ಬೆಂಗಳೂರು: ದಕ್ಷಿಣ ಭಾರತದ ಹಿರಿಯ ನಟ, ನಿರ್ಮಾಪಕ ಆರ್.ಎನ್. ಸುದರ್ಶನ್(78) ಶುಕ್ರವಾರ ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಸುದರ್ಶನ್ ಅವರನ್ನು ಬನ್ನೇರುಘಟ್ಟದ ಸಾಗರ್ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕ್ಸಿತೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
‘ಸುದರ್ಶನ್ ಅವರು ಈಚೆಗೆ ಮನೆಯ ಸ್ನಾನಗೃಹದಲ್ಲಿ ಕಾಲು ಜಾರಿ ಬಿದಿದ್ದರು. ಇದ್ದರಿಂದ ಕಾಲಿನ ಮೂಳೆ ಮುರಿದಿತ್ತು. ಕೂಡಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು’ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಸುದರ್ಶನ್ ಅವರು ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಲಂ ಸೇರಿದಂತೆ ಹಲವು ಭಾಷಾ ಚಲನಚಿತ್ರಗಳು, ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ಜತೆಗೆ, ಕನ್ನಡದ ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದರು.
ನಟ ಉಪೇಂದ್ರ ಅಭಿನಯದ ‘ಸೂಪರ್’ ಚಿತ್ರದಲ್ಲಿ ಉಪೇಂದ್ರ ಅವರ ತಂದೆಯ ಪಾತ್ರದಲ್ಲಿ ಸುದರ್ಶನ್ ಅಭಿನಯಿಸಿದ್ದರು. ಬಳಿಕ 2012ರಲ್ಲಿ ತೆರೆಕಂಡ ‘ಚಾರುಲತಾ’ ಚಿತ್ರದಲ್ಲಿ ಸುದರ್ಶನ್ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.