ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಕಿತ್ತೇ? ಇದು...

Last Updated 8 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

–ಸಹನಾ ಹೆಗಡೆ

*

ವಸತಿ ಸಮುಚ್ಚಯದ ಆವರಣದಲ್ಲಿ ವಾಕಿಂಗ್‌ ಹೋಗುವ ನಮಗೆ ಬೆಳಬೆಳಿಗ್ಗೆ ನಿತ್ಯವೂ ಕಾಣಬರುವ ಹಲವಾರು ಮುಖಗಳಲ್ಲಿ, ತನ್ನ ಕೆಂದುಟಿ, ಮುದ್ದು ಮಾತುಗಳಿಂದ ಮನಸೆಳೆಯುವ ಆ ಸುಂದರವಾದ ಮಗುವೂ ಒಂದು. ತೆಳ್ಳಬೆಳ್ಳಗಿನ, ಉದ್ದ ಸದೃಢ ಮೈಕಟ್ಟಿನ ಉತ್ತರ ಭಾರತೀಯ ತಂದೆ-ತಾಯಿ, ಮೊದಲ ಹಾಗೂ ಏಕೈಕ ಮಗುವನ್ನು ಪ್ರಾಮ್‌ನಲ್ಲಿ ನೂಕಿಕೊಂಡು ಓಡುತ್ತ ನಡೆಯುತ್ತ ಲವಲವಿಕೆಯಿಂದ ಬೆಳಗಿಗೆ ಸ್ಫೂರ್ತಿ ತುಂಬುತ್ತಿದ್ದರು. ಕೆಲವೇ ದಿನ, ಮಗು ಮೂರುಗಾಲಿಯ ಸೈಕಲ್‌ನಲ್ಲಿ ಬರುವಷ್ಟಾಯಿತು. ಬೆಚ್ಚಗೆ ಹಾಸಿಗೆಯಲ್ಲಿ ಹೊರಳಾಡಿಕೊಂಡಿರಬೇಕಾದ ಮಗುವನ್ನು ಎಚ್ಚರಗೊಳಿಸಿ ಯಾಕಾದರೂ ತಳ್ಳಿಕೊಂಡು ಬರುತ್ತಾರಪ್ಪಾ ಎಂದು ಮನಸ್ಸಿಗೆ ಕಸಿವಿಸಿಯಾಗುತ್ತಲೂ ಇತ್ತು. ಕೇಳಿಬಿಡೋಣ ಅಂದರೆ ಪರಿಚಯಸ್ಥರಾಗಿರಲಿಲ್ಲ. ಅಷ್ಟು ಸಣ್ಣ ಮಗು, ಅದಾಗಲೇ ಬೈಸಿಕಲ್‌ ಬಂದಾಯಿತಲ್ಲ ಅನ್ನುವಷ್ಟರಲ್ಲಿ ಅವರಮ್ಮ ಅದರದೊಂದು ಬ್ಯಾಲೆನ್ಸಿಂಗ್‌ ವ್ಹೀಲ್‌ ತೆಗೆದೂ ಆಯಿತು. ಮೊನ್ನೆ ನೋಡಿದರೆ, ಎರಡೂ ಇಲ್ಲ. ಸಮತೋಲನ ಸಾಧಿಸಿಕೊಂಡು ಸೈಕಲ್‌ ತುಳಿಯುವಂತೆ ಮಗುವನ್ನು ಉತ್ತೇಜಿಸುತ್ತಿದ್ದ ಹಿಂದಿ ಭಾಷಿಕ ಪೋಷಕರು ಉಪಯೋಗಿಸುತ್ತಿದ್ದುದು ಬಹುತೇಕ ಇಂಗ್ಲಿಷ್‌ ಶಬ್ದಗಳನ್ನೇ. ಸೈಕಲ್‌ ತುಳಿಯಲು ಒದ್ದಾಡುತ್ತಿದ್ದ ಮಗುವಿಗೆ ಇಂದು ಅಮ್ಮನ ಪಾಠ. “ಜಾರ್ಜ್‌ ವಾಷಿಂಗ್‌ಟನ್‌, ಥಿಯೋಡೋರ್‌ ರೂಸ್‌ವೆಲ್ಟ್‌, ನೆಕ್ಸ್ಟ್‌…ಗುಡ್‌... ಅಚ್ಛಾ ಬೇಟಾ ಝೋರ್‌ಸೆ… ಇಸ್‌ ತರಫ್‌,…. ಜಾನ್‌ ಎಫ್‌ ಕೆನಡಿ….” ನಾನು ಮೂರ್ಛೆ ತಪ್ಪಿ ಬೀಳುವುದೊಂದೇ ಬಾಕಿ. ಆಧುನಿಕ, ಸಮಾನ ಮನಸ್ಕ ಪುರುಷನೊಬ್ಬನ ಕಲ್ಪನೆಯೇ ಸಾಕಾರಗೊಂಡತಿದ್ದ, ಮೈಗೆ ಮೈ ತಾಕಿಸಿ, ಸೊಂಟ ಭುಜ ಬಳಸಿ ನಡೆಯುತ್ತಿದ್ದ ಗಂಡಮಹಾಶಯ ಇಂದೇಕೋ ತುಸು ದೂರದಲ್ಲಿ ಅನ್ಯಮನಸ್ಕನಾಗಿ ಹೆಜ್ಜೆ ಹಾಕುತ್ತಿದ್ದ, ತನ್ನ ಶಾಲಾದಿನಗಳ, ಶಿಕ್ಷಕರ, ತಂದೆ-ತಾಯಿಯರ ನೆನಪಾಯಿತೋ ಏನೋ… ಬೇಚಾರಾ?

ಬಾಲವಿಹಾರಕ್ಕೆ ಕೂಡ ಹೋಗದೆ ಅಮ್ಮನ ಮಡಿಲಲ್ಲಿ ಸೊಂಪಾಗಿ ಆಡಿಕೊಂಡಿರಬೇಕಾದ ಮಗುವಿಗೆ ಅಮೆರಿಕದ ಮಾಜಿ ಅಧ್ಯಕ್ಷರ ಹೆಸರುಗಳನ್ನು ಉರುಹೊಡೆಸುವ ತರಾತುರಿಯಾದರೂ ಏನಿತ್ತು? ಎಷ್ಟು ಯೋಚಿಸಿದರೂ ಹೊಳೆಯಲಿಲ್ಲ. ಕಿಂಡರ್‌ಗಾರ್ಟನ್‌ಗೆ ಪ್ರವೇಶ ಪಡೆಯಲು ಮಗುವಿನ, ಪೋಷಕರ ಸಂದರ್ಶನ ಮಾಡುತ್ತಾರೆ ಅಂತ ಕೇಳಿದ್ದೆ. ಈಗ ಅದರಲ್ಲಿ ಅಮೆರಿಕದ ಚರಿತ್ರೆಯನ್ನೂ ಸೇರಿಸಲಾಗಿದೆಯೇ? – ಎಂಬ ಅನುಮಾನಕ್ಕೆ ಬಿದ್ದೆ.

ಇತಿಹಾಸದ ಅರಿವು ಎಷ್ಟು ಅಗತ್ಯವೋ, ಸಮಂಜಸವೋ ಅದರ ಅಮುಖ್ಯ, ಅನಗತ್ಯ ವಿವರಗಳನ್ನು - ಇಸವಿ, ತಾರೀಖು - ಇತ್ಯಾದಿ ಅನವಶ್ಯಕವಾಗಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ಅನಿವಾರ್ಯತೆಯೂ ಅಷ್ಟೇ ಅಮಾನವೀಯ ಎಂದು ನಂಬಿದವಳು ನಾನು. ನನ್ನಿಬ್ಬರು ಮಕ್ಕಳೂ ವಿಜ್ಞಾನದ ಬಗ್ಗೆ ಒಲವಿದ್ದವರಾಗಿ, ಇತಿಹಾಸವೆಂಬ ಒಂದು ವಿಷಯವನ್ನು ಬೇರೆ ನಿರ್ವಾಹವಿಲ್ಲದೇ ಓದಿದ್ದನ್ನು, ಓದುವಾಗಲೂ ಓದಿದ ಮೇಲೂ ಅದನ್ನು ದ್ವೇಷಿಸಿದ್ದನ್ನೂ ಕಣ್ಣಾರೆ ಕಂಡವಳು. ಅವರಿಗೆ ಇತಿಹಾಸವೆನ್ನುವುದು ಒಂದು ವಿಷಯವಾಗಿ ಕಾಡುತ್ತಿದ್ದುದಕ್ಕಿಂತಲೂ ಹೆಚ್ಚಾಗಿ ಅದರಲ್ಲಿನ ಆಗುಹೋಗುಗಳನ್ನು ಕಾಲಾನುಕ್ರಮವಾಗಿ ನೆನಪಿನಲ್ಲಿಟ್ಟುಕೊಂಡು ಪರೀಕ್ಷೆಯಲ್ಲಿ ಮರುಒಪ್ಪಿಸುವ ಕೆಲಸ ತ್ರಾಸದಾಯಕವಾಗುತ್ತಿತ್ತು. ಉರುಹೊಡೆಯುವ ಪರಿಪಾಠವನ್ನು ಒಂದೆಡೆ ವಿರೋಧಿಸುತ್ತಿದ್ದ ನಮಗೆ ಇಲ್ಲಿ ಅದನ್ನೇ ಮಾಡುವಂತೆ ಉಪದೇಶಿಸುವ ಅನಿವಾರ್ಯತೆ, ಅಸಹಾಯಕತೆ. ಜಾರಿಯಲ್ಲಿದ್ದ ಶಿಕ್ಷಣ ವ್ಯವಸ್ಥೆ, ಅದರಲ್ಲಿನ ನೀತಿನಿಯಮಗಳಂತೆ ಮಾಡದೇ ವಿಧಿಯಿರಲಿಲ್ಲ. ಅಂಥದ್ದರಲ್ಲಿ ಆ ಪುಟ್ಟ ಮಗುವಿಗೆ ಕರ್ನಾಟಕದ ಅಥವಾ ಭಾರತದ ಇತಿಹಾಸವೂ ಅಲ್ಲ, ಬದಲಿಗೆ ಅಮೆರಿಕದ ಇತಿಹಾಸದ ತುಣುಕನ್ನು ತುರುಕುತ್ತಿರುವ ಪೋಷಕರ ಉತ್ಸಾಹಕ್ಕೆ ಕಾರಣಗಳು ಸುಲಭವಾಗಿ ದಕ್ಕುವಂತಿರಲಿಲ್ಲ.

ಇಂದಿನ ಶೈಕ್ಷಣಿಕ ವ್ಯವಸ್ಥೆಯು, ವಸಾಹತುಶಾಹಿ ವ್ಯವಸ್ಥೆಯು ತನ್ನ ಆಂತರಿಕ ಅಗತ್ಯಗಳಲ್ಲೊಂದಾಗಿದ್ದ ನೌಕರಶಾಹಿಗಳ ವರ್ಗವನ್ನು ಹುಟ್ಟು ಹಾಕಲು ಮಾಡಿಕೊಂಡ ವ್ಯವಸ್ಥೆಯನ್ನೇ ಆಧರಿಸಿದ್ದು ಮೆಕಾಲೆಯನ್ನು ಈ ಎಲ್ಲ ಪಿಡುಗುಗಳ ಮೂಲಪುರುಷನೆಂದು ಗುರುತಿಸಲಾಗಿದೆ. ಸಾರ್ವತ್ರಿಕ ಶಿಕ್ಷಣಪದ್ಧತಿಗೆ, ಶಿಕ್ಷಣಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕೆ ಇದರಿಂದಾದ ಒಳಿತನ್ನು ಕಡೆಗಣಿಸಲು ಸಾಧ್ಯವಿಲ್ಲ, ಅದು ಬೇರೆ ಮಾತು. ಇಂತಹ ಒಂದು ಪದ್ಧತಿಯ ಹಿನ್ನೆಲೆಯಲ್ಲಿ, ಪರಿಸರದಲ್ಲಿ, ಶತಮಾನಗಳ ಕಾಲ ಬೆಳೆದುಬಂದ ನಾವು ಹೀಗೆ ಯೋಚಿಸುವುದು ಸಹಜ, ಕಾಲದ ಅಗತ್ಯತೆ ಅದನ್ನೇ ಬೇಡುತ್ತದೆ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಬಾಳಿ ಬದುಕಲು ಮಗುವಿಗೆ ಹೀಗೆಯೇ ತರಬೇತಿ ನೀಡಬೇಕಾಗುತ್ತದೆ, ಎಂಬೆಲ್ಲ ವಾದಸರಣಿಗಳ ನಡುವೆಯೂ ಒಮ್ಮೆ ಯೋಚಿಸಿದರೆ ಮನುಕುಲ ಹಿಡಿದ ದಾರಿಯ ಭಯಾನಕ ಆಯಾಮದ ಪರಿಚಯವಾಗುತ್ತದೆ.

ಇದರ ಪರಿಣಾಮದ ಕುರಿತು ಅರಿವು, ಜಾಗೃತಿ ಹುಟ್ಟಿಕೊಂಡ ಹಿನ್ನೆಲೆಯಲ್ಲಿ ಅದೆಷ್ಟೇ ಸಣ್ಣ ಪ್ರಮಾಣದಲ್ಲಿಯಾದರೂ ಸರಿ, ಪರಿಸ್ಥಿತಿ ಬದಲಾಗುತ್ತಿದೆ, ಬದಲಾಗುತ್ತದೆ, ಆ ದಿಸೆಯಲ್ಲಿ ಪ್ರಯತ್ನಗಳಾಗುತ್ತಿವೆ ಎಂಬುದೊಂದು ಆಶಾದಾಯಕ ಸಂಗತಿ.

ಕೆಲವೊಮ್ಮೆ ಅತಿಚಿಕ್ಕ ವಯಸ್ಸಿನ ಮಗುವೊಂದು ಅಸಾಧಾರಣ ಮಟ್ಟದ ಪ್ರತಿಭೆ ಅಥವಾ ಸಾಮರ್ಥ್ಯದ ಲಕ್ಷಣಗಳನ್ನು ತೋರಿಸಬಹುದು. ಅದನ್ನು ಗುರುತಿಸಿ, ಪೋಷಿಸಿ, ಅಗಾಧ ಪ್ರಮಾಣದ ಪ್ರಚಾರ ಒದಗಿಸಿ, ಮಗುವಿನ, ಪೋಷಕರ ತಲೆ ಗಿರ್ರೆನ್ನುವ ಮಟ್ಟಕ್ಕೆ ಖ್ಯಾತಿಯ ರುಚಿಯನ್ನು ಹತ್ತಿಸುವಲ್ಲಿ ಮಾಧ್ಯಮಗಳ ಪಾತ್ರ ಕಡಿಮೆಯದಲ್ಲ. ಈಗಂತೂ ಬೆರಳತುದಿಯಲ್ಲಿ ಲಭ್ಯವಿರುವ ‘ಸೋಷಿಯಲ್‌ ಮೀಡಿಯಾ’ಗಳು ನೀಡುವ ವ್ಯಾಪಕ ಅವಕಾಶಗಳ ವ್ಯಾಮೋಹಕ್ಕೆ ಸುಲಭವಾಗಿ ಸಿಲುಕಿಕೊಳ್ಳುವ ಸಾಧ್ಯತೆಯೇ ಹೆಚ್ಚು. ಮಗುವಿಗೆ ಉತ್ತೇಜನ ಸಿಗಬಾರದೆಂದಲ್ಲ, ಆದರೆ ಅದು ಆ ಸೀಮಿತ ಚಟುವಟಿಕೆಗೆ ಮೀಸಲಾಗುವುದರ ಮೂಲಕ ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಮಾರಕವಾಗದಿರಲಿ ಎನ್ನುವುದು ಆಶಯ. ಮಗುವಿಗೆ ದುಬಾರಿ ಸೌಲಭ್ಯ, ತರಬೇತಿಗಳನ್ನು ನೀಡುವುದಕ್ಕಾಗಿ ಪೋಷಕರ ಕಣ್ಣು ನೀರಾಗದಿರಲಿ ಎನ್ನುವುದು ಕಳಕಳಿ. ಮಗುವಿಗೆ ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ವಿಶೇಷ ಒಲವು, ಆಸಕ್ತಿ ಇದೆ ಎಂದಾದರೆ ಅದನ್ನು ಗುರುತಿಸಿ, ಪೋಷಿಸಿ, ಬೆಳೆಸುವುದರಲ್ಲಿ ಪೋಷಕರು ವಹಿಸಬೇಕಾದ ಕಾಳಜಿ ಅತ್ಯಂತ ಮಹತ್ವಪೂರ್ಣವಾದುದು. ಆದರೆ, ಈ ಆಸಕ್ತಿ, ಅಭಿರುಚಿ ಮಗುವಿಗೆ ಜೀವನಪರ್ಯಂತ ಉಳಿಯುವಂತೆ, ಆ ಮೂಲಕ ಮಗುವಿನ ವ್ಯಕ್ತಿತ್ವವು ಸಂಪೂರ್ಣವಾಗಿ ವಿಕಸಿಸುವಂತೆ ನೋಡಿಕೊಳ್ಳುವುದೂ ಅಷ್ಟೇ ಅತ್ಯಗತ್ಯ. ‘ಚೈಲ್ಡ್‌ ಪ್ರಾಡಿಜಿ’ ಎಂದು ಖ್ಯಾತಿ ಪಡೆದವರೆಲ್ಲ ಆನಂತರ ಏನಾಗುತ್ತಾರೆ, ಅವರ ಮನೋದೈಹಿಕ ಬೆಳವಣಿಗೆಗಳು ಅಪೇಕ್ಷಿತ ನಿಟ್ಟಿನಲ್ಲಿಯೇ ಸಾಗುತ್ತಿವೆಯೇ ಎಂದು ನಾವೆಂದಾದರೂ ಯೋಚಿಸಿದ್ದೇವೆಯೇ? ಒಮ್ಮೆ, ಅತ್ಯಧಿಕ ಗಮನ, ಪ್ರಚಾರ ಎಲ್ಲವನ್ನು ಪಡೆಯುವ ಮಗು ನಿಜಕ್ಕೂ ಅದನ್ನು ನಿಭಾಯಿಸುವ ಮಾನಸಿಕ ಸ್ಥಿತಿಯನ್ನು ಹೊಂದಿರಬಲ್ಲದೇ? ನಿರಂತರವಾಗಿ ಅದನ್ನು ನಿರ್ವಹಿಸಿಕೊಂಡು ಹೋಗುವಲ್ಲಿ ಅದರ ಮೇಲಿರುವ ಒತ್ತಡ ಹೇಳಿಕೊಳ್ಳಲಾಗದ ಅನುಭವಿಸಲೂ ಆಗದ ಅದೆಷ್ಟೋ ತೊಂದರೆ, ನೋವುಗಳನ್ನು ತಂದಿಡಬಹುದು. ಪ್ರಯಾಣ, ಚಿತ್ರೀಕರಣ, ಕಾರ್ಯಕ್ರಮಗಳು, ಗೌರವ, ಸನ್ಮಾನ ಸಭೆ ಸಮಾರಂಭಗಳು ಮಗುವಿನ ಶೈಕ್ಷಣಿಕ ಪ್ರಗತಿಯನ್ನು ಕುಂಠಿತಗೊಳಿಸಬಹುದು. ಪ್ರತಿಭಾವಂತ ಮಕ್ಕಳು ಕೇವಲ ಒಂದೇ ಕ್ಷೇತ್ರದಲ್ಲಲ್ಲ ಎಲ್ಲದರಲ್ಲಿಯೂ ಮುಂದಿರುತ್ತಾರೆ ಎನ್ನುವ ವಾದ ಇದೆ, ಇದು ಎಷ್ಟರ ಮಟ್ಟಿಗೆ ನಿಜ?, ಇದರಲ್ಲಿ ಪೋಷಕರ, ಶಿಕ್ಷಕರ, ಸಮಾನ ವಯಸ್ಕರ, ಗೆಳೆಯ-ಗೆಳತಿಯರ ಒತ್ತಡದ ಪಾಲೆಷ್ಟು? ಮಗುವಿನ ಸ್ವಯಂನಿರೀಕ್ಷೆಯ ಪಾಲೇನು? ಬಹಳಷ್ಟು ಸಂದರ್ಭಗಳಲ್ಲಿ ಇದೆಲ್ಲದರಿಂದಾಗಿ ಮಗುವಿನ ಆ ಮೂಲಕ ಹೆತ್ತವರ ಮಾನಸಿಕ ಸ್ವಾಸ್ಥ್ಯ ಹದಗೆಡುವ ಸಾಧ್ಯತೆಗಳೂ ಇಲ್ಲದಿಲ್ಲ.

ಸರ್ಕಾರದ ಶೈಕ್ಷಣಿಕ ನೀತಿನಿಯಮಗಳನ್ನು, ಶಿಕ್ಷಣವ್ಯವಸ್ಥೆಯನ್ನು, ಶಿಕ್ಷಣತಜ್ಞರನ್ನು ಸದಾ ದೂರುತ್ತಲೇ ಇರುವ ನಾವು, ಯಾವ ಒಂದು ವ್ಯವಸ್ಥೆಯೂ ರಾತ್ರಿ ಬೆಳಗಾಗುವುದರೊಳಗೆ ಬದಲಾಗಲು ಸಾಧ್ಯವಿಲ್ಲ ಎಂಬುದನ್ನು ತಿಳಿದಿರುವ ಸುಶಿಕ್ಷಿತರು ಎಂದೆನ್ನಿಸಿಕೊಂಡ ನಾವೇ ತಪ್ಪು ದಿಸೆಯಲ್ಲಿ ಹೆಜ್ಜೆಗಳನ್ನಿಡತೊಡಗಿದರೆ, ಮುಂದಿನ ತಲೆಮಾರನ್ನು ದಾರಿ ತಪ್ಪಿಸುವ ನಿಟ್ಟಿನಲ್ಲಿ ಆಲೋಚಿಸತೊಡಗಿದರೆ, ಆಗುವ ನಷ್ಟದ ಸ್ವರೂಪ ಬಹಳ ಗಂಭೀರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT