ಹುಬ್ಬಳ್ಳಿ: ಮರಾಠ ಸಮಾಜವನ್ನು ಪ್ರವರ್ಗ ‘3ಬಿ’ಯಿಂದ ‘2ಎ’ಗೆ ಸೇರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮರಾಠ ಕ್ರಾಂತಿ (ಮೌನ) ಮೋರ್ಚಾ ಸದಸ್ಯರು ಗುರುವಾರ ಹುಬ್ಬಳ್ಳಿಯ ಕೋರ್ಟ್ ವೃತ್ತದಿಂದ ಮಿನಿ ವಿಧಾನಸೌಧದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಈ ವೇಳೆ ಮಾತನಾಡಿದ ಮೋರ್ಚಾದ ಅಧ್ಯಕ್ಷ ಸುನೀಲ ದಳವಿ, ‘ರಾಜ್ಯದಾದ್ಯಂತ ಸುಮಾರು 40 ಲಕ್ಷ ಮರಾಠ ಸಮುದಾಯದವರಿದ್ದು, ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಹಾಗಾಗಿ, ರಾಜ್ಯ ಹಿಂದುಳಿದ ಆಯೋಗದ ಶಿಫಾರಸಿನಂತೆ ಸರ್ಕಾರ ನಮ್ಮನ್ನು ಪ್ರವರ್ಗ ‘3ಬಿ’ಯಿಂದ ‘2ಎ’ಗೆ ಸೇರಿಸಬೇಕು’ ಎಂದರು.
‘ಸಮುದಾಯದ ಅಭಿವೃದ್ಧಿಗಾಗಿ ಛತ್ರಪತಿ ಶಾಹು ಮಹಾರಾಜ ಮರಾಠ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು. ಶಿವಾಜಿ ಜಯಂತಿ ದಿನವಾದ ಫೆಬ್ರುವರಿ 19ರಂದು ಸಾರ್ವತ್ರಿಕ ರಜೆ ಘೋಷಿಸಬೇಕು. ಜಿಲ್ಲಾ ಹಾಗೂ ತಾಲ್ಲೂಕುಗಳಲ್ಲಿ ವಿದ್ಯಾರ್ಥಿನಿಲಯಗಳನ್ನು ತೆರೆಯಬೇಕು. ಅಲ್ಲದೆ, ಶಾಹು ಮಹಾರಾಜರ ಅಧ್ಯಯನ ಪೀಠ ಆರಂಭಿಸಬೇಕು’ ಎಂದು ಆಗ್ರಹಿಸಿದರು.
ಬಳಿಕ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಮೋರ್ಚಾದ ಪದಾಧಿಕಾರಿಗಳಾದ ಮಹೇಶ ದಾಬಡೆ, ನಾರಾಯಣ ವೈದ್ಯ ಹಾಗೂ ಅಶೋಕ ಕಾಶಿನವರ ಇದ್ದರು.