ್ದರು. ಕೆಲವೆಡೆ ನೀರಿಲ್ಲದೆ ಒಣ ಗುತ್ತಿರುವ ಬೆಳೆಯನ್ನು ನೋಡಿ ಬೇಸೆತ್ತ ರೈತರು ಬಿತ್ತಿದ್ದ ಹೊಲವನ್ನೇ ಹರಗಿದ್ದರು.
ಇದೀಗ ಮತ್ತೆ ಮಳೆ ಆರಂಭವಾ ಗಿದ್ದು, ಹಿಂಗಾರು ಕೈಹಿಡಿಯಬಹುದು ಎಂಬ ನಿರೀಕ್ಷೆ ಗರಿಗೆದರಿವೆ. ಜಿಲ್ಲೆಯಲ್ಲಿ ಆಗಸ್ಟ್ ಕೊನೆಯ ವಾರ ಮತ್ತು ಸೆಪ್ಟೆಂಬರ್ ಮೊದಲ ವಾರದಲ್ಲೇ ನಾಲ್ಕೈದು ಉತ್ತಮ ಮಳೆ ಲಭಿಸಿದೆ. ಈಗಾಗಲೇ ಕೆಲವೆಡೆ ಈರುಳ್ಳಿ, ಮೆಣಸಿನ ಕಾಯಿ ಬಿತ್ತನೆ ಆಗಿದೆ. ರೋಣ, ನರ ಗುಂದ, ಗದಗ ಗ್ರಾಮಾಂತರ ಪ್ರದೇಶ ಗಳಲ್ಲಿ ರೈತರು ಸೂರ್ಯಕಾಂತಿ ಬಿತ್ತನೆ ಪ್ರಾರಂಭಿಸಿದ್ದಾರೆ. ‘ಹಿಂಗಾರು ಹಂಗಾ ಮಿಗೆ ಜಿಲ್ಲೆಯಲ್ಲಿ ಬಿತ್ತನೆ ಬೀಜ, ಗೊಬ್ಬ ರದ ಕೊರತೆ ಇಲ್ಲ.
ಮಳೆಯಾಗುತ್ತಿರು ವುದರಿಂದ ಹಿಂಗಾರಿನ ಭರವಸೆ ಹೆಚ್ಚಿದೆ. ಮುಂಗಾರು ಹಂಗಾಮಿನಲ್ಲಿ ಆಗಿರುವ ನಷ್ಟವನ್ನು ರೈತರು ಹಿಂಗಾರಿನ ಬೆಳೆಯಲ್ಲಿ ಸರಿದೂಗಿಸಿಕೊಳ್ಳುತ್ತಾರೆ’ ಎಂದು ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಿ.ಬಿ ಬಾಲರೆಡ್ಡಿ ಹೇಳಿದರು.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಒಟ್ಟು 2.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹಾಕಿ ಕೊಂಡಿತ್ತು. ಆದರೆ, ಮಳೆ ತಡವಾಗಿ ಆರಂಭವಾದ್ದರಿಂದ ಹೆಸರು, ಶೇಂಗಾ, ತೊಗರಿ, ಹುರಳಿ ಸೇರಿ ದ್ವಿದಳ ಧಾನ್ಯ ಗಳು ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆ ಆಗಿರಲಿಲ್ಲ. ಒಟ್ಟು 78 ಸಾವಿರ ಹೆಕ್ಟೇರ್ ಬಿತ್ತನೆ ಗುರಿಯಲ್ಲಿ 73 ಸಾವಿರ ಹೆಕ್ಟೇರ್ ನಲ್ಲಿ ಹೆಸರು ಬಿತ್ತನೆಯಾಗಿದೆ. 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಗುರಿ ನಿಗದಿಯಾಗಿತ್ತು.
ಆದರೆ, ಬಿತ್ತನೆ ಆಗಿರುವುದು ಕೇವಲ 1841ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ. ಹುರಳಿ ಮತ್ತು ಅಲಸಂದಿ ಕಾಳುಗಳ ಬಿತ್ತನೆ ಅತ್ಯಲ್ಪ ಪ್ರಮಾಣದಲ್ಲಿ ಅಂದರೆ ಶೇ 7.6 ಮತ್ತು ಶೇ 9.8ರಷ್ಟು ಮಾತ್ರವೇ ಆಗಿದೆ. ಒಟ್ಟು 50 ಸಾವಿರ ಹೆಕ್ಟೇರ್ ಮೆಕ್ಕೆಜೋಳ ಬಿತ್ತನೆ ಗುರಿಯಲ್ಲಿ 26,785 ಹೆಕ್ಟೇರ್ ಪ್ರದೇಶ ದಲ್ಲಿ ಮತ್ತು 1,410 ಹೆಕ್ಟೇರ್ ಪ್ರದೇಶ ದಲ್ಲಿ ಸಾಮಾನ್ಯ ಜೋಳ ಬಿತ್ತನೆಯಾಗಿದೆ.
‘ತೇವಾಂಶದ ಕೊರತೆಯಿಂದ ಬಿತ್ತನೆ ಆಗಿರುವ ಪ್ರದೇಶದಲ್ಲಿ ಶೇ 75ರಷ್ಟು ಬೆಳೆ ಹಾನಿ ಆಗಿರಬಹುದು ಎಂದು ಅಂದಾಜು ಮಾಡಲಾಗಿದೆ. ಕೆಲವೆಡೆ ಬಿತ್ತನೆ ಹೆಚ್ಚಾಗಿ ದ್ದರೂ, ಇಳುವರಿ ಗಣನೀಯವಾಗಿ ಕುಸಿದಿದೆ. ಕಾಳುಗಳ ಗುಣಮಟ್ಟವೂ ತಗ್ಗಿದೆ. ಮುಂಗಾರು ರೈತರಿಗೆ ಸಂಪೂರ್ಣವಾಗಿ ಕೈಕೊಟ್ಟಿದೆ’ ಎನ್ನುತ್ತಾರೆ ಬಾಲರೆಡ್ಡಿ.
ಜಿಲ್ಲೆಯಲ್ಲಿ ಒಟ್ಟು 52,500 ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳುಗಳನ್ನು ಬೆಳೆಯ ಲಾಗುತ್ತಿದ್ದು, ಇದರಲ್ಲಿ ಈಗಾಗಲೇ 2,327 ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯ ಕಾಂತಿ ಬಿತ್ತನೆಯಾಗಿದೆ. ಪ್ರಮುಖ ವಾಣಿಜ್ಯ ಬೆಳೆಯಾದ ಹತ್ತಿ 40 ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಪೈಕಿ ಕೇವಲ 19 ಸಾವಿರ ಹೆಕ್ಟೇರ್ನಲ್ಲಿ ಬಿತ್ತನೆ ಆಗಿದೆ. ಹತ್ತಿ ಒಂದು ಬೆಳೆಯಲ್ಲೇ ಶೇ 75ರಿಂದ 80 ರಷ್ಟು ಹಾನಿಯಾಗಿದೆ ಎಂದು ಕೃಷಿ ಇಲಾಖೆ ಅಂದಾಜು ಮಾಡಿದೆ.
ಹಿಂಗಾರು: 2.63 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ
ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ ಒಟ್ಟು 2.63 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ನಿಗದಿಪಡಿಸಲಾಗಿದೆ. ಒಟ್ಟು 67 ಸಾವಿರ ಹೆಕ್ಟೇರ್ನಲ್ಲಿ ಜೋಳ, 1.20 ಲಕ್ಷ ಹೆಕ್ಟೇರ್ನಲ್ಲಿ ಕಡಲೆ, 27 ಸಾವಿರ ಹೆಕ್ಟೇರ್ನಲ್ಲಿ ಹತ್ತಿ, ಹಾಗೂ 26 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ ಬಿತ್ತನೆಯಾಗುವ ನಿರೀಕ್ಷೆ ಇದೆ. ಹಿಂಗಾರಿನ ಪ್ರಮುಖ ಬೆಳೆ ಕಡಲೆ. ಜಿಲ್ಲೆಯ ರೈತರು ಹೆಸರು ಬೆಳೆಯಲ್ಲಿ ಆಗಿರುವ ನಷ್ಟವನ್ನು ಕಡಲೆಯಲ್ಲ ಸರಿದೂಗಿಸಿಕೊಳ್ಳುವ ಯೋಜನೆ ಹೊಂದಿದ್ದಾರೆ.
ಪ್ರಸಕ್ತ ಮುಂಗಾರಿನಲ್ಲಿ ಆಗಸ್ಟ್ ಅಂತ್ಯದವರೆಗೆ ಜಿಲ್ಲೆಯ ವಾಡಿಕೆ ಮಳೆಗೆ ಹೋಲಿಸಿದರೆ ಶೇ 32.9ರಷ್ಟು ಮಳೆ ಕೊರತೆ ಆಗಿದೆ. ಆಗಸ್ಟ್ ತಿಂಗಳ ಜಿಲ್ಲೆಯ ವಾಡಿಕೆ ಮಳೆ ಪ್ರಮಾಣ 75.4 ಮೀ.ಮೀ. ಇದರ ಎದುರು 75.07 ಮಿ.ಮೀ ಮಳೆ ಸುರಿದಿದೆ. ಸೆಪ್ಟೆಂಬರ್ ತಿಂಗಳ ವಾಡಿಕೆ ಮಳೆ ಪ್ರಮಾಣ 137.4ಮಿ.ಮೀ. ಸೆ.6ರವರೆಗೆ ಸರಾಸರಿ 0.6 ಮಿ.ಮೀ ಮಳೆ ಸುರಿದಿದೆ.
* *
ಮಳೆಯಾಗುತ್ತಿರುವುದು ಹಿಂಗಾರಿನ ಭರವಸೆ ಹೆಚ್ಚಿಸಿದೆ. ಸೂರ್ಯಕಾಂತಿ, ಹಾಗೂ ಹತ್ತಿ ಬಿತ್ತನೆಗೆ ಉತ್ತಮ ವಾತಾವರಣವಿದೆ. ಬೀಜ, ಗೊಬ್ಬರದ ಕೊರತೆ ಇಲ್ಲ
ಸಿ.ಬಿ. ಬಾಲರೆಡ್ಡಿ
ಕೃಷಿ ಇಲಾಖೆ ಜಂಟಿ ನಿರ್ದೇಶಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.