ಶಿವಮೊಗ್ಗ: ಮಲೆನಾಡು ಗಿಡಮೂಲಿಕೆಗಳ ತವರೂರು. ಇಲ್ಲಿ ಸಿಗುವ ನೀರು, ಗಾಳಿ ಎಲ್ಲವೂ ನೈಸರ್ಗಿಕವಾದುದು ಎಂದು ಆನಂದಪುರ ಮುರುಘಾಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಬೆಕ್ಕಿನಕಲ್ಮಠದಲ್ಲಿ ಬುಧವಾರ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಹಮ್ಮಿಕೊಂಡಿದ್ದ ಡೆಂಗಿ, ಚಿಕೂನ್ಗುನ್ಯಾ ಹಾಗೂ ಇತರೆ ಜ್ವರಗಳಿಗೆ 52 ಗಿಡಮೂಲಿಕೆಗಳಿಂದ ತಯಾರಿಸಿದ ಕಷಾಯ ವಿತರಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಬೇರು-ನಾರಿನಿಂದ ಕಾಯಿಲೆ ಗುಣಪಡಿಸುವ ಮೂಲಕ ಪಾರಂಪರಿಕ ವೈದ್ಯರು ತಮ್ಮ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಯಾವುದೇ ಹಣದ ವೆಚ್ಚವಿಲ್ಲದೆ, ಅಡುಗೆ ಮನೆಯಲ್ಲಿರುವ ವಸ್ತುಗಳಲ್ಲಿ ಔಷಧೀಯ ಗುಣವಿರುತ್ತದೆ. ಅದನ್ನು ತಿಳಿದು ಸದುಪಯೋಗ ಪಡೆಯಬೇಕು ಎಂದು ಸಲಹೆ ನೀಡಿದರು.
ಬೆಂಗಳೂರಿನ ಮಕ್ಕಳ ಹೃದಯ ರೋಗ ತಜ್ಞೆ ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿ ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ವೈದ್ಯ ಎಲ್.ರಾಜು ಪಂಡಿತ್, ವೈದ್ಯ ವಿಷ್ಣಪ್ಪ ಕೋಟೆಹಾಳ್, ಪರಮೇಶ್ವರಪ್ಪ, ಮಹಾಮುನಿ ಉಪಸ್ಥಿತರಿದ್ದರು.