ಶಿರಾ: ತಾಲ್ಲೂಕಿನ ಪ್ರಮುಖ ಕೆರೆಗಳಿಗೆ ಹೇಮಾವತಿ ನೀರು ಹರಿಸುವಂತೆ ಒತ್ತಾಯಿಸಿ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಸಂಘದ ಪ್ರತಿನಿಧಿಗಳು ಗುರುವಾರ ಕಾಲ್ನಡಿಗೆ ಜಾಥಾ ನಡೆಸಿ ತಹಶೀಲ್ದಾರ್ ಆರ್.ಗಂಗೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಸಂಘದ ಶಿರಾ ಶಾಖೆ ಪದಾಧಿಕಾರಿಗಳು ಮತ್ತು ಪ್ರತಿನಿಧಿಗಳು ನಗರದ ದರ್ಗಾ ವೃತ್ತದಿಂದ ಜಾಥಾ ಪ್ರಾರಂಭಿಸಿ ಬಸ್ನಿಲ್ದಾಣದ ಬಳಿ ಹಾಗೂ ಪ್ರವಾಸಿ ಮಂದಿರದ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು.
ಸಂಘದ ಶಿರಾ ಶಾಖೆ ಅಧ್ಯಕ್ಷ ಎ.ಆರ್.ಶಾಂತರಾಜು ಮಾತನಾಡಿ, ‘ಕಳೆದ ಎರಡು ವರ್ಷದಿಂದ ತಾಲ್ಲೂಕಿಗೆ ಒಂದು ಹನಿ ಹೇಮಾವತಿ ನೀರು ಸಹ ಹರಿದು ಬಂದಿಲ್ಲ. ಈಗ ಜಿಲ್ಲೆಯ ಇತರೇ ತಾಲ್ಲೂಕಿನ ಕೆರೆಗಳಿಗೆ ಹೇಮಾವತಿ ನೀರು ಹರಿಯುತ್ತಿದ್ದರು ಸಹ ತಾಲ್ಲೂಕಿಗೆ ಇನ್ನೂ ಸಹ ಹೇಮಾವತಿ ನೀರು ಬಂದಿಲ್ಲ.
ಶಿರಾ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ಸಹ ಪರದಾಡುವಂತಾಗಿದೆ. ತಕ್ಷಣ ತಾಲ್ಲೂಕಿನ ಪ್ರಮುಖ ಕೆರೆಗಳಿಗೆ ನೀರು ಹರಿಸುವಂತೆ’ ಒತ್ತಾಯಿಸಿದರು.
ಸಂಘದ ಶಿರಾ ಶಾಖೆಯ ಉಪಾಧ್ಯಕ್ಷ ಜೆ.ಮುಸ್ತಾಕ್, ಕಾರ್ಯದರ್ಶಿ ಎಚ್.ಎನ್.ಜಗದೀಶ್, ಬಿ.ಪುಟ್ಟಸ್ವಾಮಿ, ಎಸ್.ರಾಜಣ್ಣ, ಜಿ.ಶಿವರಾಜಯ್ಯ, ಎಚ್.ಟಿ.ಶ್ರೀಧರ್, ಸಕ್ಕರೆ ನಾಗರಾಜು, ಬಾಲಾಜಿ ನಾಯ್ಕ, ಎಚ್.ಮೋಹನ್ ಕುಮಾರ್, ಜಯಮ್ಮ, ಪುಷ್ಪಲತಾ, ಸವಿತಾ ಇದ್ದರು.